ಎಸ್ಎಸ್ಎಲ್ಸಿ ಫೇಲ್ ಆಗಿರಬಹುದು, ಸೋಲಬೇಡ ಎಂದು ಕೇಕ್ ತಿನ್ನಿಸಿದರು ಅಪ್ಪ, ಅಮ್ಮ; ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ
ಎಸ್ಎಸ್ಎಲ್ಸಿ ಫಲಿತಾಂಶ 2025: ಎಸ್ಎಸ್ಎಲ್ಸಿ ಪರೀಕ್ಷೆಯ 6ಕ್ಕೆ 6 ವಿಷಯಗಳಲ್ಲಿ ಫೇಲ್ ಆದರೂ ಕೇಕ್ ತಿನ್ನಿಸಿ ಸಂಭ್ರಮಿಸಿದ ಅಪ್ಪ, ಅಮ್ಮ ಹಾಗೂ ಅವರ ಮಗನ ಸುದ್ದಿ ದೇಶದ ಗಮನಸೆಳೆದಿದೆ. ಬಾಗಲಕೋಟೆ ನವನಗರದ ಅಭಿಷೇಕ್ ಎಲ್ಲರಂತಲ್ಲ. ಅಲ್ಲಿ ನೋವು ಇದೆ, ಬದುಕಿನ ಹೋರಾಟ ಇದೆ.

ಎಸ್ಎಸ್ಎಲ್ಸಿ ಫಲಿತಾಂಶ: ಕಳೆದ ಮೂರು ದಿನಗಳಿಂದ ಬಾಗಲಕೋಟೆ ನವನಗರದ ವಿದ್ಯಾರ್ಥಿಯೊಬ್ಬ 6ಕ್ಕೆ 6 ವಿಷಯದಲ್ಲಿ ಫೇಲ್ ಆಗಿದ್ದರೂ ಅಪ್ಪ, ಅಮ್ಮ ಆತನಿಗೆ ಕೇಕ್ ತಿನ್ನಿಸಿ, ಪ್ರಯತ್ನ ಕೈಬಿಡಬೇಡ, ಮತ್ತೆ ಪರೀಕ್ಷೆ ಬರೆದು ಪಾಸ್ ಆಗು ಎಂದು ಧೈರ್ಯ ತುಂಬಿದ ವಿಚಾರ ವೈರಲ್ ಆಗಿದೆ. ಭಾರತದ ಉದ್ದಗಲಕ್ಕೂ ಇದು ಚರ್ಚೆಗೆ ಗ್ರಾಸವಾಗಿದೆ. ಅಪ್ಪ-ಅಮ್ಮನ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಎಲ್ಲರ ಗಮನವೂ ಅವರತ್ತ ನೆಟ್ಟಿದೆ. ಬಾಲಕನ ಹೆಸರು ಅಭಿಷೇಕ್. ಈತ ಬಾಗಲಕೋಟೆಯ ಛಾಯಾಗ್ರಾಹಕ ಯಲ್ಲಪ್ಪ ಚೊಳಚಗುಡ್ಡ ಅವರ ಪುತ್ರ. ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್ನಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿ.
ಬಾಗಲಕೋಟೆ ನವಗರದ ಅಭಿಷೇಕ್ಗೆ ಧೈರ್ಯ ತುಂಬಿದ ಅಪ್ಪ-ಅಮ್ಮ
ಅಭಿಷೇಕ್ ಈ ವಿದ್ಯಮಾನದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ, “ಎಸ್ಎಸ್ಎಲ್ಸಿ ಫೇಲ್ ಆಗಿರಬಹುದು, ಸೋಲಬೇಡ ಎಂದು ಕೇಕ್ ತಿನ್ನಿಸಿದರು ಅಪ್ಪ, ಅಮ್ಮ” ಎಂದು ಹೇಳಿದ್ದ. ಈ ಮಾತುಗಳು ನಿಜಕ್ಕೂ ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಸುದ್ದಿ ನೋಡಿದ ಕೆಲವರಿಗಾದರೂ ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಚಿತ್ರದ ‘ಅರಳುವ ಹೂವುಗಳೆ ಆಲಿಸಿರಿ’ ಹಾಡು ನೆನಪಾಗಿಯೇ ಆಗಿರುತ್ತದೆ.
"ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ, ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳ್ಹಿಂದೆ ಬೆಳಕುಂಟು ತೋರಿಸಿರಿ, ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ, ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು… ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ, ಮನವೇ ಓ ಮನವೇ ನೀ ಬದಲಾಗು, ಏನೇ ಸಾಧನೆಗೂ ನೀ ಮೊದಲಾಗು" ಎಂಬ ಹಾಡಿನ ಸಾಹಿತ್ಯದ ಸಾಲುಗಳು ಅಭಿಷೇಕ್ನ ಅಪ್ಪ-ಅಮ್ಮನ ನಡೆ ಗಮನಿಸಿದ್ದು, ಮೈ ಆಟೋಗ್ರಾಫ್ ಹಾಡು ಕೇಳಿದ್ದವರಿಗೆ ಖಚಿತವಾಗಿ ನೆನಪಾಗಬಹುದು.
ಎಸ್ಎಸ್ಎಲ್ಸಿ ಪರೀಕ್ಷೆ ಫೇಲ್ ಆಗಿದ್ದಕ್ಕೆ ಕುಗ್ಗಿ ಕುಳಿತಿದ್ದ ಅಭಿಷೇಕ್
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 6ಕ್ಕೆ 6 ವಿಷಯಗಳಲ್ಲಿ ಫೇಲ್ ಆದ ಕಾರಣ ಮನಸ್ಸು ಭಾರವಾಗಿ ಕುಗ್ಗಿ ಕುಳಿದ್ದ ಅಭಿಷೇಕ್. 625ಕ್ಕೆ 200 ಮಾರ್ಕ್ ಅಷ್ಟೇ ಬಂದಿದೆ. ಅಭಿಷೇಕ್ ಮನಸ್ಥಿತಿ ಹಗುರ ಮಾಡುವುದಕ್ಕಾಗಿ ಪರೀಕ್ಷೆಯಲ್ಲಿ ಫೇಲ್ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್ ಕಟ್ ಮಾಡಿ ಆತನಿಗೆ ತಿನ್ನಿಸಿ ಸಂಭ್ರಮಿಸಿದ್ದಾರೆ. ಬಳಿಕ ಆತನನ್ನು ಮುದ್ದಾಡಿ, ಪರೀಕ್ಷೆ ಒಂದೇ ಜೀವನವಲ್ಲ. ಮರಳಿ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ತಂದೆ ಯಲ್ಲಪ್ಪ ಚೊಳಚಗುಡ್ಡ ಧೈರ್ಯ ತುಂಬಿದ್ದಾರೆ. ಇದು ಕೆಲಸ ಮಾಡಿದೆ. ಅಭಿಷೇಕ್ ಚೇತರಿಸಿಕೊಂಡಿದ್ದು, “ಎಸ್ಎಸ್ಎಲ್ಸಿ ಫೇಲ್ ಆಗಿರಬಹುದು, ಸೋಲಬೇಡ ಎಂದು ಕೇಕ್ ತಿನ್ನಿಸಿದರು ಅಪ್ಪ, ಅಮ್ಮ” ಎಂದು ಮಾಧ್ಯಮದವರ ಜತೆಗೆ ಮಾತನಾಡುತ್ತ ಹೇಳಿದ್ದ.
ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ
ಬಾಗಲಕೋಟೆ ನವನಗರದ ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ ಎಂಬುದು ಎಲ್ಲರ ಗಮನಸೆಳೆದಿದೆ. ಅಭಿಷೇಕ್ ಅವರ ಅಪ್ಪ, ಅಮ್ಮ ಈ ವಿಚಾರವನ್ನು ಮಾಧ್ಯಮ ಸ್ನೇಹಿತರ ಜತೆಗೆ ಹಂಚಿಕೊಂಡಿದ್ದಾರೆ. ಅಭಿಷೇಕ್ಗೆ 15 ತಿಂಗಳ ಆಗಿರುವಾಗ ಎರಡು ಪಾದ ಸುಟ್ಟುಹೋಗಿದ್ದವು. ಆಗ ಆದ ಆಘಾತಕ್ಕೆ ಅಭಿಷೇಕ್ನ ನೆನಪಿನ ಶಕ್ತಿಗೆ ಏಟುಬಿದ್ದಿದೆ. ಹೀಗಾಗಿ ಶಿಕ್ಷಣ ಪಡೆಯುತ್ತಿದ್ದರೂ, ಉತ್ತರ ನೆನಪಿಟ್ಟುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಆದರೂ ಛಲಬಿಡದೆ ಪ್ರಯತ್ನಿಸಿ 200 ಮಾರ್ಕ್ ಪಡೆದುಕೊಂಡಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.