ಆಪರೇಷನ್‌ ಸಿಂದೂರ ನಂತರ ರಾಕ್ಷಸ ಮಸೂದ್‌ ಬಾಯಲ್ಲಿ ಈ ಮಾತು ಕೇಳಲು ಅದೆಷ್ಟು ವರ್ಷ ಕಾಯಬೇಕಾಯಿತು: ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಆಪರೇಷನ್‌ ಸಿಂದೂರ ನಂತರ ರಾಕ್ಷಸ ಮಸೂದ್‌ ಬಾಯಲ್ಲಿ ಈ ಮಾತು ಕೇಳಲು ಅದೆಷ್ಟು ವರ್ಷ ಕಾಯಬೇಕಾಯಿತು: ರಾಜೀವ ಹೆಗಡೆ ಬರಹ

ಆಪರೇಷನ್‌ ಸಿಂದೂರ ನಂತರ ರಾಕ್ಷಸ ಮಸೂದ್‌ ಬಾಯಲ್ಲಿ ಈ ಮಾತು ಕೇಳಲು ಅದೆಷ್ಟು ವರ್ಷ ಕಾಯಬೇಕಾಯಿತು: ರಾಜೀವ ಹೆಗಡೆ ಬರಹ

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಉಗ್ರರ ಅಡಗುದಾಣ ಧ್ವಂಸ ಮಾಡಿದೆ. ಈ ವೇಳೆ ಉಗ್ರನೊಬ್ಬ ಹಂಚಿಕೊಂಡ ಆ ನೋವು ಭಾರತದ ಅದೆಷ್ಟೋ ಕುಟುಂಬಗಳಿಗೆ ಈಗಲೂ ಬಾಧಿಸುತ್ತಿದೆ.

ಆಪರೇಷನ್‌ ಸಿಂದೂರ, ಉಗ್ರ ಅಝರ್‌ ಮಸೂದ್‌ ಹೇಳಿಕೆ ಬಗ್ಗೆ ಲೇಖನ
ಆಪರೇಷನ್‌ ಸಿಂದೂರ, ಉಗ್ರ ಅಝರ್‌ ಮಸೂದ್‌ ಹೇಳಿಕೆ ಬಗ್ಗೆ ಲೇಖನ

ʼಜೀವಕ್ಕೂ ಹೆಚ್ಚು ಪ್ರೀತಿಸುತ್ತಿದ್ದ ನನ್ನ ಸಹೋದರಿಯನ್ನು ಕೊಂದಿದ್ದಾನೆ. ಸಣ್ಣ ಮಗುವನ್ನು ಕೂಡ ಬಿಟ್ಟಿಲ್ಲ. ಅವಳ ಬದಲಿಗೆ ನಾನೇ ಸಾಯಬಾರದಿತ್ತೆ. ನನಗಾಗಿರುವ ದುಃಖವನ್ನು ವಿವರಸಲಾಗುತ್ತಿಲ್ಲʼ. ಇಂತಹ ಸಾಲುಗಳನ್ನು ಭಾರತದ ಮಾಧ್ಯಮಗಳಲ್ಲಿ ದಶಕಗಳ ಕಾಲ ಓದಿಕೊಂಡು, ಕೇಳಿಸಿಕೊಂಡು ಬಂದಿದ್ದೇವೆ. ಆದರೆ ಪಾಕಿಸ್ತಾನದೊಳಗೆ ಕುಳಿತ ರಾಕ್ಷಸರ ವಿರುದ್ಧ ಭಾರತದ ವೀರ ಯೋಧನ ಪಾಲಕರು ಅಥವಾ ಸಾಮಾನ್ಯ ಜನರು ಈ ರೀತಿ ಕಣ್ಣೀರಿನ ಕೋಡಿ ಹರಿಸುತ್ತಿದ್ದರು. ಇದನ್ನು ಕೇಳಿಸಿಕೊಂಡು ನಮ್ಮ ಪಿತ್ತವನ್ನು ನೆತ್ತಿಗೇರಿಸಿಕೊಂಡು ದಿನ ದೂಡುವುದೇ ಭಾರತೀಯರ ಕಾಯಕವಾಗಿತ್ತು. ಆದರೆ ಇಂದು ಓರ್ವ ಜಾಗತಿಕ ಉಗ್ರ ರಾಕ್ಷಸನಿಂದ ಇಂತಹ ಹೇಳಿಕೆ ಬಂದಾಗ, ರೋಮಾಂಚನವಾಯಿತು. ಈ ಮಾತು ಹೇಳಿದ್ದು ಮತ್ಯಾರೂ ಅಲ್ಲ. ಭಾರತದ ಮೇಲೆ ಅದೆಷ್ಟೋ ದಾಳಿಗೆ ಸಂಚು ರೂಪಿಸಿ, ಸಾವಿರಾರು ಕುಟುಂಬಗಳ ನಗುವನ್ನು ಕಸಿದುಕೊಂಡ ನರರಾಕ್ಷಸ ಅಝರ್‌ ಮಸೂದ್‌ಗೆ ಇಂದು ಮಕ್ಕಳು, ಸಂಬಂಧಿಕರು, ಒಡಹುಟ್ಟಿದವರ ಸಾವಿನ ಬೆಲೆ ಗೊತ್ತಾಗಿದೆ. ಮೋದಿಯನ್ನು ಉದ್ದೇಶಿಸಿ ಮೇಲಿನ ಸಾಲನ್ನು ಆತ ಹೇಳಿದ್ದಾನೆ. ʼಅಪ್ನಾ ಟೈಮ್‌ ಆಯೇಗಾʼ ಎಂದು ಕಾದಿದ್ದವರಿಗೆ, ʼಇದೋ ನಿನ್ನ ಸಮಯʼ ಎನ್ನುವ ಅವಕಾಶವನ್ನು ಸಾಕಾರ ಮಾಡಿಕೊಟ್ಟ ಸೇನೆ ಹಾಗೂ ಸರ್ಕಾರಕ್ಕೆ ನಮೋನಮಃ.

