ಕರಾವಳಿ, ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಇಂದು ಮಳೆ ಬರುತ್ತಾ, ಉತ್ತರ ಒಳನಾಡಿಗೆ ಮಳೆ ಇಲ್ವ- ಇಲ್ಲಿದೆ ಹವಾಮಾನ ಮುನ್ಸೂಚನೆ ವಿವರ
ಕರಾವಳಿ, ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಇಂದು ಮಳೆ ಬರುತ್ತಾ, ಉತ್ತರ ಒಳನಾಡಿಗೆ ಮಳೆ ಇಲ್ವ ಎಂಬ ಸಹಜ ಕುತೂಹಲ ತಣಿಸುವ ವಿವರ ಇಲ್ಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಶೂಚನೆ ಪ್ರಕಾರ, ಸದ್ಯ ಮಳೆ ಪ್ರಮಾಣ ಇಳಿಕೆಯಾಗಲಿದ್ದು, ಕರ್ನಾಟಕದ ಉತ್ತರ ಒಳನಾಡಿನಲ್ಲಿ ನಾಲ್ಕು ದಿನ ಬಿಟ್ಟು ಮಳೆ ಶುರುವಾಗಲಿದೆ. ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ ನೋಡಿ.

ಬೆಂಗಳೂರು: ವಾಯುಭಾರ ಕುಸಿತ ಮತ್ತು ಚಂಡ ಮಾರುತದ ಪ್ರಭಾವದ ಕಾರಣ ಒಂದು ವಾರ ಕಾಲ ಸತತ ಮಳೆ ಕಂಡ ಬೆಂಗಳೂರು ಸೇರಿ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಇಂದು ಮಳೆ ಬರುತ್ತಾ ಎಂಬ ಕುತೂಹಲ ಸಹಜ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಮರೆಯಾಗಿ ಬಿಸಿಲು ಸುಡತೊಡಗಿದೆ. ಗುರುವಾರದಿಂದ (ಅಕ್ಟೋಬರ್ 24) ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಂಗಳೂರು ಮಳೆಯ ಆವೇಶವೂ ತಗ್ಗಿದೆ. ಅಲ್ಲಲ್ಲಿ ತುಂತುರು ಮಳೆ, ಕೆಲವು ಕಡೆ ಸಾಧಾರಣ ಮಳೆ ಇಂದೂ ಆಗಬಹುದು. ತಮಿಳುನಾಡು ಕನ್ಯಾಕುಮಾರಿ ಭಾಗದಲ್ಲಿ ಉಂಟಾಗಿರುವ ಸುಳಿಗಾಳಿ ಕಾರಣ ರಾಜ್ಯದ ವಿವಿಧೆಡೆ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ
ಭಾರತೀಯ ಹವಾಮಾನ ಇಲಾಖೆ ಗುರುವಾರ ಮಧ್ಯಾಹ್ನ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ನಾಳೆ ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಲಿದೆ. ಕೆಲವು ಕಡೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯಬಹುದು. ಬೆಂಗಳೂರು ನಗರದಲ್ಲಿ ಮತ್ತು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಬಹುದು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಗುರುವಾರ (ಅಕ್ಟೋಬರ್ 24) ಮಧ್ಯಾಹ್ನ ತನಕದ 24 ಗಂಟೆಗಳ ಅವಧಿಯಲ್ಲಿ 13.6 ಮಿಮೀ ಮಳೆಯಾಗಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 1.4 ಎಂಎಂ ಮಳೆ ದಾಖಲಾಗಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವಿಜ್ಞಾನಿ ರಾಜವೇಲ್ ಮಾಣಿಕ್ಕಂ ತಿಳಿಸಿದ್ದಾರೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಸಾಧಾರಣ ಮಳೆಯಾಗಿದೆ. ಕರ್ನಾಕಟದ ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗಿದೆ. ಅಕ್ಟೋಬರ್ 26ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳು (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ) ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಅಂದರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಶೇಕಡ 50 ಪ್ರದೇಶಗಳಲ್ಲಿ ಮಳೆ ಸುರಿಯಲಿದೆ. ಸಾಧಾರಣ ಮಳೆಯಾಗಲಿದ್ದು, ಕೆಲವು ಕಡೆ ಗುಡುಗು ಮಿಂಚು ಸಹಿತ ಮಳೆ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ದಕ್ಷಿಣ ಒಳನಾಡಿನ ಹಲವೆಡೆ ಅಕ್ಟೋಬರ್ 30 ರವರೆಗೂ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ. ಅದೇ ರೀತಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲೂ ಅಲ್ಲಲ್ಲಿ ಮಳೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೂರು ದಿನ ಒಣ ಹವೆ ಮುಂದುವರಿಯಲಿದ್ದು, ಮಳೆ ಕಡಿಮೆಯಾಗಲಿದೆ. ಆದರೆ ಅ.27 ರ ನಂತರ ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ಧಾರೆ.