Kodagu News: ಮುಂಗಾರು ಪ್ರವಾಸಕ್ಕೆಂದು ಕೊಡಗಿಗೆ ಬಂದ ಮೈಸೂರು ಯುವಕ ನೀರು ಪಾಲು, ಮುಂದುವರೆದ ಹುಡುಕಾಟ
ಕೊಡಗಿನಲ್ಲಿ ಪ್ರವಾಸಕ್ಕೆ ಬಂದ ಯುವ ಗುಂಪಿನಲ್ಲಿ ಒಬ್ಬಾತ ನೀರು ಪಾಲಾಗಿರುವ ಘಟನೆ ನಡೆದಿದೆ.

ಮಡಿಕೇರಿ: ಮಳೆಗಾಲ ತೀವ್ರಗೊಂಡು ಕೊಡಗಿನಲ್ಲಿ ಈಗ ಹವಾಮಾನ ಬದಲಾಗಿದೆ. ಮುಂಗಾರು ಹಂಗಾಮು ಶುರುವಾದರೆ ಇಲ್ಲಿಗೆ ಯುವಕ ಯುವತಿಯರ ತಂಡಗಳೇ ಲಗ್ಗೆ ಇಡುತ್ತವೆ. ಅದರಲ್ಲೂ ನೀರು ಇರುವ ಜಾಗವನ್ನು ಹುಡುಕಿಕೊಂಡು ಬರುವುದುಂಟು. ಇಂತಹ ವೇಳೆ ಅವರು ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದುಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಮುಂಗಾರು ಅವಧಿಯಲ್ಲಿ ಇಂತಹ ದುರಂತವೊಂದು ಭಾನುವಾರ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ. ಮೈಸೂರಿನಿಂದ ಬಂದಿದ್ದ ಯುವಕ ಯುವತಿಯರ ಗುಂಪು ಹಾರಂಗಿ ಹಿನ್ನೀರಿನಲ್ಲಿ ಆಟವಾಡಲು ಹೋದಾಗ ದುರಂತ ಸಂಭವಿಸಿದ್ದು ಯುವಕನೊಬ್ಬ ನೀರು ಪಾಲಾಗಿದ್ದಾನೆ. ಆತನಿಗಾಗಿ ಹುಟುಕಾಟ ಮುಂದುವರಿದಿದೆ.
ಇದು ನಡೆದಿರುವುದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ. ಮೈಸೂರಿನ ಶಶಿ ಎಂಬಾತ ನೀರಿನಲ್ಲಿ ಮುಳುಗಿದ್ದು, ಆತನಿಗಾಗಿ ಭಾನುವಾರ ಸಂಜೆವರೆಗೂ ಹುಡುಕಾಟ ಮುಂದುವರೆದಿತ್ತು.
ಶಶಿ ಹಾಗೂ ಸ್ನೇಹಿತರ ಗುಂಪು ಕೊಡಗಿಗೆ ಪ್ರವಾಸ ಕೈಗೊಂಡಿತ್ತು. ಕುಶಾಲನಗರ ಸಮೀಪವಿರುವ ಹೆರೂರು ಗ್ರಾಮದಲ್ಲಿ ಹಿನ್ನೀರು ಇದ್ದು ಅಲ್ಲಿಗೆ ಆಗಮಿಸಿತ್ತು. ಈ ವೇಳೆ ಈಜಲು ಒಂದಿಬ್ಬರು ಇಳಿದಿದ್ದು, ಕೆಲ ಹೊತ್ತು ಆಟವಾಡಿದ್ದಾರೆ. ಈ ವೇಳೆ ಶಶಿ ನೀರಿನಲ್ಲಿ ಮುಳುಗಿದ್ದು ಮುಳುಗಿದ್ದಾರೆ. ಆತನನ್ನು ಉಳಿಸಿಕೊಳ್ಳಲು ಇತರ ಸದಸ್ಯರು ಪ್ರಯತ್ನಿಸಿದರೂ ಆಗಿಲ್ಲ. ಕೊನೆಗೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ತಂಡಗಳು ಸ್ಥಳಕ್ಕೆ ಧಾವಿಸಿ ಹುಡುಕಾಟ ಮುಂದುವರೆಸಿದವು. ಸ್ಥಳೀಯರೂ ಕೈ ಜೋಡಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೂ ಶಶಿ ಪತ್ತೆಯಾಗಲಿಲ್ಲ. ಜತೆಗಿದ್ದ ಗೆಳೆಯ ಗೆಳತಿಯರ ಆಕ್ರಂದನ ಮುಗಿಲುಮುಟ್ಟಿತ್ತು.
ಸುಂಟಿಕೊಪ್ಪ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಶಶಿ ಕುಟುಂಬವರಿಗೆ ಮಾಹಿತಿ ನೀಡಿದ್ದರಿಂದ ಅವರು ಆಗಮಿಸಿದ್ದರು.
ಬೆಳಿಗ್ಗೆಯೇ ಮೈಸೂರಿನಿಂದ ಹೊರಟು ಇಲ್ಲಿಗೆ ಬಂದಿದ್ದೆವು. ಕೊಡಗಿನಲ್ಲಿ ಮಳೆ ಚೆನ್ನಾಗಿ ಆಗಿರುವುದರಿಂದ ವಾತಾವರಣ ಚೆನ್ನಾಗಿರಲಿದೆ ಎನ್ನುವ ಕಾರಣಕ್ಕೆ ಇಲ್ಲಿಗೆ ಹೊರಟಿದ್ದೆವು. ಸ್ನೇಹಿತರೆಲ್ಲರೂ ಚೆನ್ನಾಗಿಯೇ ಆಟವಾಡಿಕೊಂಡಿದ್ದೆವು. ಏಕಾಏಕಿ ಶಶಿ ನೀರಿನಲ್ಲಿ ಸಿಲುಕಿದ್ದರಿಂದ ಸಮಸ್ಯೆಯಾಯಿತು ಎಂದು ಜತೆಗಿದ್ದವರು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಈ ಕುರಿತು ಕೊಡಗಿನ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.