ಕನ್ನಡ ಸುದ್ದಿ  /  Karnataka  /  Karntataka Election News In Kannada Govt And Private Bus Booking And Fare Raised As Voters Head Home For Polling Day Nkn

Bus Fare: ಮತದಾನಕ್ಕೆ ತವರಿಗೆ ತೆರಳಲು ಸಜ್ಜಾದ ಜನ; ಬುಕ್ಕಿಂಗ್‌ ಮತ್ತು ದರ ಎರಡೂ ಹೆಚ್ಚಳ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮತದಾನ ಮಾಡಲು ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಬುಕ್ಕಿಂಗ್‌ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮವಾಗಿ ಬಸ್‌ ದರಗಳಲ್ಲೂ ಏರಿಕೆ ಕಂಡುಬಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮತದಾನ ಮಾಡಲು ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಬುಕ್ಕಿಂಗ್‌ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

ಇದರ ಪರಿಣಾಮವಾಗಿ ಬಸ್‌ ದರಗಳಲ್ಲೂ ಏರಿಕೆ ಕಂಡುಬಂದಿದ್ದು, ಹೆಚ್ಚಿನ ಜನರು ಮತದಾನಕ್ಕೂ ಎರಡು ದಿನಗಳ ಮೊದಲು ತಮ್ಮ ಸ್ವಂತ ಊರಿಗೆ ತೆರಳಲು ಮುಂಗಡ ಟಿಕೆಟ್‌ ಕಾಯ್ದಿರಿಸುತ್ತಿದ್ದಾರೆ.

ಡೆಕ್ಕನ್‌ ಹೆರಾಲ್ಡ್‌ ಸುದ್ದಿ ಪತ್ರಿಕೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಮೇ 9ರಂದು ಕೆಎಸ್‌ಆರ್‌ಟಿಸಿ ಬಸ್‌ ಬುಕ್ಕಿಂಗ್‌ನಲ್ಲಿ ಶೇ. 40ರಷ್ಟು ಏರಿಕೆ ಕಂಡುಬಂದಿದೆ. ಅಂದರೆ ಮತದಾನಕ್ಕೂ ಮುನ್ನಾದಿನ(ಮೇ 10) ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

ಕೆಎಸ್‌ಆರ್‌ಟಿಸಿ ಮೇ 9 ರ ರಾತ್ರಿಯ ಪ್ರಯಾಣಕ್ಕಾಗಿ ಇದುವರೆಗೂ ಒಟ್ಟು 1,317 ಮುಂಗಡ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಸಾಮಾನ್ಯ ದಿನಗಳಲ್ಲಿ 800 ರಿಂದ 900 ಬುಕ್ಕಿಂಗ್‌ಗಳಾಗಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್‌ ನಂತರ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಆದರೆ ಚುನಾವಣಾ ಸಮಯದಲ್ಲಿ ಮತ್ತೆ ಬುಕ್ಕಿಂಗ್‌ ಪ್ರಮಾಣ ಏರಿಕೆ ಕಂಡುಬಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಮತದಾನ ಮುಗಿದ ದಿನ(ಮೇ 10) ಮತ್ತು ಫಲಿತಾಂಶದ ದಿನ(ಮೇ 13) ದಂದೂ ಮರಳಿ ಬರುವ ಬುಕ್ಕಿಂಗ್‌ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ. ಅಂದರೆ ಜನರು ಮತದಾನ ಮಾಡಲೆಂದೇ ತಮ್ಮ ಸ್ವಂತ ಊರಿಗೆ ತೆರಳುತ್ತಿರುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ಸರ್ಕಾರಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು.

ಆದರೆ ಬುಕ್ಕಿಂಗ್‌ ಹೆಚ್ಚಾದ ಕಾರಣಕ್ಕೆ ಬಸ್‌ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ ಎಂದೂ ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇತ್ತ ಖಾಸಗಿ ಬಸ್‌ ಬುಕ್ಕಿಂಗ್‌ ಪ್ರಮಾಣ ಕೂಡ ಏರಿಕೆಯಾಗಿದ್ದು, ಪ್ರಮುಖವಾಗಿ ಮೇ 9 ರ ರಾತ್ರಿಯ ಪ್ರಯಾಣಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸುತ್ತಿದ್ದಾರೆ.