ರೋಮಾಂಚನಗೊಂಡ ಕ್ಷಣ

ದೇಶಭಕ್ತಿಯ ವಿಚಾರಗಳು ಬಂದಾಗಲೆಲ್ಲ ನಾನು ರೋಮಾಂಚನಗೊಳ್ಳುವುದು ಸಾಮಾನ್ಯ. ಆದರೆ ಮೊದಲ ಬಾರಿಗೆ ಸಾವಿನ ಸುದ್ದಿಗೆ ಸಂಬಂಧಿಸಿದ ಪ್ರತಿಕ್ರಿಯೆ ನೋಡಿ ರೋಮಾಂಚನವಾದೆ. ನನ್ನ ಮನಸ್ಸು ಖುಷಿಯಲ್ಲಿ ಕುಣಿಯಿತು. ಸಂಕಟದಲ್ಲಿದ್ದ ಮನಸ್ಸಿಗೆ ಮೊದಲ ಬಾರಿಗೆ ಸಾವಿನ ವಿಚಾರದಲ್ಲಿ ಏನೋ ಒಂಥರಾ ಖುಷಿಯಾಯಿತು. ಭಾರತದ ಅದೆಷ್ಟೋ ಸಾವಿರ ವಿಧವೆಯರ ʼಸಿಂದೂರʼ ಅಳಸಿದ ರಾಕ್ಷಸರಿಗೆ ನಡುಕ ಹುಟ್ಟಿಸಿದ ಆ ಕ್ಷಣವನ್ನು ಆಲೋಚಿಸಿದಾಗಲೆಲ್ಲ ಮನಸ್ಸು ರಿಲ್ಯಾಕ್ಸ್‌ ಆಗುತ್ತಿದೆ.

ತಮ್ಮ ದುರ್ಬುದ್ಧಿ ಹಾಗೂ ತೆವಲಿಗೆ ಆಯುಧ ಹಿಡಿದು ರಕ್ತ ಕಾರುವವರಿಗೆ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುವವರೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ. ದೇಶದ ಬಡ ಜನರ ತಲೆಯನ್ನು ಕೆಡಿಸಿ, ಭಯೋತ್ಪಾದನೆ ಮಾಡುವ ಈ ಕೀಟಗಳು ತಮ್ಮ ಮನೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುತ್ತಿದ್ದರು. ಆದರೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರಾಕ್ಷಸರ ಮನೆಯೊಳಗೆ ನುಗ್ಗಿ ಹೊಡೆಯಲಾಗಿದೆ. ಇದಲ್ಲದೇ ರಾಕ್ಷಸರಿಗೆ ಮನೆಯವರನ್ನು ಕಳೆದುಕೊಂಡಾಗ ಆಗುವ ದುಃಖದ ಟ್ರೇಲರ್‌ ನೀಡಲಾಗಿದೆ.

