ಕರ್ನಾಟಕ ಹವಾಮಾನ ಏಪ್ರಿಲ್ 14: ಬೀದರ್‌ನಲ್ಲಿ ಮುಂದುವರಿದ ವರುಣನ ಆರ್ಭಟ; ಇಂದು 7 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಏಪ್ರಿಲ್ 14: ಬೀದರ್‌ನಲ್ಲಿ ಮುಂದುವರಿದ ವರುಣನ ಆರ್ಭಟ; ಇಂದು 7 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ಏಪ್ರಿಲ್ 14: ಬೀದರ್‌ನಲ್ಲಿ ಮುಂದುವರಿದ ವರುಣನ ಆರ್ಭಟ; ಇಂದು 7 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

Karnataka Weather: ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಶನಿವಾರ 4 ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗುತ್ತಿದೆ. ಏಪ್ರಿಲ್ 14ರ ಭಾನುವಾರದ ಹವಾಮಾನ ವರದಿ ಇಲ್ಲಿದೆ.

ಉತ್ತರ ಒಳನಾಡಿನಲ್ಲಿ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಏಪ್ರಿಲ್ 14ರ ಭಾನುವಾರದ ಹವಾಮಾನ ವರದಿ ತಿಳಿಯಿರಿ.
ಉತ್ತರ ಒಳನಾಡಿನಲ್ಲಿ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಏಪ್ರಿಲ್ 14ರ ಭಾನುವಾರದ ಹವಾಮಾನ ವರದಿ ತಿಳಿಯಿರಿ.

ಬೆಂಗಳೂರು: ಮನೆಯಿಂದ ಹೊರ ಬಾರದಂತಹ ಬಿಸಿಲಿನಿಂದ ತತ್ತರಿಸಿದ್ದ ಕರ್ನಾಟಕದ (Karnataka Weather) ಜನತೆಗೆ ವರುಣ ಕೊನೆಗೂ ಕೃಪೆ ತೋರಿದ್ದಾನೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ (Karnataka Rains). ಉತ್ತರ ಒಳನಾಡಿನ ಬೀದರ್ ಜಿಲ್ಲೆಯಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಶನಿವಾರ (ಏಪ್ರಿಲ್ 13) ಭಾರಿ ಮಳೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಶನಿವಾರ 4 ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಬೀದರ್ ನಗರ, ಹುಮನಾಬಾದ್, ಬೆಳಗಾವಿ, ಗದಗ ಜಿಲ್ಲೆಯ ನರಗುಂದ, ವಿಜಯಪುರದ ಝಲ್ಕಿ ಕ್ರಾಸ್‌ನಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಸುರಿದಿದೆ. ಯಾದಗಿರಿ ಜಿಲ್ಲೆಯ ಕಕೇರಿ, ಬೆಳಗಾವಿಯ ಅಥಣಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಶೃಂಗೇರಿ, ಬಾಳೆಹೊನ್ನೂರು, ಕೊಡಗು ಜಿಲ್ಲೆಯ ನಾಪೋಕ್ಲು, ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿ ಹಾಗೂ ಮೈಸೂರಿನಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ.

ಮಳೆ ಹಾಗೂ ಮೋಡ ಕವಿದ ವಾತಾವರಣದ ಪರಿಣಾಮವಾಗಿ ರಾಜ್ಯದಲ್ಲಿ ತಾಪಮಾನ ಕೊಂಚ ಇಳಿಕೆಯಾಗಿದೆ. ಆದರೆ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವೊಂದು ಕಡೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಇಲ್ಲಿ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಉಳಿದಂತೆ ರಾಜ್ಯಾದ್ಯಂತೆ ಸಾಮಾನ್ಯವಾಗಿದೆ. ಕರ್ನಾಟಕದಲ್ಲಿ ಅತಿ ಗರಿಷ್ಠ ಉಷ್ಣಾಂಶ 38.7 ಡಿಗ್ರಿ ಸೆಲ್ಸಿಯಸ್ ಬಾಗಲಕೋಟೆಯಲ್ಲಿ ದಾಖಲಾಗಿದೆ.

ಏಪ್ರಿಲ್ 14ರ ಭಾನುವಾರ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ

ಇಂದು ರಾಜ್ಯದ 7 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.

ಏಪ್ರಿಲ್ 15ರ ಸೋಮವಾರದ ಮಳೆಯ ಮುನ್ಸೂಚನೆಯನ್ನು ನೋಡುವುದಾದರೆ ರಾಜ್ಯದಾದ್ಯಂತ ಒಣಹವೆ ಇರಲಿದೆ. ಇನ್ನ ಏಪ್ರಿಲ್ 1 ರ ಮಂಗಳವಾರ ಕೂಡ ರಾಜ್ಯದಲ್ಲಿ ಒಳಹವೆ ಇರಲಿದೆ. ಆದರೆ ಏಪ್ರಿಲ್ 17ರ ಬುಧವಾರ 20 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಏಪ್ರಿಲ್ 17ರ ಬುಧವಾರ ಮಳೆಯ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ವಿಜಯನಗರ ಹಾಗೂ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ಹವಾಮಾನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಗರಿಷ್ಠ 36 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಬಹಳಷ್ಟು ಸಾಧ್ಯತೆ ಇರುತ್ತದೆ. ರಾಜಧಾನಿಗೆ ಮಳೆಯ ಮುನ್ಸೂಚನೆ ಇಲ್ಲ. ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಇರುತ್ತದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಆ ಪ್ರದೇಶಗಳಲ್ಲಿ ತಾಪಮಾನ ಗಮನಾರ್ಹವಾಗಿ ಇಳಿಕೆಯಾಗಿದೆ. ಯುಗಾದಿ ನಂತರ ಕರ್ನಾಟಕದಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಬಿಸಿಲ ನಾಡು ಕಲಬುರಗಿಯಲ್ಲಿ ದಾಖಲೆಯ ತಾಪಮಾನ ವರದಿಯಾಗಿತ್ತು. ಇದೀಗ ಇಲ್ಲೂ ಮಳೆಯಾಗುತ್ತಿರುವುದು ಬಿಸಿಲಿಗೆ ತತ್ತರಿಸಿದ್ದ ಅಲ್ಲಿನ ಜನರಿಗೆ ಕೊಂಚ ನೆಮ್ಮದಿ ನೀಡಿದೆ.

Whats_app_banner