ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬಂದ್, ಕೊಡಗಿನತ್ತ ನಿಧಾನವಾಗಿ ಹೆಚ್ಚುತ್ತಿರುವ ಪ್ರವಾಸಿಗರ ದಂಡು: ಮೇ ತಿಂಗಳಲ್ಲಿ ಅಧಿಕಗೊಳ್ಳುವ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬಂದ್, ಕೊಡಗಿನತ್ತ ನಿಧಾನವಾಗಿ ಹೆಚ್ಚುತ್ತಿರುವ ಪ್ರವಾಸಿಗರ ದಂಡು: ಮೇ ತಿಂಗಳಲ್ಲಿ ಅಧಿಕಗೊಳ್ಳುವ ನಿರೀಕ್ಷೆ

ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬಂದ್, ಕೊಡಗಿನತ್ತ ನಿಧಾನವಾಗಿ ಹೆಚ್ಚುತ್ತಿರುವ ಪ್ರವಾಸಿಗರ ದಂಡು: ಮೇ ತಿಂಗಳಲ್ಲಿ ಅಧಿಕಗೊಳ್ಳುವ ನಿರೀಕ್ಷೆ

ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಲಿ ನಂತರ ಅಲ್ಲಿನ ಪ್ರವಾಸೋದ್ಯಮ ಕುಸಿದಿದೆ. ಜನ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಕೊಡಗಿನತ್ತ ಮುಖ ಮಾಡ ತೊಡಗಿದ್ದಾರೆ.

ಕೊಡಗಿನ ಪ್ರಮುಖ ಪ್ರವಾಸಿ ತಾಣಗಳು ಜನರನ್ನು ಸೆಳೆಯುತ್ತಿವೆ,
ಕೊಡಗಿನ ಪ್ರಮುಖ ಪ್ರವಾಸಿ ತಾಣಗಳು ಜನರನ್ನು ಸೆಳೆಯುತ್ತಿವೆ,

ಮಡಿಕೇರಿ: ಭಾರತದ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ ನಂತರ ಪ್ರವಾಸೋದ್ಯಮ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಸುರಕ್ಷತೆ ಕಾರಣದಿಂದ ಮೇ ತಿಂಗಳಲ್ಲಿ ಕಾಶ್ಮೀರಕ್ಕೆ ಹೋಗಬೇಕಾಗಿದ್ದ ಪ್ರವಾಸಿಗರು ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ. ಅದರಲ್ಲೂ ಕರ್ನಾಟಕದಿಂದಲೂ ಹೆಚ್ಚಿನ ಪ್ರವಾಸಿಗರು ಕಾಶ್ಮೀರದತ್ತ ಮುಖ ಮಾಡಬೇಕಿತ್ತು. ಅಲ್ಲಿನ ಚಿತ್ರಣ ಕೆಲವೇ ದಿನಗಳಲ್ಲಿ ಬದಲಾಗಿರುವ ಕಾರಣದಿಂದ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳ ಪ್ರವಾಸಿಗರು ಈಗ ನಿಧಾನವಾಗಿ ಕರ್ನಾಟಕದ ಕಾಶ್ಮೀರ ಕೊಡಗಿನತ್ತ ಮುಖ ಮಾಡತೊಡಗಿದಿದ್ದಾರೆ. ಬೇಸಿಗೆ ರಜೆ, ಸರ್ಕಾರಿ ರಜೆಗಳ ಕಾರಣದಿಂದ ಕಳೆದ ಮೂರ್ನಾಲ್ಕು ದಿನದಿಂದ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ವಾರಾಂತ್ಯದವರೆಗೂ ಪ್ರವಾಸಿಗರ ಪ್ರಮಾಣ ಹೆಚ್ಚೇ ಇರಲಿದೆ. ಮೇ ತಿಂಗಳಲ್ಲಿ ರಜೆಗಳು ಇರುವುದರಿಂದ ಇನ್ನಷ್ಟು ಪ್ರವಾಸಿಗರು ಕೊಡಗಿನತ್ತ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

