ಕರ್ನಾಟಕ ಹವಾಮಾನ ಮಾ 18: ರಾಜ್ಯದಲ್ಲಿ ತಾಪಮಾನ ಏರಿಕೆಯ ಜೊತೆ ಬಿಸಿಗಾಳಿಯ ಮುನ್ಸೂಚನೆ, ಇನ್ನೂ 3 ದಿನ ಸಾಕಷ್ಟು ಎಚ್ಚರ ಅಗತ್ಯ
Karnataka Weather March 18: ರಾಜ್ಯದಲ್ಲಿ ತಾಪಮಾನ ಏರಿಕೆಯ ಜೊತೆ ಇಂದಿನಿಂದ (ಮಾರ್ಚ್ 18) ಬಿಸಿಗಾಳಿ ಬೀಸುವ ಮುನ್ಸೂಚನೆಯೂ ಇದೆ. ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ ಭಾರತೀಯ ಹವಾಮಾನ ಇಲಾಖೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.

Karnataka Weather March 18: ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಏರುತ್ತಲೇ ಇದೆ. ಅತಿಯಾದ ಬಿಸಿಲಿನ ಝಳಕ್ಕೆ ಜನರು ತತ್ತರಿಸುತ್ತಿದ್ದಾರೆ. ಕೂಲ್ ಸಿಟಿ ಎಂದೇ ಖ್ಯಾತಿ ಪಡೆದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಾಪಮಾನ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗುತ್ತಿದೆ. ಸೆಖೆ, ಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಇನ್ನೊಂದು ಕಹಿ ಸುದ್ದಿ ಇದೆ. ಅದೇನೆಂದರೆ ಇಂದಿನಿಂದ (ಮಾರ್ಚ್ 18) ರಾಜ್ಯದಲ್ಲಿ ಬಿಸಿ ಗಾಳಿ ಬೀಸುವ ಮುನ್ಸೂಚನೆಯನ್ನು ನೀಡಿದೆ ಭಾರತೀಯ ಹವಾಮಾನ ಇಲಾಖೆ.
ಉತ್ತರಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಿಸಿಗಾಳಿ ಬೀಸಲಿದೆ. ಇದರೊಂದಿಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಏರಿಕೆಯಾಗಲಿದೆ. ಈಗಾಗಲೇ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಬಿಸಿಗಾಳಿ ಕೂಡ ಬೀಸಲಿದ್ದು, ಜನರಿಗೆ ಇನ್ನಷ್ಟು ಸಮಸ್ಯೆಗಳನ್ನು ತಂದ್ದೊಡ್ಡಲಿದೆ. ಇದರಿಂದ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇರುವ ಕಾರಣ ಅವಶ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ರಾಜ್ಯದಲ್ಲೇ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ.
ಕರಾವಳಿಯಲ್ಲಿ ಒಣಹವೆ ಮುಂದುವರಿಕೆ
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗುವುದಿಲ್ಲ ಎಂದು ಐಎಂಡಿ ವರದಿ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಒಣಹವೆ ಮುಂದುವರಿಯಲಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಬಿಸಿಲಿನ ಪ್ರಮಾಣ ಜೋರಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಮುಂದುವರಿಯುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ 5 ಜಿಲ್ಲೆಗಳಲ್ಲಿ ಬಿಸಿಗಾಳಿ
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ರಾತ್ರಿ ಹೊತ್ತಿನಲ್ಲೂ ಕೂಡ ವಾತಾವರಣ ಬಿಸಿಯಾಗಿರುವ ಅನುಭವವಾಗುತ್ತಿದೆ. ಈಗಾಗಲೇ ಬಿಸಿಲಿನ ಪ್ರತಾಪಕ್ಕೆ ಸೋತಿರುವ ಉತ್ತರ ಒಳನಾಡಿನ ಜಿಲ್ಲೆಯ ಜನತೆಗೆ ಮತ್ತೊಂದು ಕಹಿಸುದ್ದಿ ಇದೆ. ಅದೇನೆಂದರೆ ಉತ್ತರ ಒಳನಾಡಿನ 5 ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲ ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೂಡ ಹೇಳಿದೆ. ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿಯಲ್ಲಿ ಬಿಸಿಗಾಳಿ ಬೀಸಲಿದೆ. ಇದರೊಂದಿಗೆ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ದಕ್ಷಿಣ ಒಳನಾಡಿನ ಗರಿಷ್ಠ ತಾಪದಲ್ಲಿ ಏರಿಕೆ
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನಿನ್ನೆ (ಮಾರ್ಚ್ 17) ಹಗುರ ಮಳೆಯಾಗಿದೆ. ಆದರೆ ಇಂದಿನಿಂದ ಒಣಹವೆ ಮುಂದುವರಿಯಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಕೊಡಗು ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲೂ ಹೆಚ್ಚಲಿದೆ ತಾಪಮಾನ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಾಪಮಾನ ಏರಿಕೆಯ ಜೊತೆಗೆ ಬಿಸಿಗಾಳಿ ಬೀಸುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಬೆಂಗಳೂರು ನಗರದ ಸುತ್ತಮುತ್ತ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇದ್ದು, ಇನ್ನೆರಡು ದಿನಗಳಲ್ಲಿ 36 ರಿಂದ 38 ಡಿಗ್ರಿ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಬಿಸಿಗಾಳಿ ಮುನ್ನೆಚ್ಚರಿಕೆ ಹೀಗಿರಲಿ
- ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾಧ್ಯವಾದಷ್ಟು ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ
- ಸಾಕಷ್ಟು ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ
- ನೀರಿನಾಂಶ ಇರುವ ಹಣ್ಣು, ತರಕಾರಿ ಸೇವನೆಗೆ ಒತ್ತು ನೀಡಿ.
- ಹತ್ತಿ ಬಟ್ಟೆಯನ್ನೇ ಧರಿಸಲು ಆದ್ಯತೆ ನೀಡಿ
