ಕರ್ನಾಟಕದ ಕೆಲವೆಡೆ ಹಗುರ ಮಳೆ ಜೊತೆ ದಟ್ಟ ಮಂಜು ಕವಿಯುವ ಸಾಧ್ಯತೆ, ಬಹುತೇಕ ಕಡೆ ಒಣಹವೆ ಮುಂದುವರಿಕೆ; ಡಿ.9ರ ಹವಾಮಾನ ವರದಿ
ಕರ್ನಾಟಕದಲ್ಲಿ ವ್ಯತಿರಿಕ್ತ ವಾತಾವರಣವಿದ್ದು ಕೆಲವೆಡೆ ಮಳೆ, ಕೆಲವೆಡೆ ಚಳಿ ಹಾಗೂ ಕೆಲವೆಡೆ ಬಿಸಿಲು ಹಾಗೂ ಒಣಹವೆ ಇದೆ. ಫೆಂಗಲ್ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ, ಆದರೂ ಇಂದು ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಕೆಲವು ಕಡೆ ದಟ್ಟ ಮಂಜು ಕವಿದಿರಲಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ.
Karnataka Weather: ಫೆಂಗಲ್ ಚಂಡಮಾರುತದ ಪರಿಣಾಮದಿಂದ ಕಳೆದೊಂದು ವಾರದಿಂದ ರಾಜ್ಯದಲ್ಲಿ ಬಹುತೇಕ ಕಡೆ ಮಳೆಯಾಗಿದ್ದು, ಇಂದು (ಡಿಸೆಂಬರ್ 9) ಮಳೆ ಸಾಧ್ಯತೆ ಕಡಿಮೆ ಇದೆ. ರಾಜ್ಯದ ಬಹುತೇಕ ಕಡೆ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಐದಾರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಳಿಗಾಲ ನಿರೀಕ್ಷಿಸಿದ್ದ ರಾಜ್ಯದ ಜನತೆಗೆ ಮಳೆಗಾಲವು ನಿರಾಸೆ ಮೂಡಿಸಿತ್ತು. ಅದರಲ್ಲೂ ಬೆಳೆ ಕಟಾವಿಗೆ ಬರುವ ಈ ಸಮಯದಲ್ಲಿ ಮಳೆ ಬಂದಿರುವುದು ರೈತ ಬಾಂಧವರಿಗೆ ತುಂಬಲಾರದ ನಷ್ಟವಾಗಿತ್ತು. ಇದೀಗ ಮಳೆ ಕೊಂಚ ಬಿಡುವು ನೀಡುವ ಸಾಧ್ಯತೆ ಕಾಣುತ್ತಿದೆ. ಆದರೆ ಡಿ.13ರವರೆಗೆ ದೇಶದ ಕೆಲವು ಕಡೆ ಮತ್ತೆ ಬೀಳುವ ಮುನ್ಸೂಚನೆ ಇದೆ. ತಮಿಳುನಾಡು ಹಾಗೂ ಆಂಧ್ರದಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 9 ರಂದು ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ವಾತಾವರಣ ಹೇಗಿದೆ ಎಂಬ ವಿವರ ಇಲ್ಲಿದೆ ನೋಡಿ.
ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯ ಪ್ರಭಾವ ತಗ್ಗಿದ್ದು, ಚಳಿಗಿಂತ ಬಿಸಿಲಿನ ಪ್ರತಾಪ ಜೋರಿದೆ. ರಾತ್ರಿ ಕೊಂಚ ಚಳಿಯ ವಾತಾವರಣವಿದ್ದರೂ ಹಗಲಿನ ವೇಳೆ ಬೇಸಿಗೆಯಂತೆ ಬಿಸಿಲು ಸುಡುತ್ತಿದೆ. ಇಂದು ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ಒಣ ಹವೆ, ದಟ್ಟ ಮಂಜು
ಉತ್ತರ ಒಳನಾಡಿನಲ್ಲಿ ಮುಂದಿನ ದಿನಗಳಲ್ಲಿ ಚಳಿ ಹೆಚ್ಚುವ ಸಾಧ್ಯತೆ ಇದೆ. ಯಾಕೆಂದರೆ ಇಂದಿನಿಂದ ಡಿಸೆಂಬರ್ 13ರವರೆಗೆ ಕೆಲವು ಕಡೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಧಾರಾವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆಗಿಂತ ಚಳಿ ಜೋರು
ದಕ್ಷಿಣ ಒಳನಾಡಿನಲ್ಲಿ ಮಳೆರಾಯನ ಆಗಮನದ ಸಾಧ್ಯತೆ ಬಹುತೇಕ ಕಡಿಮೆ ಇದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಉಳಿದೆಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಡಿಸೆಂಬರ್ 11ರವರೆಗೆ ದಕ್ಷಿಣ ಒಳನಾಡಿನ ಕೆಲವು ಕಡೆ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬೆಂಗಳೂರು ಹವಾಮಾನ
ರಾಜ್ಯ ರಾಜಧಾನಿಯಲ್ಲಿ ಇಂದು ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ಚಳಿಯ ಪ್ರಭಾವ ಜೋರಾಗಲಿದೆ. ಬೆಂಗಳೂರಿನಲ್ಲಿಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮೈಸೂರು, ಬೆಳಗಾವಿ, ಮಡಿಕೇರಿ, ಚಿಕ್ಕಮಗಳೂರು ಮುಂತಾದ ಕಡೆ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದ್ದು ಚಳಿ ಜೋರಿರಲಿದೆ.