ಮಂಡ್ಯ ಲೋಕಸಭೆ ಟಿಕೆಟ್ ಮಿಸ್ ಮಾಡಿಕೊಂಡ ಸುಮಾಲತಾಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಯ ಆಫರ್; ವರ್ಕೌಟ್ ಆಗುತ್ತಾ ಬಿಜೆಪಿ ಹೊಸ ಪ್ಲಾನ್?
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಲೋಕಸಭೆ ಟಿಕೆಟ್ ಮಿಸ್ ಮಾಡಿಕೊಂಡ ಸುಮಾಲತಾಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಯ ಆಫರ್; ವರ್ಕೌಟ್ ಆಗುತ್ತಾ ಬಿಜೆಪಿ ಹೊಸ ಪ್ಲಾನ್?

ಮಂಡ್ಯ ಲೋಕಸಭೆ ಟಿಕೆಟ್ ಮಿಸ್ ಮಾಡಿಕೊಂಡ ಸುಮಾಲತಾಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಯ ಆಫರ್; ವರ್ಕೌಟ್ ಆಗುತ್ತಾ ಬಿಜೆಪಿ ಹೊಸ ಪ್ಲಾನ್?

Sumalatha Ambareesh: ಮಂಡ್ಯ ಟಿಕೆಟ್ ತಪ್ಪಿಸಿಕೊಂಡಿರುವ ಸುಮಲತಾ ಅಂಬರೀಶ್‌ಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಆಫರ್ ನೀಡುವ ಸಾಧ್ಯತೆ ಇದ್ದು, ಇಂದು ದೆಹಲಿಗೆ ಬರುವಂತೆ ಬಿಜೆಪಿ ನಾಯಕರು ಬುಲಾವ್ ನೀಡಿದ್ದಾರೆ.

ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಷ್ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಲೋಕಸಭೆ ಟಿಕೆಟ್ ಸಂಬಂಧ ಚರ್ಚೆ ನಡೆಸಿದ್ದರು.
ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಷ್ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಲೋಕಸಭೆ ಟಿಕೆಟ್ ಸಂಬಂಧ ಚರ್ಚೆ ನಡೆಸಿದ್ದರು. (PTI)

ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election 2024) ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಮಂಡ್ಯ (Mandya) ಲೋಕಸಭಾ ಚುನಾವಣೆಗೆ ಅಖಾಡ ಮತ್ತಷ್ಟು ರಂಗೇರುತ್ತಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮನವೊಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಹೀಗಾಗಿ ಭಾನುವಾರವೇ ಸುಮಲತಾ ದೆಹಲಿ ತಲುಪಿದ್ದಾರೆ. ಇಂದು (ಮಾರ್ಚ್ 18, ಸೋಮವಾರ) ಪ್ರಮುಖವಾಗಿ ರಾಜ್ಯ ರಾಜಕೀಯ, ಟಿಕೆಟ್, ಕ್ಷೇತ್ರದ ಕುರಿತು ಚರ್ಚೆ ನಡೆಯಲಿದ್ದು, ಸ್ಪರ್ಧೆಯ ಬಗ್ಗೆ ಅಂತಿಮವಾಗಲಿದೆ. ಬಹುತೇಕ ಚಿಕ್ಕಬಳ್ಳಾಪುರದಲ್ಲೇ ಸ್ಪರ್ಧಿಸುವಂತೆ ನಾಯಕರು ಮನವೊಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಅಸ್ತ್ರವನ್ನು ಪ್ರಯೋಗಿಸಿ ಕಾಂಗ್ರೆಸ್, ಬಿಜೆಪಿ ಪರೋಕ್ಷ ಬೆಂಬಲದೊಂದಿಗೆ ಜಯ ಸಾಧಿಸಿದ್ದ ಹಾಲಿ ಸಂಸದೆ ಸುಮಲತಾ ಅವರು ಇತ್ತೀಚೆಗೆ ಕೇಸರಿ ಪಕ್ಷ ಸೇರಿದ್ದರು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಕೇಸರಿ ನಾಯಕರು ಈ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಸ್ವಾಭಿಮಾನಿ ಸಂಸದೆಗೆ ನಿರಾಸೆಯುಂಟಾಗಿತ್ತು.

ಚಿಕ್ಕಬಳ್ಳಾಪುರದಲ್ಲಿ ಹಾಲಿ ಸಂಸದ ಬಿ ಎನ್ ಬಚ್ಚೇಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಮಾಜಿ ಸಚಿವ ಡಾ ಕೆ ಸುಧಾಕರ್ ಮತ್ತು ಯಲಹಂಕ ಬಿಜೆಪಿ ಶಾಸಕ ಎಸ್‌ಆರ್‌ ವಿಶ್ವನಾಥ್ ಪುತ್ರ ಅಲೋಕ್ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ. ಇದರ ನಡುವೆ ಸುಮಲತಾಗೆ ಈ ಕ್ಷೇತ್ರದ ಸಿಕ್ಕರೆ ಸ್ಥಳೀಯ ನಾಯಕರು ಬಂಡಾಯ ಎದುರಿಸಬೇಕಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರು ಮತಗಳು ನಿರ್ಣಾಯವಾಗಿದೆ. ಅದರಲ್ಲೂ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಕೂಡ ಗೌಡ ಕುಟಂಬಕ್ಕೆ ಸೇರಿರುವುದರಿಂದ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಅನ್ನೋದ ಅವರ ಪಕ್ಷದ ನಾಯಕರ ಲೆಕ್ಕಾಚಾರ ಇರಬಹುದು. ಮಂಡ್ಯ ಟಿಕೆಟ್ ನೀಡದಿದ್ದಕ್ಕೆ ಮೌನಕ್ಕೆ ಶರಣಾಗಿದ್ದ ಸುಮಲತಾ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆಯನ್ನು ನಡೆಸಿದ್ದರು.

2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. ಆದರೆ ಈ ಬಾರಿ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಸನ, ಮಂಡ್ಯ ಹಾಗೂ ಕೋಲಾರ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ನಿರ್ಧರಿಸಿದೆ. ಇಲ್ಲಿ ಅಭ್ಯರ್ಥಿಗಳನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ವಿಶೇಷವಾಗಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬದಲಿಗೆ ನೀವೇ ಸ್ಪರ್ಧಿಸಿ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮ ತಂದೆ ಹೆಚ್‌ಡಿ ದೇವೇಗೌಡರೊಂದಿಗೆ ಚರ್ಚಿ ತಿಳಿಸುವುದಾಗಿ ಹೆಚ್‌ಡಿಕೆ ಹೇಳಿದ್ದಾರಂತೆ. ಕೆಲವೇ ದಿನಗಳಲ್ಲಿ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.

Whats_app_banner