ಕನ್ನಡ ಸುದ್ದಿ  /  Karnataka  /  Kolar News Telangana Bjp Leader Sanjay Bandi Allegation On Congress And Jds Karnataka Election News In Kannada Rst

Karnataka Election 2023: ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳು ಸನಾತನ ಧರ್ಮ ಸಂಸ್ಕೃತಿಯನ್ನು ಅವಮಾನಿಸುವ ರೀತಿ ವರ್ತಿಸುತ್ತವೆ; ಸಂಜಯ್‌ ಬಂಡಿ

Telangana BJP Leader Sanjay Bandi: ʼಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಹಿಂದೂ ಧರ್ಮ ಹಾಗೂ ಸನಾತನ ಸಂಸ್ಕೃತಿಯನ್ನು ಅವಮಾನಿಸುವ ರೀತಿ ವರ್ತಿಸುತ್ತವೆ. ಈ ಪಕ್ಷಗಳಿಗೆ ಹಣ ಬೇಕು, ಜನ ಬೇಡʼ ಎಂದು ತೆಲಂಗಾಣ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಬಂಡಿ ಸಂಜಯ್‌ ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ ಸಂಜಯ್‌ ಬಂಡಿ
ಕೋಲಾರ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ ಸಂಜಯ್‌ ಬಂಡಿ (ANI)

ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಈ ಹೊತ್ತಿನಲ್ಲಿ ಪ್ರಚಾರದ ಕಾವು ಜೋರಾಗಿದೆ. ಕೇಂದ್ರದ ನಾಯಕರು ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳ ಪಕ್ಷದ ಪ್ರಮುಖರು ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ನೆರೆಯ ತೆಲಂಗಾಣದ ಕಾಂಗ್ರೆಸ್‌ ನಾಯಕರು ರಾಜ್ಯದಲ್ಲಿ ಈಗಾಗಲೇ ಚುನಾವಣೆ ಪ್ರಚಾರ ನಡೆಸುತ್ತಿದ್ದು, ಬಿಜೆಪಿಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಲು ಆರಂಭಿಸಿದ್ದಾರೆ.

ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಶನಿವಾರ (ಏಪ್ರಿಲ್‌ 29) ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ತೆಲಂಗಾಣ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಬಂಡಿ ಸಂಜಯ್‌ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಬಂಡಿ ಸಂಜಯ್‌ ʼಇಲ್ಲಿ ಖರ್ಗೆ ಎಂಬ ಹೆಸರಿನ ವ್ಯಕ್ತಿಯೊಬ್ಬರಿದ್ದಾರೆ, ಅವರು ಏನು ಹೇಳುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಹಿಂದೂ ಸಂಸ್ಕೃತಿ ಹಾಗೂ ಸನಾತನ ಧರ್ಮಕ್ಕೆ ಅವಮಾನ ಮಾಡುವ ರೀತಿ ವರ್ತಿಸುತ್ತವೆ. ನಿನ್ನೆ ಖರ್ಗೆ ಮುಸ್ಲಿಂ ಮುಖಂಡರೊಬ್ಬರ ಮನೆಗೆ ಹೋಗಿದ್ದರು. ಅವರು ಅಲ್ಲಿ ಹಣೆ ಮೇಲಿದ್ದ ತಿಲಕವನ್ನು ಅಳಸಿ ಹಾಕಿದ್ದರು. ಮುಸ್ಲಿಂ ಮುಖಂಡರು ತಿಲಕ ಅಳಿಸುವಂತೆ ಇವರಿಗೆ ಹೇಳಿರಲಿಲ್ಲ, ಅವರು ಹೇಳುವುದೂ ಇಲ್ಲ. ಯಾಕೆಂದರೆ ಅವರು ಬೇರೆ ಧರ್ಮಗಳನ್ನು ಗೌರವಿಸುತ್ತಾರೆ. ಆದರೆ ಈ ಖರ್ಗೆ ಮಾಡಿದ್ದೇನು. ಇಂತಹವರು ಕರ್ನಾಟಕಕ್ಕೆ ಬೇಕಾ? ಇಂತಹವರು ಕರ್ನಾಟಕದಲ್ಲಿ ಆಡಳಿತ ನಡೆಸುವುದು ಬೇಕೇ ಬೇಡವೇ ಎಂಬುದನ್ನು ಜನರು ಯೋಚಿಸಬೇಕುʼ ಎಂದು ಖರ್ಗೆ ಹಾಗೂ ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ʼಮೇ 10ರವರೆಗೆ ಯಾರೂ ಮಲಗಬಾರದು. ನಾವು ಮಲಗಬಾರದು ಮತ್ತು ಕಾಂಗ್ರೆಸ್‌, ಜೆಡಿಎಸ್‌ಗೆ ನಿದ್ದೆ ಮಾಡಲು ಬಿಡಬಾರದು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಹಣ ಹಂಚುತ್ತಿದ್ದಾರೆ. ಕಾಂಗ್ರೆಸ್‌ ಹಣದ ಮೇಲೆ ನಂಬಿಕೆ ಇಟ್ಟಿದೆ. ಆದರೆ ನಾವು ಬಿಜೆಪಿಯವರು ಜನರನ್ನು ನಂಬುತ್ತೇವೆ. ಇಷ್ಟು ವರ್ಷ ಇಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೆದಿತ್ತು. ಆದರೆ ಇಲ್ಲಿಗೆ ಯಾವುದಾದರೂ ಕಂಪನಿ ಬಂದಿದ್ದು ಇದೆಯೇ? ಇಲ್ಲಿನ ಸ್ಥಳೀಯರಿಗೆ ಕೆಲಸ ಸಿಕ್ಕಿದೆಯೇ? ರಸ್ತೆಗಳನ್ನು ಮಾಡಲಾಗಿದೆಯೇ? ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆಯೇ? ಕನಿಷ್ಠ ಸೌಲಭ್ಯಗಳನ್ನಾದ್ದಾರೂ ನೀಡಿದ್ದಾರಾ? ಎಂದು ಕೋಲಾರದ ಜನರನ್ನು ಪ್ರಶ್ನಿಸಿದ್ದಾರೆ. ಈ ಪಕ್ಷಗಳಿಗೆ ಜನರ ಮೇಲೆ ಕಾಳಜಿ ಇಲ್ಲ. ಅವರಿಗೆ ಹಣ ಬೇಕು, ಜನ ಬೇಡ. ಆ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಯಾವ ಕಾರಣಕ್ಕೆ ಮತ ಹಾಕಬೇಕು ನೀವೇ ಯೋಚಿಸಿʼ ಎಂದಿದ್ದಾರೆ.

ʼಇಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು. ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷದ ಕೈಗೆ ಅಧಿಕಾರ ಸಿಕ್ಕರೆ ಕರ್ನಾಟಕವನ್ನೇ ಎಟಿಎಂ ಆಗಿ ಬಳಸುತ್ತಾರೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಹಣವನ್ನು ಎಟಿಎಂ ಆಗಿ ಚುನಾವಣೆಗೆ ಹೋಗುವ ರಾಜ್ಯಗಳಿಗೆ ಹಂಚುತ್ತದೆ, ಆದರೆ ಕರ್ನಾಟಕದ ಅಭಿವೃದ್ಧಿಗೆ ಅಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಸಿಎಂ ಆಗಬೇಕು, ಮಂತ್ರಿ ಆಗಬೇಕು ಆದರೆ ಅವರ ಬಳಿ ಯೋಜನೆ ಇಲ್ಲ, ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಅವರಿಗೆ ರಾಜ್ಯದ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಅವರಿಗೆ ಬೇಕಾಗಿರುವುದು ಬಿಜೆಪಿಯನ್ನು ಸೋಲಿಸುವುದು ಮತ್ತು ಕರ್ನಾಟಕದ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವುದುʼ ಎಂದು ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

IPL_Entry_Point