Karnataka Weather: ಬೆಂಗಳೂರಿನಲ್ಲಿ ಮುಂದುವರಿದ ಚಳಿಯ ವಾತಾವರಣ; ಒಳನಾಡಿನ ಹಲವೆಡೆ ತಾಪಮಾನ ಮತ್ತಷ್ಟು ಇಳಿಕೆ ಸಾಧ್ಯತೆ
ರಾಜ್ಯದ ಒಳನಾಡಿನ ಕನಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮುಂದಿನ 6 ದಿನಗಳ ಕಾಲ ಒಣ ಹವೆ ಮುಂದುವರಿಯಲಿದೆ. ಮುಂಜಾನೆ ಸಮಯದಲ್ಲಿ ಅಲ್ಲಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಜನವರಿ 17 ಶುಕ್ರವಾರದ ಹವಾಮಾನ ವರದಿ ಇಲ್ಲಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು (ಜನವರಿ 17, ಶುಕ್ರವಾರ) ಕೂಡ ಮೋಡ ಕವಿದ ವಾತಾವರಣ ಇದ್ದು, ಚಳಿಯ ಪರಿಸ್ಥಿತಿ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಸಮಯದಲ್ಲಿ ಮೋಡ ಕವಿದ ವಾತಾವರಣ ಇದೆ. ಪರಿಣಾಮವಾಗಿ ಕೊರೆಯುವ ಚಳಿ ಮತ್ತು ದಟ್ಟ ಮಂಜಿನ ಪರಿಸ್ಥಿತಿ ಕಡಿಮೆಯಾಗಿದೆ. ನಿನ್ನೆ (ಜನವರಿ 16, ಗುರುವಾರ) ಕರ್ನಾಟಕದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಒಣ ಹವೆ ಮುಂದುವರಿದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಇಂದಿನಿಂದ (ಜನವರಿ 17, ಶುಕ್ರವಾರ) ಜನವರಿ 22ರ ಬುಧವಾರದವರಿಗೆ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಉಳಿದಂತೆ ಒಣ ಹವೆ ಮುಂದುವರಿಯಲಿದ್ದು, ಮುಂಜಾನೆ ಸಮಯದಲ್ಲಿ ಅಲ್ಲಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಕಳೆದ 24 ಗಂಟೆಗಳ ಹವಾಮಾನ ವರದಿಯ ಪ್ರಕಾರ, ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಚಳಿಯ ನಡುವೆ ಜನ ಜೀವನ ಸಾಮಾನ್ಯವಾಗಿದೆ. ಮುಂಜಾನೆಯ ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರಿಗಳು, ಗ್ರಾಹಕರಿಂದ ತುಂಬಿದ್ದವು, ವಾಹನ ಸಂಚಾರವು ಸಾಮಾನ್ಯವಾಗಿದೆ. ಕೆಲಸ ಕಾರ್ಯಗಳಿಗೆ ಹೋಗುವ ಜನರ ಓಡಾಟಕ್ಕೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ. 10 ಗಂಟೆಯ ನಂತರ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ಗಮನಿಸುವುದಾದರೆ, ಮುಖ್ಯವಾಗಿ ಮೋಡ ಇಲ್ಲದ ಆಕಾಶ ಇರಲಿದೆ, ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.
