ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾಗೆ ಕಂಪೆನಿ ಸೆಕ್ರೆಟರಿ ಆಗುವಾಸೆ; ಬೆಂಗಳೂರು ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿಯ ಯಶೋಗಾಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾಗೆ ಕಂಪೆನಿ ಸೆಕ್ರೆಟರಿ ಆಗುವಾಸೆ; ಬೆಂಗಳೂರು ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿಯ ಯಶೋಗಾಥೆ

ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾಗೆ ಕಂಪೆನಿ ಸೆಕ್ರೆಟರಿ ಆಗುವಾಸೆ; ಬೆಂಗಳೂರು ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿಯ ಯಶೋಗಾಥೆ

ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿ ನಮಿತಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸಂದರ್ಶನದಲ್ಲಿ ಇವರ ಯಶೋಗಾಥೆಯನ್ನು ತಿಳಿಯೋಣ ಬನ್ನಿ.

ಯಶೋಗಾಥೆ: ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾಗೆ ಕಂಪೆನಿ ಸೆಕ್ರೆಟರಿ ಆಗುವಾಸೆ
ಯಶೋಗಾಥೆ: ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾಗೆ ಕಂಪೆನಿ ಸೆಕ್ರೆಟರಿ ಆಗುವಾಸೆ

ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿ ನಮಿತಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಔಟ್‌ ಆಫ್‌ ಔಟ್‌ ಅಂಕ ಪಡೆಯಲು ಈಕೆಯ ಓದಿನ ಕ್ರಮ ಹೇಗಿತ್ತು? ಈಕೆಯ ಯಶಸ್ಸಿನ ಗುಟ್ಟೇನು? ಇತ್ಯಾದಿ ಹಲವು ವಿಚಾರಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟೈಂಟೇಬಲ್‌ ಹಾಕಿಕೊಂಡು ಓದಿಲ್ಲ

"ಪ್ರತಿನಿತ್ಯ ಟೈಂಟೇಬಲ್‌ ಹಾಕಿಕೊಂಡು ಓದುವ ಅಭ್ಯಾಸ ಹೊಂದಿಲ್ಲ. ಆದರೆ, ಪ್ರತಿದಿನ ಎರಡು ಗಂಟೆ ಓದುವ ಅಭ್ಯಾಸವನ್ನು ಹತ್ತನೇ ತರಗತಿ ಆರಂಭದಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ಯಾವಾಗ ಸಮಯ ಸಿಗುತ್ತದೆಯೋ ಅವಾಗ ಓದುತ್ತಿದ್ದೆ. ದಿನ ಒಂದರಿಂದ ನಾನು ಪ್ರಿಪೇರ್‌ ಆಗುತ್ತಾ ಬಂದಿರುವುದಕ್ಕೆ ನನಗೆ ಪರೀಕ್ಷೆ ಸಮಯದಲ್ಲಿ ಯಾವುದೇ ಹೊರೆ, ಬರ್ಡನ್‌ ಆಗಲಿಲ್ಲ" ಎಂದು ನಮಿತಾ ಹೇಳಿದ್ದಾರೆ.

"ನಾನು ಎಲ್ಲಾ ವಿಷಯಗಳ ಎಲ್ಲಾ ಕಾನ್ಸೆಪ್ಟ್‌ಗಳನ್ನು ಅರ್ಥಮಾಡಿಕೊಂಡು ಓದುತ್ತಿದ್ದೆ. ಯಾವುದೇ ವಿಷಯವನ್ನು ಬೈಹರ್ಟ್‌ ಅಥವಾ ಕಂಠಪಾಠ ಮಾಡಿಲ್ಲ. ಶಾಲೆಯಲ್ಲಿ ಪ್ರತಿದಿನ ಏನು ಪಾಠ ಮಾಡುತ್ತಾರೋ ಅದನ್ನು ಅರ್ಥಮಾಡಿಕೊಳ್ಳುತ್ತಿದ್ದೆ. ಮನೆಗೆ ಬಂದು ಅದನ್ನೇ ಓದುತ್ತಿದ್ದೆ. ನಾನು ಹೆಚ್ಚು ಪಠ್ಯ ಪುಸ್ತಕವನ್ನೇ ಓದಿದ್ದೇನೆ. ಗೈಡ್‌ ಯಾವುದನ್ನೂ ರೆಫರ್‌ ಮಾಡಿಲ್ಲ. ಟ್ಯೂಷನ್‌ಗೆ ಹೋಗಿದ್ದೇನೆ. ಆರಂಭದಿಂದಲೇ ಟ್ಯೂಷನ್‌ ಪಡೆಯುತ್ತಿದ್ದೆ. ಬೆಳಗ್ಗೆ 5.30 ಗಂಟೆಯಿಂದ 7.30 ಗಂಟೆಯವರೆಗೆ ಓದುತ್ತಿದ್ದೆ" ಎಂದು ನಮಿತಾ ಹೇಳಿದ್ದಾರೆ.