ಕೊಡಗು ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ಸಮುದ್ರವೊಂದು ಬಿಟ್ಟರೆ ಮಿಕ್ಕೆಲ್ಲಾ ಪ್ರವಾಸಿ ತಾಣಗಳಿವೆ. ಕಾವೇರಿ ನದಿ ತೀರದ ತಾಣಗಳು, ಬೆಟ್ಟ ಗುಡ್ಡಗಳ ಸಾಲು, ಅರಣ್ಯ ಪ್ರದೇಶ, ವನ್ಯಜೀವಿಗಳ ಸಫಾರಿ, ಕಾಫಿ ಸೇರಿದಂತೆ ಮಸಾಲೆ ಹಾಗೂ ಇತರೆ ಉತ್ಪನ್ನಗಳ ಮಾರಾಟದಿಂದ ಕೊಡಗು ಜನಪ್ರಿಯ ತಾಣವೂ ಹೌದು. ಈಗಾಗಲೇ ಪ್ರವಾಸೋದ್ಯಮಕ್ಕೆ ಬೇಕಾದ ಆತಿಥ್ಯ, ಹೊಟೇಲ್‌ ಉದ್ಯಮವೂ ಇಲ್ಲಿ ಬಲಗೊಂಡಿದೆ. ಕೆಲ ವರ್ಷದ ಹಿಂದೆ ಭಾರೀ ಮಳೆಯಿಂದ ಕೊಡಗಿನಲ್ಲಿ ಅನಾಹುತವಾದಾಗ ಪ್ರವಾಸೋದ್ಯಮದ ಮೇಲೆ ನಿಯಂತ್ರಣ ಹೇರುವ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಅಂತಹ ಪ್ರಯತ್ನಗಳೇನು ಆಗಿಲ್ಲ.

ಕೊಡಗಿನ ಹವಾಮಾನ ಗುಣಲಕ್ಷಣಗಳು ವರ್ಷಪೂರ್ತಿ, ವಿಶೇಷವಾಗಿ ಬೇಸಿಗೆಯಲ್ಲಿ ಆಹ್ಲಾದಕರವಾಗಿರುತ್ತದೆ. ಬೇಸಿಗೆಯ ಸರಾಸರಿ ತಾಪಮಾನ (ಮಾರ್ಚ್ ನಿಂದ ಜೂನ್ ಮಧ್ಯಭಾಗ) 26 ಡಿಗ್ರಿ ಸೆಲ್ಸಿಯಸ್‌. ಮಾನ್ಸೂನ್ (ಜೂನ್ ಮಧ್ಯಭಾಗದಿಂದ ಸೆಪ್ಟೆಂಬರ್) ಸೇರಿದಂತೆ ಜಿಲ್ಲೆಯ ಸರಾಸರಿ ವಾರ್ಷಿಕ ಮಳೆ ಸುಮಾರು 310 ಸೆಂ.ಮೀ. ಮತ್ತು ಚಳಿಗಾಲ (ನವೆಂಬರ್ ಅಂತ್ಯದಿಂದ ಫೆಬ್ರವರಿ) ಸಾಕಷ್ಟು ತಂಪಾಗಿರುತ್ತದೆ, ಆಗ ಸರಾಸರಿ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಕೆಲವು ಮೇಲ್ಭಾಗದ ಗುಡ್ಡಗಾಡು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಇನ್ನೂ ಕಡಿಮೆಯಾಗಲಿದೆ. ಇಲ್ಲಿನ ಹವಾಮಾನವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಾರಣದಿಂದ ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೆಲ್ಲ ಕರೆಯಿಸಿಕೊಳ್ಳುವ ಕೊಡಗು ಪ್ರವಾಸಿಗರ ಕಣ್ಮನ ಸೆಳೆಯುವ ಬಹಳ ಅಚ್ಚುಮೆಚ್ಚಿನ ಸ್ಥಳವೂ ಹೌದು. ಜಗತ್ತಿನ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಕೊಡಗು ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಚಿಕ್ಕಮಗಳೂರು ಬಿಟ್ಟರೆ ಅತ್ಯುತ್ತಮ ಬೆಟ್ಟಗಳು, ಹಸಿರು ಇರುವುದು ಕೊಡಗಿನಲ್ಲಿಯೇ ಆಗಿರುವುದರಿಂದ ಒಂದು ದಿನದಿಂದ ಮೂರ್ನಾಲ್ಕು ದಿನದವರೆಗೂ ಇದ್ದು ಹೋಗುವ ಪ್ರವಾಸಿಗರು ಇಲ್ಲಿ ಅಧಿಕ.ಇನ್ನು ಕೋವಿಡ್‌ ಸಮಯದ ಎರಡು ವರ್ಷದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದನ್ನು ಬಿಟ್ಟರೆ ವರ್ಷಕ್ಕೆ ಸರಾಸರಿ 30 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಅಂದಾಜಿದೆ. ಕಳೆದ ಎರಡು ವರ್ಷದಲ್ಲಿ ಪ್ರವಾಸಿಗರ ಪ್ರಮಾಣದಲ್ಲಿ ಏರಿಕೆಯಂತೂ ಆಗಿದೆ.

