Karnataka Weather: ರಾಜ್ಯದಾದ್ಯಂತ ಇಂದು ಚಳಿ ಮುಂದುವರಿಕೆ; ಜನವರಿ 19ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ರಾಜ್ಯದಾದ್ಯಂತ ಇಂದು ಚಳಿ ಮುಂದುವರಿಕೆ; ಜನವರಿ 19ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

Karnataka Weather: ರಾಜ್ಯದಾದ್ಯಂತ ಇಂದು ಚಳಿ ಮುಂದುವರಿಕೆ; ಜನವರಿ 19ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

ಜನವರಿ 19ರ ಭಾನುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.

ಜನವರಿ 18ರ ಶನಿವಾರ ಕರ್ನಾಟಕದ ಹವಾಮಾನ ವರದಿ
ಜನವರಿ 18ರ ಶನಿವಾರ ಕರ್ನಾಟಕದ ಹವಾಮಾನ ವರದಿ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು (ಜನವರಿ 18, ಶನಿವಾರ) ಚಳಿ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಚಳಿಯ ಪರಿಸ್ಥಿತಿ ಇದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಇದರೊಂದಿಗೆ ಸಾಧಾರಣ ಚಳಿ ಮತ್ತು ಅಲ್ಲಲ್ಲಿ ಮಂಜು ಆವರಿಸಿದೆ. ನಿನ್ನೆ (ಜನವರಿ 17, ಶುಕ್ರವಾರ) ಕರ್ನಾಟಕದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಒಣ ಹವೆ ಮುಂದುವರಿದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದ (ಜನವರಿ 18, ಶನಿವಾರ) ಜನವರಿ 21ರ ಮಂಗಳವಾರದವರೆಗೆ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಮುಂದಿನ 3 ದಿನಗಳವರೆಗೆ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಉಳಿದಂತೆ ಒಣ ಹವೆ ಮುಂದುವರಿಯಲಿದ್ದು, ಮುಂಜಾನೆ ಸಮಯದಲ್ಲಿ ಅಲ್ಲಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಕಳೆದ 24 ಗಂಟೆಗಳ ಹವಾಮಾನ ವರದಿಯ ಪ್ರಕಾರ, ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಧಾರವಾಡದಲ್ಲಿ ದಾಖಲಾಗಿದೆ.

ಜನವರಿ 19 ಭಾನುವಾರ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು ಹಾಗೂ ಹಾಸನ ಸೇರಿದಂತೆ 11 ಜಿಲ್ಲೆಗಳ ಕೆಲವೊಂದು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಬೆಂಗಳೂರು ಹವಾಮಾನ

ಬೆಂಗಳೂರಿನಲ್ಲಿ ಚಳಿಯ ನಡುವೆ ಜನ ಜೀವನ ಸಾಮಾನ್ಯವಾಗಿದೆ. ಮುಂಜಾನೆಯ ಶನಿವಾರದ ಮಾರುಕಟ್ಟೆಗಳಲ್ಲಿ ಎಂದಿನಂತೆ ವಹಿವಾಟುಗಳು ನಡೆಯುತ್ತವೆ. ವ್ಯಾಪಾರಿಗಳು, ಗ್ರಾಹಕರು ಸೇರಿದ್ದಾರೆ, ವಾಹನ ಸಂಚಾರವು ಸಾಮಾನ್ಯವಾಗಿದೆ. ಕೆಲಸ ಕಾರ್ಯಗಳಿಗೆ ಹೋಗುವ ಜನರ ಓಡಾಟಕ್ಕೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಐಟಿ-ಬಿಟಿ ಕಂಪನಿಗಳು ಶನಿವಾರ ವಾರಾಂತ್ಯದ ರಜೆ ಇರುವ ಕಾರಣ ಹೆಚ್ಚಿನ ಮಂದಿಯ ಓಡಾಟ ಇಲ್ಲ. ಮೋಡದ ವಾತಾವರಣ ಇರುವ ಕಾರಣ 10 ಗಂಟೆಯ ನಂತರವೂ ಬಿಸಿಲು ಕಡಿಮೆ ಇರಲಿದೆ.

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ಗಮನಿಸುವುದಾದರೆ, ಮುಖ್ಯವಾಗಿ ಮೋಡ ಕವಿದ ವಾತಾವರಣದೊಂದಿಗೆ ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.

Whats_app_banner