"ನಮ್ಮ ಹತ್ತನೇ ತರಗತಿ ಸಿಲೇಬಸ್‌ ಬೇಗ ಮುಗಿಸಿದ್ದರು. ಸುಮಾರು ಆರೇಳು ಬಾರಿ ರಿವಿಷನ್‌ ಮಾಡಲು ಅವಕಾಶ ದೊರಕಿತು. ಶಾಲೆಯಲ್ಲಿ ಹೆಚ್ಚು ರಿವಿಷನ್‌ ಮಾಡಿಸಿದ್ದಕ್ಕೆ ನನಗೆ ಎಕ್ಸಾಂ ಉತ್ತಮವಾಗಿ ಬರೆಯಲು ಸಹಾಯವಾಯಿತು. ಮಾತಾ ನ್ಯಾಷನಲ್‌ ಹೈಸ್ಕೂಲ್‌ನ ಟೀಚರ್ಸ್‌ ಸಪೋರ್ಟ್‌ ಉತ್ತಮವಾಗಿತ್ತು. ನಾನು ಡಿಮೋಟಿವೇಟ್‌ ಆದ್ರೆ - ನಿನ್ನಿಂದ ಆಗುತ್ತೆ, ಮಾಡುʼ ಎಂದು ಸ್ಪೂರ್ತಿ ತುಂಬುತ್ತಿದ್ದರು. ಏನು ಡೌಟ್‌ ಇದ್ರೂ, ಎಷ್ಟು ಬಾರಿ ಕೇಳಿದ್ರೂ ಪ್ರೀತಿಯಿಂದ ಸಾವಧಾನವಾಗಿ ಹೇಳಿಕೊಡುತ್ತಿದ್ದರು. ಇದು ಕೂಡ ನನ್ನ ಯಶಸ್ಸಿಗೆ ಕಾರಣವಾಯಿತು" ಎಂದರು.

"ಮನೆಯಲ್ಲಿಯೂ ನನಗೆ ಪರೀಕ್ಷೆ ಉತ್ತಮವಾಗಿ ಬರೆಯಲು ಹೆತ್ತವರ ಭಾವನಾತ್ಮಕ ಬೆಂಬಲ ಕಾರಣವಾಯಿತು. ನನಗೆ ಎಂದಿಗೂ ಓದು ಓದು ಎಂದು ಒತ್ತಡ ಹಾಕಲಿಲ್ಲ. ನಿನ್ನ ಕೈಯಲ್ಲಿ ಎಷ್ಟಾಗುತ್ತೆ ಅಷ್ಟು ಮಾಡು ಎನ್ನುತ್ತಿದ್ದರು" ಎಂದು ತಂದೆ ಬಸವಂತ ರಾವ್‌ ಮತ್ತು ಅಮ್ಮ ಸೀಮಾ ಎಲ್‌ಬಿ ಬೆಂಬಲವನ್ನೂ ನಮಿತಾ ನೆನಪಿಸಿಕೊಂಡರು. ಇವರ ತಾಯಿ ಸೀಮಾ ಎಲ್‌ಬಿ ಅವರು ಅಸಿಸ್ಟೆಂಟ್‌ ಟೀಚರ್‌ ಮತ್ತು ತಂದೆ ಬೆಸ್ಕಾಂನಲ್ಲಿ ಜೆಇ ಆಗಿದ್ದಾರೆ.

ತಂದೆ ಬಸವಂತ ರಾವ್‌ ಮತ್ತು ಅಮ್ಮ ಸೀಮಾ ಎಲ್‌ಬಿ ಹಾಗೂ ಸಹೋದರನ ಜತೆ ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾ
ತಂದೆ ಬಸವಂತ ರಾವ್‌ ಮತ್ತು ಅಮ್ಮ ಸೀಮಾ ಎಲ್‌ಬಿ ಹಾಗೂ ಸಹೋದರನ ಜತೆ ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾ

"ಶಾಲೆಯಲ್ಲಿ ಸಾಕಷ್ಟು ಬಾರಿ ಮಾಕ್‌ ಟೆಸ್ಟ್‌ ಮಾಡಿಸಿದ್ರು. ಟೆಸ್ಟ್‌ ಪರೀಕ್ಷೆ ಬರೆಸಿದ್ರು. ಹಲವು ಬಾರಿ ಪ್ರಿಪರೇಟರಿ ಬರೆಸಿದ್ರು. ಇವೆಲ್ಲ ನನಗೆ ಪರೀಕ್ಷೆಯಲ್ಲಿ ಟಾಪರ್‌ ಆಗಲು ನೆರವಾಯಿತು. ನನಗೆ 625ಕ್ಕೆ 625 ಅಂಕ ಪಡೆಯುವ ಕುರಿತು ನಿರೀಕ್ಷೆ ಇತ್ತು. ಎಲ್ಲೋ ಒಂದೆರಡು ಅಂಕ ಕಡಿಮೆಯಾಗಬಹುದೋ ಎಂಬ ಆತಂಕವೂ ಇತ್ತು. ನಾನು ಎಲ್ಲವನ್ನೂ ಸರಿಯಾಗಿಯೇ ಬರೆದಿದ್ದೆ. ಆದರೂ ಮನಸ್ಸಿನಲ್ಲಿ ಭಯ ಇತ್ತು. ಆದರೆ, ಔಟ್‌ ಆಫ್‌ ಔಟ್‌ ಅಂಕ ಬಂದಾಗ ಖುಷಿಯಾಯ್ತು" ಎಂದರು.

"ಪರೀಕ್ಷೆ ಹತ್ತಿರವಿದ್ದಾಗ ರಿವಿಷನ್‌ ಮಾಡುತ್ತ ಇದ್ದೆ. ಆರಂಭದಿಂದಲೇ ಓದುತ್ತಾ ಇದ್ದರಿಂದ ನನಗೆ ಕೊನೆಯ ಕ್ಷಣದಲ್ಲಿ ಯಾವುದೇ ಒತ್ತಡ ಇರಲಿಲ್ಲ. ನಾನು ಯೂಟ್ಯೂಬ್‌, ಗೂಗಲ್‌ ಇತ್ಯಾದಿಗಳನ್ನು ಕಲಿಕೆಗೆ ಬಳಸಿಲ್ಲ. ಏಕೆಂದರೆ, ಓದಿನ ವಿಷಯದಲ್ಲಿ ಏನೇ ಸಂದೇಹವಿದ್ದರೂ ಶಾಲೆಯಲ್ಲಿ ಟೀಚರ್ಸ್‌ ಕ್ಲಿಯರ್‌ ಮಾಡುತ್ತಿದ್ದರು" ಎಂದು ನಮಿತಾ ತನ್ನ ಓದಿನ ಕ್ರಮದ ಕುರಿತು ವಿವರಿಸಿದ್ದಾರೆ.

ಕಂಪೆನಿ ಸೆಕ್ರೆಟರಿ ಆಗುವಾಸೆ

ಭವಿಷ್ಯದಲ್ಲಿ ಕಾಮರ್ಸ್‌ ಓದಿ ಕಂಪೆನಿ ಸೆಕ್ರೆಟರಿ ಆಗಬೇಕೆಂದುಕೊಂಡಿದ್ದೇನೆ. ಇದು ಮುಂಚಿನಿಂದಲೂ ಇದ್ದ ಕನಸು. ಎಲ್ಲರೂ ಡಾಕ್ಟರ್‌, ಎಂಜಿನಿಯರ್‌, ಸಿಎ ಆಗಲು ಬಯಸುತ್ತಾರೆ. ಆದರೆ, ನನ್ನಲ್ಲಿ ಮೊದಲಿನಿಂದಲೂ ಕಂಪೆನಿ ಸೆಕ್ರೆಟರಿಯಾಗಬೇಕೆಂಬ ಆಸೆ ಇದೆ. ಇದಕ್ಕೆ ತಕ್ಕಂತೆ ಓದು ಮುಂದುವರೆಸುವೆ" ಎಂದು ತನ್ನ ಭವಿಷ್ಯದ ಕನಸನ್ನು ಹಂಚಿಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಟಿಪ್ಸ್‌

ಪರೀಕ್ಷೆ ಬರೆಯಬೇಕಲ್ವ ಎಂದು ಮನಸ್ಸಿಲ್ಲದೆ ಓದಬಾರದು. ಪರೀಕ್ಷೆಗೆ ಓದುವುದು ಎಂದು ಮನಸ್ಸಿಗೆ ಒತ್ತಡ ಹಾಕಬಾರದು. ಓದುವುದನ್ನು ಎಂಜಾಯ್‌ ಮಾಡಬೇಕು. ಅರ್ಥ ಮಾಡಿಕೊಂಡು ಓದಿದರೆ ಹೆಚ್ಚು ಸಮಯ ನೆನಪಿನಲ್ಲಿ ಉಳಿಯುತ್ತದೆ. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದುವುದು ಮುಖ್ಯವಾಗಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in