Karnataka Weather: ಭಾರೀ ಚಳಿಗೆ ನಡುಗಿದ ಚಿಕ್ಕಮಗಳೂರು, ಚಿಂತಾಮಣಿ ಮಡಿಕೇರಿ, ಹಾಸನ, ದಾವಣಗೆರೆ ಜನ; ಇಂದು 12 ಜಿಲ್ಲೆಗಳಲ್ಲಿ ಸಾಧಾರಣ ಮಳೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಭಾರೀ ಚಳಿಗೆ ನಡುಗಿದ ಚಿಕ್ಕಮಗಳೂರು, ಚಿಂತಾಮಣಿ ಮಡಿಕೇರಿ, ಹಾಸನ, ದಾವಣಗೆರೆ ಜನ; ಇಂದು 12 ಜಿಲ್ಲೆಗಳಲ್ಲಿ ಸಾಧಾರಣ ಮಳೆ

Karnataka Weather: ಭಾರೀ ಚಳಿಗೆ ನಡುಗಿದ ಚಿಕ್ಕಮಗಳೂರು, ಚಿಂತಾಮಣಿ ಮಡಿಕೇರಿ, ಹಾಸನ, ದಾವಣಗೆರೆ ಜನ; ಇಂದು 12 ಜಿಲ್ಲೆಗಳಲ್ಲಿ ಸಾಧಾರಣ ಮಳೆ

Karnataka Weather: ಕರ್ನಾಟಕದ ಮಲೆನಾಡು ಭಾಗದಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ಗುರುವಾರ ಹಾಗೂ ಶುಕ್ರವಾರ ಈ ಭಾಗದಲ್ಲಿ ಉಷ್ಣಾಂಶದಲ್ಲಿ ಕುಸಿತ ಕಂಡು ಬರಲಿದೆ.

ಚಿಕ್ಕಮಗಳೂರು ಸಹಿತ ಹಲವು ಕಡೆ ಭಾರೀ ಚಳಿ ವಾತಾವರಣ ಮುಂದುವರಿದಿದೆ.
ಚಿಕ್ಕಮಗಳೂರು ಸಹಿತ ಹಲವು ಕಡೆ ಭಾರೀ ಚಳಿ ವಾತಾವರಣ ಮುಂದುವರಿದಿದೆ.

ಬೆಂಗಳೂರು: ಕರ್ನಾಟಕದ ಮಲೆನಾಡು, ಮಧ್ಯ ಕರ್ನಾಟಕದ ಭಾಗದಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ. ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಕುಸಿತ ಕಂಡಿದೆ. ಚಿಕ್ಕಮಗಳೂರು, ಚಿಂತಾಮಣಿ, ಮಡಿಕೇರಿ, ಹಾಸನ, ದಾವಣಗೆರೆ, ಶಿವಮೊಗ್ಗ ಭಾಗದಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ಬೆಳಗಿನ ಜಾವದ ಹೊತ್ತಿಗೆ ಜನ ಚಳಿಗೆ ನಡುಗುವ ಸನ್ನಿವೇಶ ನಿರ್ಮಾಣವಾಗಿದೆ. ಮಂಜು ಮುಚ್ಚಿದ ವಾತಾವರಣವೂ ಅಲ್ಲಲ್ಲಿ ಕಂಡು ಬಂದಿದೆ. ಇದು ಇನ್ನೂ ಒಂದೆರಡು ದಿನಗಳು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಚಳಿಯ ಸಾಂಧ್ರತೆ ಹೆಚ್ಚಾಗಿದೆ. ಗುರುವಾರದಂದು ಮೈಸೂರು, ಕಲಬುಗರಿ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಸಹಿತ 12 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು ಮಳೆಯಾಗಬಹುದು ಎನ್ನುವ ಮುನ್ಸೂಚನೆಯೂ ಇದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹಲವೆಡೆ ಚಳಿ ಚಳಿ

ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆಯೇ ಚಳಿಗಾಲ ಶುರುವಾಗಿದ್ದರೂ ಈಗ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಉಷ್ಣಾಂಶ ಕುಸಿತ ಕಂಡು ದಟ್ಟ ಚಳಿ ಆವರಿಸಿದೆ. ಚಿಕ್ಕಮಗಳೂರಿನಲ್ಲಂತೂ ಚಳಿ ಪ್ರಮಾಣದಲ್ಲಿ ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್‌ ಕುಸಿತ ಕಂಡಿದೆ. ಅದೇ ರೀತಿ ಚಿಂತಾಮಣಿ, ಹಾಸನ, ಶಿವಮೊಗ್ಗ, ಕೊಡಗು ಭಾಗದಲ್ಲೂ ಚಳಿ ಅಧಿಕವಾಗಿದೆ.

