ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ; ಎಡಿಟಿಂಗ್ಗೆ ಮನಸೋತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ
KSRTC Bus Viral Video: ಸಾಮಾಜಿಕ ತಾಣಗಳಲ್ಲಿ ಕೆಎಸ್ಆರ್ಟಿಸಿ ಬಸ್ ಬದಲಾದ ಬಗೆಯ ವಿಡಿಯೋ ವೈರಲ್ ಆಗಿದೆ. ಇದನ್ನು ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ ಎಂದು ಉದ್ಗರಿಸಿದ್ದಾರೆ. ಇಲ್ಲಿದೆ ವಿಡಿಯೋ ಮತ್ತು ಪೂರಕ ವರದಿ.

KSRTC Bus Viral Video: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಕಾಲಾನುಕ್ರಮದಲ್ಲಿ ಬಹಳಷ್ಟು ರೂಪಾಂತರವಾಗಿವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೇನು ವಿಶೇಷ ಅಂತ ತಲೆಕೆರೆದುಕೊಳ್ಳಬೇಡಿ. ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಟ್ವೀಟ್ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಬದಲಾದ ಬಗೆ ಮತ್ತೆ ಗಮನಸೆಳೆದಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ, ‘ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ’ ಎಂದು ಉದ್ಗರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ
ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯ ಸರ್ಕಾರ ರಚನೆಯಾದ ಬಳಿಕ 1948ರ ಸೆಪ್ಟೆಂಬರ್ 12 ರಂದು ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (ಎಂ.ಜಿ.ಆರ್.ಟಿ.ಡಿ.) ಶುರುವಾಗಿದ್ದು, 120 ಬಸ್ಗಳೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಆರಂಭದಲ್ಲಿ ಸರ್ಕಾರದ ಭಾಗವಾಗಿ ಇಲಾಖೆಯಂತೆ ಕೆಲಸ ಮಾಡುತ್ತಿತ್ತು. ಬಳಿಕ 1961ರ ಆಗಸ್ಟ್ 1 ರಂದು ಸ್ವತಂತ್ರ ಸಂಸ್ಥೆಯಾಗಿ ಬದಲಾಯಿತು. ಎಂ.ಎಸ್.ಆರ್.ಟಿ.ಸಿ. ಸಂಸ್ಥೆ ಸ್ಥಾಪನೆಯಾಯಿತು.
ಎಂ.ಎಸ್.ಆರ್.ಟಿ.ಸಿ. ಪ್ರಾರಂಭದಲ್ಲಿ, ಪ್ರಯಾಣಿಕರ ಸಾರಿಗೆ ಸೇವೆಗಳನ್ನು 6 ವಿಭಾಗಗಳಲ್ಲಿ ಅಂದರೆ– 5 ವಿಭಾಗಗಳು ಗ್ರಾಮಾಂತರ ಸೇವೆಗಳನ್ನು ಮತ್ತು1 ವಿಭಾಗವು ಬೆಂಗಳೂರಿನ ನಗರ ಸಾರಿಗೆ ಸೇವೆಗಳನ್ನು-ಕಾರ್ಯಾಚರಿಸುತ್ತಿದ್ದವು. ಮುಂದಿನ ಕೆಲವು ವರ್ಷಗಳ ಬಳಿಕ ಪರಸ್ಪರ ಒಪ್ಪಂದದ ಆಧಾರದ ಮೇಲೆ ನೆರೆರಾಜ್ಯಗಳಿಗೆ 40 ಅಂತರರಾಜ್ಯ ಮಾರ್ಗಗಳಲ್ಲಿ (ಮಹಾರಾಷ್ಟ್ರ 29, ಗೋವಾ 1, ಆಂಧ್ರಪ್ರದೇಶ 7, ತಮಿಳುನಾಡು 2 ಮತ್ತು ಕೇರಳ 1) ಕಾರ್ಯಾಚರಣೆ ನಡೆಸಿದ್ದವು. ಹೀಗೆ, ಕಾಲಾನುಕ್ರಮದಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಬದಲಾದಾಗ ಎಂಎಸ್ಆರ್ಟಿಸಿ ಸಂಸ್ಥೆ ಕೆಎಸ್ಅರ್ಟಿಸಿ ಸಂಸ್ಥೆಯಾಯಿತು. ಬಿಟಿಎಸ್ ಸಂಸ್ಥೆ ಬಿಎಂಟಿಸಿ ಆಯಿತು. ಇದೇ ರೀತಿ ಬಸ್ಗಳಲ್ಲೂ ಬದಲಾವಣೆಗಳಾದವು. ಅತ್ಯಾಧುನಿಕ ಸೌಕರ್ಯಗಳ ಬಸ್ಗಳು ಕೆಎಸ್ಆರ್ಟಿಸಿಯ ಭಾಗವಾದವು.
ಈ ಬದಲಾವಣೆಯನ್ನು ದಾಖಲಿಸುವಂತೆ ಸೃಜನಶೀಲವಾಗಿ ವಿಡಿಯೋ ಎಡಿಟ್ ಮಾಡಿ ಯಾರೋ ಹಂಚಿಕೊಂಡಿದ್ದರು. ಇದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನಸೆಳೆದಿತ್ತು. ಅವರು ಅದನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದು, ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ ಎಂದು ಉದ್ಗರಿಸಿದ್ದಾರೆ. ಎಡಿಟಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವೈರಲ್ ವಿಡಿಯೋ ಟ್ವೀಟ್
ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಸಂಜೆ 6 ಗಂಟೆಗೆ ಈ ಟ್ವೀಟ್ ಮಾಡಿದ್ದು, 26,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 1400ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಇನ್ನು ಕಾಮೆಂಟ್ಗಳನ್ನು ಗಮನಿಸುವುದಾದರೆ, ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದಿವೆ. ಅದೂ ಅಲ್ಲದೆ, ಕೆಲವರು ಬೇಡಿಕೆಗಳನ್ನೂ ಉಲ್ಲೇಖಿಸಿದ್ದಾರೆ.
ಅನಿಲ್ ಬುದುರ್ ಅವರು, ಕೆಎಸ್ಆರ್ಟಿಸಿಯ ವರ್ಕ್ಶಾಪ್ ಕೌಶಲ್ಯ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರ, ಹೊಸ ಮಾದರಿಯ ಬಸ್ ಶಿವಮೊಗ್ಗದಿಂದ ಬೆಂಗಳೂರು ತಲುಪೋದಕ್ಕೆ 7 ಗಂಟೆ ತಗೊಳ್ಳುತ್ತಿದೆ ಎಂದು ಅಹವಾಲು ಹೇಳಿಕೊಂಡಿದ್ಧಾರೆ.
ಮೊದ್ಲು KSRTC ನೌಕರರ ವೇತನ ಹೆಚ್ಚಳ ಮಾಡಿ ಪುಣ್ಯ ಕಟ್ಕೊಳ್ಳಿ, ಆಮೇಲೆ edit ಪ್ರಶಂಸೆ ಮಾಡಿವರಂತೆ. ಪಾಪ ಆ ನೌಕರರ ಸಂಬಳ ಕೇಳಿದ್ರೆ ಅಯ್ಯೋ ಅನಿಸುತ್ತೆ ಎಂದು ಅಲೆಮಾರಿ ಅಂಡಮಾನ್ ಖಾತೆಯಿಂದ ಕಾಮೆಂಟ್ ಬಂದಿದೆ.