ನಾನು ವಾಸ್ತವದಲ್ಲಿ ಈ ಹಿಂಸೆ, ಕ್ರೌರ್ಯ ಅಥವಾ ರಕ್ತವನ್ನು ವಿರೋಧಿಸುವ ವ್ಯಕ್ತಿ. ಆದರೆ 26 ಮುಗ್ಧ ಮಹಿಳೆಯರ ʼಸಿಂದೂರʼ ಅಳಸಿದ ಈ ಕ್ರೂರಿಗಳ ಎದುರಿಗೆ ಫೈಶಾಚಿಕ ನೃತ್ಯದ ಮೂಲಕವೇ ಉತ್ತರ ಕೊಡಬೇಕು. ಇವರ ಮುಂದೆ ಅಹಿಂಸೆಯ ಪ್ರವಚನ ಮಾಡಿದರೆ, ನಮ್ಮ ರಕ್ತದಲ್ಲೇ ಸಿಂದೂರ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ. ಆ ಕ್ರೂರಿಯ ಆಸೆಯಂತೆ ಆದಷ್ಟು ಬೇಗ ನರಕದಲ್ಲಿ ಕುಟುಂಬ ಸದಸ್ಯರೊಂದಿಗೆ ಸಂಭ್ರಮಿಸುವ ಅವಕಾಶ ದೊರೆಯುವಂತೆ ನಮ್ಮ ಹೆಮ್ಮೆಯ ಕೆಲಸವನ್ನು ಭಾರತೀಯ ಸೇನೆ ಮಾಡಲಿ. ಇದನ್ನು ಸಂಭ್ರಮಿಸಿ, ದೇಶದ ಜನತೆಗೆ ತಿಳಿಸಲು ನಮ್ಮಲ್ಲಿ ಕೋಟ್ಯಂತರ ಪ್ರೀತಿಯ ಸಹೋದರಿಯರು ಈಗಾಗಲೇ ತಯಾರಾಗಿದ್ದಾರೆ.

ಮುಂಜಾನೆಯ ಸಿಂದೂರ!

ಕಳೆದ ಎರಡು ವಾರಗಳಿಂದ ಪ್ರತಿ ರಾತ್ರಿ ಮಲಗುವಾಗ ಹಾಗೂ ಬೆಳಗ್ಗೆ ಎದ್ದ ಕೂಡಲೇ ಮೊದಲು ಸಂಭಾವ್ಯ ದಾಳಿಗಳ ಬಗ್ಗೆ ಸರ್ಚ್‌ ಮಾಡುತ್ತಿದ್ದೆ. ನಿನ್ನೆ ರಾತ್ರಿಯೂ ಮಲಗುವಾಗ ಅದನ್ನೇ ನೋಡಿ ನಿದ್ರೆಗೆ ಜಾರಿದ್ದೆ. ಸಾಮಾನ್ಯವಾಗಿ ನೆಟ್‌ ಆಫ್‌ ಮಾಡುವ ಮಲಗುವ ನಾನು, ನಿನ್ನೆ ಮರೆತಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ಮೊಬೈಲ್‌ನಲ್ಲಿ ನೂರಾರು ನೋಟಿಫಿಕೇಷನ್‌ಗಳು ಬಂದಿದ್ದವು. ಎಲ್ಲದರಲ್ಲಿಯೂ ಕಾಣಿಸಿದ್ದು ʼಆಪರೇಷನ್‌ ಸಿಂದೂರʼ. ಇದನ್ನು ನೋಡುತ್ತಿದ್ದಂತೆ ನಿದ್ರೆ ಮಂಪರೆಲ್ಲ ಮಾಯವಾಯಿತು. ʼನಮ್ಮ ಸೈನಿಕರು ಹಾಗೂ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಆಗಿದ್ದಾರೆಯೆಲ್ಲವೇʼ ಎನ್ನುವುದನ್ನು ಖಾತ್ರಿ ಮಾಡಿಕೊಂಡೆ. ಅದಾಗಿ ಇಲ್ಲಿಗೆ ಹತ್ತಾರು ಗಂಟೆಗಳು ಕಳೆದಿವೆ.