ಹೆಚ್ಚಿನ ಬುಕ್ಕಿಂಗ್‌ ಕಂಡುಬರುತ್ತಿರುವುದರಿಂದ, ಖಾಸಗಿ ಸಾರಿಗೆ ಆಪರೇಟರ್‌ಗಳು ಬಸ್‌ ದರ ಏರಿಕೆ ಮಾಡಿದ್ದಾರೆ. ಕೆಲವು ಖಾಸಗಿ ಬಸ್‌ ಸಂಸ್ಥೆಗಳು ತಮ್ಮ ಪ್ರಯಾಣ ದರವನ್ನು ಶೇ.50ರಷ್ಟು ಹೆಚ್ಚಿಸಿದ್ದಾರೆ.

ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರಿಗೆ ನಾನ್-ಎಸಿ ಸ್ಲೀಪರ್ ಕ್ಲಾಸ್ ದರ ವಾರದ ದಿನಗಳಲ್ಲಿ 750 ರೂ. ಇದ್ದರೆ, ಹೆಚ್ಚಿನ ಬೇಡಿಕೆಯ ಕಾರಣಕ್ಕೆ ಈಗ ಸುಮಾರು 1,150 ರೂ.ಗೆ ಏರಿಕೆಯಾಗಿದೆ.

ಪ್ರಮುಖವಾಗಿ ಕುಂದಾಪುರ, ಮಂಗಳೂರು, ಶಿವಮೊಗ್ಗ, ಶೃಂಗೇರಿ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಮಾರ್ಗದ ಬಸ್‌ಗಳು ಬಹುತೇಕ ಭರ್ತಿಯಾಗಿವೆ. ಈ ಕಾರಣಕ್ಕೆ ಬಸ್‌ ದರದಲ್ಲೂ ಹೆಚ್ಚಳ ಮಾಡಲಾಗಿದೆ ಎಂದು ಖಾಸಗಿ ಬಸ್‌ ಆಪರೇಟರ್‌ಗಳು ಹೇಳುತ್ತಾರೆ.

ಚುನಾವಣಾ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳೂ ಕೂಡ ಜನರು ತಮ್ಮ ಕ್ಷೇತ್ರಗಳಿಗೆ ತೆರಳಲು ಅನುವಾಗುವಂತೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು ಮುಂಗಡವಾಗಿ ಬುಕ್‌ ಮಾಡುತ್ತಿವೆ.

ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಿಗೆ ಜನರು ತೆರಳಲು, ರಾಜಕೀಯ ಪಕ್ಷಗಳೇ ಬಸ್‌ಗಳನ್ನು ಬುಕ್‌ ಮಾಡುತ್ತಿರುವುದು ವಿಶೇಷವಾಗಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳೇ ತಮ್ಮ ಮತದಾರರನ್ನು ಕರೆತರುವ ವ್ಯವಸ್ಥೆ ಮಾಡುತ್ತಿರುವುದು ಗಮನ ಸೆಳೆದಿದೆ.

ಇನ್ನು ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತದಾರರು, ಮತದಾನಕ್ಕಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಲು ವರ್ಕ್‌ ಫ್ರಾಮ್‌ ಹೋಮ್‌ ಸೌಲಭ್ಯವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸುವಂತೆ ತಮ್ಮ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಮತದಾನಕ್ಕಾಗಿ ಜನರ ಆಸಕ್ತಿ ಕಂಡುಬರುತ್ತಿದ್ದು, ಪ್ರಜಾಪ್ರಭುತ್ವ ಗಟ್ಟಿಯಾಗಲು ಇದು ಉತ್ತಮ ಬೆಳವಣಿಗೆಯಾಗಿದೆ.

IPL_Entry_Point