ಈ ವರ್ಷವೂ ಬೇಸಿಗೆ ರಜಾ ದಿನಗಳು ಆರಂಭವಾಗಿ ಎರಡು ತಿಂಗಳೇ ಆಗುತ್ತಾ ಬಂದಿದೆ. ಮಡಿಕೇರಿಗೆ ಪ್ರವಾಸಿಗರು ಆಗಮಿಸಿದ್ದಾರೆ ಕೂಡ. ಆದರೆ ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಹೆಚ್ಚಿನ ಪ್ರವಾಸಿಗರು ಹೋಗಿದ್ದರಿಂದ ಈ ಭಾಗಕ್ಕೆ ಬಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದರೊಟ್ಟಿಗೆ ಕಾಶ್ಮೀರದಲ್ಲಿ ಸರ್ಕಾರ ರಚನೆಯಾಗಿ ಪರಿಸ್ಥಿತಿ ತಿಳಿಗೊಂಡಿದ್ದರಿಂದ ಹೆಚ್ಚಿನ ಭಾರತೀಯ ಪ್ರವಾಸಿಗರು ಅತ್ತ ಮುಖ ಮಾಡಿದ್ದರು. ಕರ್ನಾಟಕದ ಕೊಡಗು ಸೇರಿದಂತೆ ಈ ಭಾಗದ ಕಣಿವೆ ಭಾಗದ ಪ್ರವಾಸೋದ್ಯಮ ದುಬಾರಿ ಎನ್ನುವ ಭಾವನೆ ಪ್ರವಾಸಿಗರಲ್ಲಿದೆ. ಕಾಶ್ಮೀರದ ಪ್ಯಾಕೇಜ್‌ ಕಡಿಮೆ ಮೊತ್ತಕ್ಕೆ ಸಿಗುವುದರಿಂದ ಹೆಚ್ಚಿನ ಪ್ರವಾಸಿಗರು ಅತ್ತ ಹೊರಟಿದ್ದೂ ಇದೆ. ಈಗ ಪರಿಸ್ಥಿತಿ ಬದಲಾಗಿದೆ.ಕಾಶ್ಮೀರದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಕೇರಳದ ವಯನಾಡು,ಮುನ್ನಾರ್‌, ತಮಿಳುನಾಡಿನ ಊಟಿ, ಕೊಡೈಕೆನಾಲ್‌, ಕರ್ನಾಟಕದ ಕೊಡಗು ಹಾಗೂ ಚಿಕ್ಕಮಗಳೂರಿನತ್ತ ಭಾರತೀಯ ಪ್ರವಾಸಿಗರು ಬರಬಹುದು ಎನ್ನುವ ಅಂದಾಜಿದೆ. ನಾಲ್ಕೈದು ದಿನಗಳಿಂದ ಕೊಡಗಿನಲ್ಲಿ ಪ್ರವಾಸಿಗರ ಪ್ರಮಾಣ ಕೊಂಚ ಹೆಚ್ಚಿರುವುದು ಇದನ್ನೂ ಪುಷ್ಟೀಕರಿಸುತ್ತವೆ.

ಹಲವು ಕಾರಣದಿಂದ ಕೊಡಗಿನಲ್ಲಿ ಈ ಬಾರಿ ಪ್ರವಾಸಿಗರ ಸಂಖ್ಯೆ ಬೇಸಿಗೆಯಲ್ಲಿ ಕಡಿಮೆಯಿದೆ. ಪ್ರಯಾಗ್‌ರಾಜ್‌ ಕುಂಭಮೇಳ, ಕಾಶ್ಮೀರದಲ್ಲಿ ಚೇತರಿಸಿಕೊಂಡಿದ್ದ ಪ್ರವಾಸೋದ್ಯಮವೂ ಕಾರಣ ಇರಬಹುದು. ಕಾಶ್ಮೀರದ ಘಟನೆ ನಂತರ ಪ್ರವಾಸಿಗರು ಇತ್ತ ಬರುತ್ತಿರಲೂ ಬಹುದು. ಎರಡು ಮೂರು ದಿನದಿಂದ ಕೊಡಗಿನಲ್ಲಿ ಪ್ರವಾಸಿಗರ ಪ್ರಮಾಣ ಏರಿಕೆ ಕಂಡಿದೆ. ಮೇ ತಿಂಗಳು ಪೂರ್ತಿ ಹೀಗೆಯೇ ಇದ್ದರೆ ಕಾಶ್ಮೀರದ ಪರಿಣಾಮ ಎನ್ನಬಹುದು ಎನ್ನುತ್ತಾರೆ ಹಿರಿಯ ಪತ್ರಕರ್ತ ಎಚ್‌.ಟಿ. ಅನಿಲ್‌.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.