ನಮ್ಮ 26 ಮಹಿಳೆಯರ ಸಿಂದೂರ ಅಳಿಸಿ, ಮೋದಿಗೆ ಹೋಗಿ ಹೇಳು ಎಂದವರ ವಿರುದ್ಧ ಆಪರೇಷನ್‌ ಆಗಿದೆ ಎನ್ನುವುದನ್ನು ಭಾರತದ ವೀರ ವನಿತೆಯರ ಮೂಲಕ ನಮೋ ಹೇಳಿಸಿಬಿಟ್ಟರು. ಇದೇ ಮೊದಲ ಬಾರಿಗೆ ಕಾರ್ಯಾಚರಣೆಗೆ ಸಂಬಂಧಿಸಿದ ನೂರಾರು ವಿಡಿಯೋ, ಸುದ್ದಿ ನೋಡಿದೆ.ಪ್ರತಿ ಬಾರಿಯೂ ಅದೇ ರೋಮಾಂಚನ ಕಾಣಿಸುತ್ತಿದೆ. ಪೂರ್ಣ ಪ್ರಮಾಣದ ಯುದ್ಧದ ಅಗತ್ಯವಿಲ್ಲ ಅಥವಾ ಬೇಡ ಎನ್ನುವ ನನ್ನ ಹಳೆಯ ಮಾತಿಗೆ ಈ ಕ್ಷಣಕ್ಕೂ ಬದ್ಧವಾಗಿದ್ದುಕೊಂಡು ಇದೆಲ್ಲವನ್ನೂ ಸಂಭ್ರಮಿಸುತ್ತಿದ್ದೇನೆ. ಒಬ್ಬ ಭಾರತೀಯನಾಗಿ ʼಕೀಚಕ ವಧೆʼಯನ್ನು ಖುಷಿ ಪಡದಿದ್ದರೆ ಹೀಗೆ. ದೇಶಕ್ಕೆ ಯುದ್ಧ ಬೇಡ ಎನ್ನುತ್ತೇನೆ ನಿಜ, ಆದರೆ ಪರದೇಶದಲ್ಲಿ ಕುಳಿತ ಪಟ್ಗೋಸಿ ಉಗ್ರರ ಸಂಹಾರವಾದಾಗ ಅದನ್ನು ಸಂಭ್ರಮಿಸಿದರಲು ಸಾಧ್ಯವಿಲ್ಲ. ನಮ್ಮ ಮನೆ ಶೋಕದಲ್ಲಿ ಮುಳುಗಿದಾಗ ಅನ್ಯಾಯವಾಗಿ ಸಂಭ್ರಮಿಸಿದವರ ಕುಟುಂಬದ ಮೇಲೆ ಶಾಂತಿಮಂತ್ರ ಜಪಿಸಲು ನಾನೇನು ಕರ್ನಾಟಕ ಕಾಂಗ್ರೆಸ್‌ನ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿಲ್ಲ.

ಕೊನೆಯದಾಗಿ: ಈ ನೆಲದ ಮೇಲೆ ಭಾರತೀಯರ ರಕ್ತದ ಹನಿ ಬೀಳಿಸಿದ ಪ್ರತಿಯೊಬ್ಬ ರಾಕ್ಷಸನಿಗೆ ಆತನ ಕುಟುಂಬ, ಮನೆ ನಾಶಪಡಿಸಿ ಉತ್ತರ ನೀಡಿದಾಗಲೇ ನಡುಕ ಹುಟ್ಟಲು ಶುರುವಾಗುತ್ತದೆ. ಗನ್‌ ಹಿಡಿದವರಿಗೆ ಗುಲಾಬಿ ನೀಡುವ ಕಾಲ ಹೋಯಿತು. ಈ ರೀತಿ ನುಗ್ಗಿ, ನುಗ್ಗಿ ಹೊಡೆದಾಗಲೇ ಇನ್ನೊಮ್ಮೆ ದಾಳಿ ನಡೆಸಲು ಹೆದರುತ್ತಾರೆ. ಹಾಗೆಯೇ ಯುದ್ಧ ಎನ್ನುವುದು ದೂರದಲ್ಲಿಯೇ ಶಾಂತವಾಗಿ ಕುಳಿತಿರುತ್ತದೆ.

- ರಾಜೀವ ಹೆಗಡೆ, ಲೇಖಕ- ಪತ್ರಕರ್ತ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.