ಚಿಕ್ಕಮಗಳೂರಿನಲ್ಲಿ ಅತೀ ಕಡಿಮೆ 10.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಚಿಂತಾಮಣಿಯಲ್ಲಿ 14.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ, ಮಡಿಕೇರಿಯಲ್ಲಿ 14.8 ಡಿಗ್ರಿ ಸೆಲ್ಸಿಯಸ್‌, ಹಾಸನದಲ್ಲಿ 15.9 ಡಿಗ್ರಿ ಸೆಲ್ಸಿಯಸ್‌, ದಾವಣಗೆರೆಯಲ್ಲಿ 16 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 20.2 ಡಿಗ್ರಿ ಸೆಲ್ಸಿಯಸ್‌, ಕಾರವಾರದಲ್ಲಿ 21.5 ಡಿಗ್ರಿ ಸೆಲ್ಸಿಯಸ್‌ , ಶಿರಾಲಿಯಲ್ಲಿ 17.4 ಡಿಗ್ರಿ ಸೆಲ್ಸಿಯಸ್‌ , ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣದಲ್ಲಿ 22.0 ಡಿಗ್ರಿ ಸೆಲ್ಸಿಯಸ್‌, ಪಣಂಬೂರಿನಲ್ಲಿ 22.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಉತ್ತರ ಕರ್ನಾಟಕದ ಬೆಳಗಾವಿ ನಗರದಲ್ಲಿ 18.0 ಡಿಗ್ರಿ ಸೆಲ್ಸಿಯಸ್‌, ಬೆಳಗಾವಿ ವಿಮಾನ ನಿಲ್ದಾಣ 16.8 ಡಿಗ್ರಿ ಸೆಲ್ಸಿಯಸ್‌, ಬೀದರ್‌ 17.0 ಡಿಗ್ರಿ ಸೆಲ್ಸಿಯಸ್‌ , ವಿಜಯಪುರ 16.4 ಡಿಗ್ರಿ ಸೆಲ್ಸಿಯಸ್‌, ಬಾಗಲಕೋಟೆ 17.7 ಡಿಗ್ರಿ ಸೆಲ್ಸಿಯಸ್, ಧಾರವಾಡ 17.2 ಡಿಗ್ರಿ ಸೆಲ್ಸಿಯಸ್‌, ಗದಗ 16.4 ಡಿಗ್ರಿ ಸೆಲ್ಸಿಯಸ್‌, ಕಲಬುರಗಿ 20.8 ಡಿಗ್ರಿ ಸೆಲ್ಸಿಯಸ್‌, ಹಾವೇರಿ 17.8 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳ 20.8ಡಿಗ್ರಿ ಸೆಲ್ಸಿಯಸ್‌, ರಾಯಚೂರಿನಲ್ಲಿ17.0 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ 17.7 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ 17.6 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ನಗರ 18.4 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 19.2 ಡಿಗ್ರಿ ಸೆಲ್ಸಿಯಸ್‌, ಚಾಮರಾಜನಗರ 16.5 ಡಿಗ್ರಿ ಸೆಲ್ಸಿಯಸ್‌, ಚಿತ್ರದುರ್ಗ 18.8 ಡಿಗ್ರಿ ಸೆಲ್ಸಿಯಸ್‌, ಮಂಡ್ಯ 17.7 ಡಿಗ್ರಿ ಸೆಲ್ಸಿಯಸ್‌, ಮೈಸೂರಿನಲ್ಲಿ 17.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಮಳೆ ಹೇಗಿದೆ

ಕರ್ನಾಟಕ ಹಲವು ಕಡೆ ಗುರುವಾರ ಲಘು ಪ್ರಮಾಣದಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಬೀದರ್‌, ಕಲಬುರಗಿ, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲು ಲಘು ಮಳೆ ಇರಲಿದೆ.

ಇದನ್ನು ಹೊರತುಪಡಿಸಿದರೆ ಕರ್ನಾಟಕದಾದ್ಯಂತ ಒಣ ಹವೆಯು ಮುಂದುವರಿಯಲಿದೆ. ಒಳನಾಡಿನ ಕೆಲವು ಭಾಗಗಳಲ್ಲಿ ದಟ್ಟವಾಗಿ ಮಂಜು ಆವರಿಸುವ ಸಾಧ್ಯತೆಯೂ ಹೆಚ್ಚಿದೆ.

ಶುಕ್ರವಾರದಂದು ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ ದಾವಣಗೆರೆ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಆನಂತರ ಹೊಸ ವರ್ಷದವರೆಗೂ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣ ಹವೆ ಮುಂದುವರೆಯುವ ಲಕ್ಷಣಗಳಿವೆ.

ಬೆಂಗಳೂರು ಹವಾಮಾನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದಲ್ಲಿಯೇ ಮಂಜು ದಟ್ಟವಾಗಿ ಇರುವ ಸಾಧ್ಯತೆಗಳು ಅಧಿಕ. ಬೆಂಗಳೂರಿನಲ್ಲಿ ಎರಡು ದಿನವೂ ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ ಹಾಗೂ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

Whats_app_banner