ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಬಿಸಿಲು, ಮೈಸೂರು-ದಾವಣಗೆರೆಯಲ್ಲಿ ಚಳಿ, ಇನ್ನೆಷ್ಟು ದಿನ ಹೀಗೆ
Karnataka Weather: ಬೆಂಗಳೂರಿನಲ್ಲಿ ಬಿಸಿಲು, ಮೈಸೂರು-ದಾವಣಗೆರೆಯಲ್ಲಿ ಚಳಿ ಕಾಡುತ್ತಿದೆ. ಚಳಿಗಾಲ ಮುಗಿಯುವ ಮೊದಲೇ ಸುಡು ಬಿಸಿಲಿನ ಬೇಸಿಗೆ ಅನುಭವ ಇನ್ನೆಷ್ಟು ದಿನ ಹೀಗೆ, ಕರ್ನಾಟಕ ಹವಾಮಾನ ವಿವರ ಇಲ್ಲಿದೆ.

Karnataka Weather: ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಸರಿಯಾಗಿ ಅನುಭವಕ್ಕೆ ಬರುತ್ತಿದ್ದು, ಸದ್ಯ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಇಂದು (ಫೆ 6) ಕೂಡ ಬೆಂಗಳೂರಿಗರಿಗೆ ಸುಡು ಬಿಸಿಲಿನ ಅನುಭವ ಅನಿವಾರ್ಯ. ಇದೇ ವೇಳೆ, ದಾವಣಗೆರೆ, ಮೈಸೂರು ಮುಂತಾದೆಡೆ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಶಿಯಸ್ಗೆ ಇಳಿದು ಚಳಿಯ ಅನುಭವ ಕೊಟ್ಟಿದೆ. ಭಾರತದ ಹವಾಮಾನ ಇಲಾಖೆಯ ಪ್ರಕಾರ ಕರ್ನಾಟಕದ ಉದ್ದಗಲಕ್ಕೂ ಒಣಹವೆ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು, ಇನ್ನು ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಂಜು ಕಾಡಬಹುದು. ಬಹುಶಃ ಮುಂದಿನ ವಾರದ ತನಕವೂ ಬೆಂಗಳೂರಿಗರನ್ನು ಸುಡು ಬಿಸಿಲು ಕಾಡಲಿದೆ.
ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಳ, ಇನ್ನೊಂದು ವಾರ ಇದೇ ಪರಿಸ್ಥಿತಿ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಕಡೆ ಇಂದು (ಫೆ 6) ಮುಂಜಾನೆ ಮಂಜು ಕಾಡಲಿದೆ. ಉಳಿದಂತೆ ಹಗಲು ಹೊತ್ತು ಸುಡು ಬಿಸಿಲು ಅನುಭವಕ್ಕೆ ಬರಲಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು.
ನಿನ್ನೆ (ಫೆ.5) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 16.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಗರಿಷ್ಠ ತಾಪಮಾನ ವಾಡಿಕೆ ತಾಪಮಾನಕ್ಕಿಂತ 2.5 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿರುವ ಕಾರಣ, ನೀರಡಿಕೆ, ಆಯಾಸ ಹಲವರನ್ನು ಕಾಡಿದೆ. ಕಲ್ಲಂಗಡಿ ಹಣ್ಣು, ಎಳನೀರು ಮುಂತಾದವುಗಳ ಬೇಡಿಕೆ ಹೆಚ್ಚಳವಾಗಿದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ತಾಪಮಾನ
ಕರ್ನಾಟಕದ ಪ್ರಮುಖ ನಗರಗಳಲ್ಲಿ ಫೆ 6 ರಂದು ಬೆಳಗ್ಗೆ 7 ಗಂಟೆಗೆ ತಾಪಮಾನ ಹೀಗಿತ್ತು
ಬೆಂಗಳೂರು ನಗರ - ತಾಪಮಾನ 18 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 85
ಮಂಗಳೂರು - ತಾಪಮಾನ 24 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 85
ಚಿತ್ರದುರ್ಗ - ತಾಪಮಾನ 19.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 82
ಗದಗ - ತಾಪಮಾನ 18.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 62
ಹೊನ್ನಾವರ - ತಾಪಮಾನ 23.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 88
ಕಲಬುರಗಿ - ತಾಪಮಾನ 19.3 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 56
ಬೆಳಗಾವಿ -ತಾಪಮಾನ 25 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 65
ಕಾರವಾರ - ತಾಪಮಾನ 32.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 54
ಕರ್ನಾಟಕ ಹವಾಮಾನ; ಬೇಸಿಗೆ ಶುರು ಯಾವಾಗ
ಕರ್ನಾಟಕ ಹವಾಮಾನ ಪ್ರಕಾರ ಇಂದು (ಫೆ 6) ಒಣಹವೆ ಇರಲಿದೆ. ಗರಿಷ್ಠ ತಾಪಮಾನದಲ್ಲಿ 2 ರಿಂದ 4 ಡಿಗ್ರಿ ಸೆಲ್ಶಿಯಸ್ ತನಕ ಹೆಚ್ಚಳ ಕಾಣಬಹುದು ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ. ವಾಡಿಕೆ ಪ್ರಕಾರ ಶಿವರಾತ್ರಿ ನಂತರ ಬೇಸಿಗೆ ಶುರು. ಈ ಬಾರಿ ಶಿವರಾತ್ರಿ ಫೆ 26ರಂದು ಇದ್ದು, ಅದಾಗಿ ಬೇಸಿಗೆ ಶುರುವಾಗಲಿದೆ. ಆದರೆ, ರಥ ಸಪ್ತಮಿ (ಫೆ.4) ದಿನವೇ ಬಿಸಿಲಿನ ಝಳ ಹೆಚ್ಚಳವಾಗಿದ್ದು, ಬೇಸಿಗೆ ಮೊದಲೇ ಶುರುವಾದ ಅನುಭವ ನೀಡಿದೆ. ಹವಾಮಾನ ತಜ್ಞರ ಪ್ರಕಾರ, ಮಾರ್ಚ್ 1 ರಿಂದ ಸರಿಯಾದ ಬೇಸಿಗೆ ಶುರುವಾಗಲಿದೆ. ಈಗಿರುವ ಸುಡು ಬಿಸಿಲಿನ ವಾತಾವರಣ ಇನ್ನೊಂದು ವಾರ ಮುಂದುವರಿಯಲಿದೆ. ವಾತಾವರಣ ಗಾಳಿ ಚಲನೆ ಇಲ್ಲದ ಕಾರಣ ಶುಷ್ಕವಾಗಿದೆ. ಮುಂಜಾನೆ 4 ರಿಂದ ಬೆಳಗ್ಗೆ 7 ಗಂಟೆ ತನಕ ಕೆಲವು ಕಡೆ ಚಳಿ ಇರಬಹುದು ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
