ಕರ್ನಾಟಕ ಹವಾಮಾನ: ಉಡುಪಿ, ದಕ್ಷಿಣಕನ್ನಡ ಸೇರಿ ಈ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ; ಬಹುತೇಕ ಕಡೆ ಒಣಹವೆ ಮುಂದುವರಿಕೆ
Karnataka Rain: ರಾಜ್ಯದಲ್ಲಿ ಇಂದು (ಮಾರ್ಚ್ 25) ಕೂಡ ಮಳೆ ಬರುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ ಸೇರಿ ಈ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ಇಂದಿನ ಹವಾಮಾನ ತಿಳಿಯಿರಿ.

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಭೂಮಿಯನ್ನು ಕೊಂಚ ತಣ್ಣಗಾಗಿಸಿದೆ. ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವರದಿ ತಿಳಿಸಿದೆ.
ಮಳೆ ಸುರಿದಿದ್ದರೂ ಸೆಕೆಯ ಪ್ರಮಾಣ ಕೊಂಚವೂ ತಗ್ಗಿಲ್ಲ. ಮಳೆ ಬಂದ ಸಮಯದಲ್ಲಿ ಕೊಂಚ ತಣ್ಣಗಾಗುವ ಇಳೆ ಕ್ಷಣ ಮಾತ್ರದಲ್ಲಿ ಮತ್ತೆ ಬಿಸಿ ಏರಿಸಿಕೊಳ್ಳುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಬರಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ಇನ್ನೆರಡು ದಿನಗಳ ನಂತರ ಮಳೆ ನಿಂತು ಹೋಗಲಿದ್ದು, ಮತ್ತೆ ಬಿಸಿಲಿನ ತಾಪ ಏರಿಕೆಯಾಗಲಿದೆ. ಗರಿಷ್ಠ ತಾಪದಲ್ಲಿ ಯಾವುದೇ ಬದಲಾವಣೆ ಆಗದೇ ಇದ್ದರೂ, ಕನಿಷ್ಠ ತಾಪದಲ್ಲಿ ಏರಿಕೆಯಾಗುವ ಮುನ್ಸೂಚನೆ ಇದೆ. ಹಾಗಾದರೆ ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಬರುತ್ತೆ, ಎಲ್ಲೆಲ್ಲಿ ಒಣಹವೆ ಮುಂದುವರಿಯುತ್ತೆ ಎನ್ನುವ ವಿವರ ಇಲ್ಲಿದೆ.
ಉಡುಪಿ, ದಕ್ಷಿಣಕನ್ನಡದಲ್ಲಿ ಮಳೆ
ಇಂದು ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ ಹವಾಮಾನ ಇಲಾಖೆ. ಕರಾವಳಿಯ ಇನ್ನೊಂದು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರಿಯಲಿದೆ. ಕರಾವಳಿ ಭಾಗದವರ ಮೇಲೆ ಸೂರ್ಯ ಮುನಿಸಿಕೊಂಡಂತಿದ್ದು, ಈ ವರ್ಷ ಬಿಸಿಲಿನ ತಾಪ ಇನ್ನಷ್ಟು ಜೋರಾಗಿದೆ. ಆ ಕಾರಣದಿಂದ ಕರಾವಳಿಗರು ವರುಣ ಆಗಮನಕ್ಕೆ ಕಾಯುತ್ತಿದ್ದಾರೆ. ಮೇ ತಿಂಗಳವರೆಗೂ ಮಳೆ ಬಂದಿಲ್ಲ ಎಂದರೆ ಕರಾವಳಿಯಲ್ಲಿ ಹವಾಮಾನ ಪರಿಸ್ಥಿತಿ ಊಹಿಸುವುದು ಕಷ್ಟವಾಗುತ್ತದೆ.
ಉತ್ತರ ಒಳನಾಡಿನಲ್ಲಿ ಮಳೆಯಿಲ್ಲ
ಉತ್ತರನಾಡಿನ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಬಿಸಿಲಿನ ತಾಪವೂ ಹೆಚ್ಚಿರಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟ ಎದುರಿಸಬೇಕಾಗಬಹುದು.
ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಬರಲಿದೆ
ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ನಿರೀಕ್ಷೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಮಳೆ ಬರೋಲ್ಲ
ಹವಾಮಾನ ಇಲಾಖೆಯ ಇಂದಿನ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಮಳೆ ಬರೋಲ್ಲ. ಮೊನ್ನೆ ಸಂಜೆ ನಿರಂತರ ಮಳೆ ಸುರಿದ ನಂತರವೂ ಬೆಂಗಳೂರಲ್ಲಿ ಸೆಖೆ ಜೋರಾಗಿದೆ. ಹಗಲಿನ ಹೊತ್ತು ಹೊರಗಡೆ ಹೋಗುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಕೂಲ್ ಸಿಟಿ ಎಂಬ ಹೆಸರು ಪಡೆದಿರುವ ಬೆಂದಕಾಳೂರು ಇತ್ತೀಚೆಗೆ ನಿಧಾನಕ್ಕೆ ಹಾಟ್ ಸಿಟಿಯಾಗಿ ಬದಲಾಗುತ್ತಿದೆ.
