ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್
ಕರ್ನಾಟಕ ಹವಾಮಾನ: ಮೈಸೂರು, ಹಾಸನ, ಕೊಡಗು ಸೇರಿ 10 ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಬಹುದು. ಇನ್ನೊಂದೆಡೆ ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ 7 ತಾಲೂಕುಗಳಲ್ಲಿ ಸುಡುಬಿಸಿಲು ಅನುಭವಕ್ಕೆ ಬರಲಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಕರ್ನಾಟಕದ ಹವಾಮಾನ ವಿವರ ಹೀಗಿದೆ.

ಕರ್ನಾಟಕ ಹವಾಮಾನ: ಕರ್ನಾಟಕದಲ್ಲಿ ಇಂದು (ಏಪ್ರಿಲ್ 25) ಮೈಸೂರು, ಹಾಸನ, ಕೊಡಗು ಸೇರಿ 10 ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಬಹುದು. ಇನ್ನು ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳ ಪೈಕಿ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಭಾಗದಲ್ಲಿ ಸುಡುಬಿಸಿಲು ಕಾಡಲಿದೆ. ಈ ನಾಲ್ಕು ಜಿಲ್ಲೆಗಳ ಕೆಲವು ತಾಲೂಕು ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ದಾಟುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಬೆಂಗಳೂರು ಹವಾಮಾನ ಇಂದು; ಭಾಗಶಃ ಮೋಡ ಕವಿದ ವಾತಾವರಣ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು (ಏಪ್ರಿಲ್ 25) ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ನಿನ್ನೆ ಬೆಂಗಳೂರು ನಗರ ಭಾಗದಲ್ಲಿ ಗರಿಷ್ಠ ತಾಪಮಾನ 35.4 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 23.8 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಕೆಲವು ಕಡೆಗೆ ಹನಿಮಳೆ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಬಾಗದಲ್ಲಿ ನಿನ್ನೆ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 23.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಬೆಂಗಳೂರಿನ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.
ಕರ್ನಾಟಕ ಹವಾಮಾನ ಇಂದು: ಮೈಸೂರು ಸೇರಿ 10 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ
ಕರಾವಳಿ ಕರ್ನಾಟಕ ಹವಾಮಾನ: ಕರಾವಳಿ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಕಡೆ ಹಗುರವಾಗಿ ಅಥವಾ ಮಧ್ಯಮ ಪ್ರಮಾಣದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಎರಡು ಜಿಲ್ಲೆಗಳಲ್ಲಿ ಅಂದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಇರಬಹುದು.
ಕರ್ನಾಟಕದ ಉತ್ತರ ಒಳನಾಡು ಹವಾಮಾನ: ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆ ಹಗುರದಿಂದ ಮಧ್ಯಮ ಪ್ರಮಾಣದ ಮಳೆಯಾಗಬಹುದು. ಕೆಲವು ಕಡೆಗೆ ಗುಡುಗು, ಗಂಟೆಗೆ 40-50 ಕಿಮೀ ವೇಗದ ಗಾಳಿ ಸಹಿತ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಕರ್ನಾಟಕದ ದಕ್ಷಿಣ ಒಳನಾಡು ಹವಾಮಾನ: ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಒಂದೆರಡು ಕಡೆ ಗುಡುಗು ಸಹಿತ ಹಗುರವಾಗಿ ಅಥವಾ ಮಧ್ಯಮ ಪ್ರಮಾಣದ ಮಳೆಯಾಗಬಹುದು. ಕೆಲವು ಕಡೆಗೆ ಗಂಟೆಗೆ 30- 40 ಕಿಮೀ ವೇಗದ ಬಿರುಗಾಳಿ ಸಹಿತ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ತಿಳಿಸಿದ್ದಾರೆ.
ಏಳು ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್
ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಕೆಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಶಿಯಸ್ ಮೇಲ್ಪಟ್ಟಿದೆಯೋ ಅಲ್ಲೆಲ್ಲ ಯೆಲ್ಲೋ ಅಲರ್ಟ್ ಮತ್ತು 44 ಡಿಗ್ರಿ ಸೆಲ್ಶಿಯಸ್ ಮೇಲ್ಪಟ್ಟ ತಾಪಮಾನ ಇರುವಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೀದರ್ ಜಿಲ್ಲೆಯ ಕಮಲಾನಗರ ತಾಲೂಕು ದಬಕಾ (45 ಡಿಗ್ರಿ ಸೆಲ್ಶಿಯಸ್), ಭಾಲ್ಕಿಯ ಹಲಬುರ್ಗಾ (44.7 ಡಿಗ್ರಿ ಸೆಲ್ಶಿಯಸ್), ಔರಾದ್ನ ಚಿಂತಕಿ (44.8 ಡಿಗ್ರಿ ಸೆಲ್ಶಿಯಸ್), ಕಲಬುರಗಿ ಜಿಲ್ಲೆ ಅಳಂದ ತಾಲೂಕು ನಿಂಬರ್ಗಾ ತಾಂಡ (44.6 ಡಿಗ್ರಿ ಸೆಲ್ಶಿಯಸ್), ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಹಡಗನಹಾಳ (44 ಡಿಗ್ರಿ ಸೆಲ್ಶಿಯಸ್), ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕು ಹಟ್ಟಿಕುಣಿ (44.2 ಡಿಗ್ರಿ ಸೆಲ್ಶಿಯಸ್) ಸುಡುಬಿಸಿಲು ಕಾಡಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿಯಲ್ಲಿ ಎಚ್ಚರಿಸಿದೆ.