Lok Sabha Election 2024: ಕರ್ನಾಟಕದಲ್ಲಿ ಈವರೆಗೆ 292 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ; 45 ಕೋಟಿ ಹಣ ಸೀಜ್
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Election 2024: ಕರ್ನಾಟಕದಲ್ಲಿ ಈವರೆಗೆ 292 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ; 45 ಕೋಟಿ ಹಣ ಸೀಜ್

Lok Sabha Election 2024: ಕರ್ನಾಟಕದಲ್ಲಿ ಈವರೆಗೆ 292 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ; 45 ಕೋಟಿ ಹಣ ಸೀಜ್

ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಬಳಿಕ ಕರ್ನಾಟಕದಲ್ಲಿ ಈವರೆಗೆ 292 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ. 45 ಕೋಟಿ ಕೋಟಿ ನಗದು, 11 ಕೋಟಿ ರೂ ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. (ವರದಿ: ಎಚ್ ಮಾರುತಿ)

ಬಳ್ಳಾರಿಯಲ್ಲಿ 5.6 ಕೋಟಿ ನಗರದು, 1.4 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ 5.6 ಕೋಟಿ ನಗರದು, 1.4 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಬೆಂಗಳೂರು: ಚುನಾವಣೆಗಳು ಬಂದರೆ ಸಾಕು ಕಾಂಚಾಣದ ಕುಣಿತ ಜೋರಾಗಿಯೇ ಇರುತ್ತದೆ. ಜೊತೆಗೆ ಚಿನ್ನ ಬೆಳ್ಳಿ ಆಭರಣಗಳು, ಮದ್ಯ ಮತ್ತು ಇತರೆ ಉಚಿತ ಕೊಡುಗೆಗಳ ಭರಾಟೆ ಕಡಿಮೆಯೇನೂ ಇರುವುದಿಲ್ಲ. ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೂ ಹಣ, ಮದ್ಯ ಮತ್ತು ಉಚಿತ ಕೊಡುಗೆಗಳ ಹಂಚಿಕೆ ಜೋರಾಗಿಯೇ ಇರುತ್ತದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರ್ಚ್ 16ರಿಂದ ಇದುವರೆಗೂ ಅಪಾರ ಪ್ರಮಾಣದ ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾರ್ಚ್ 16ರಿಂದ ಏಪ್ರಿಲ್ 11ರವರೆಗೆ 45 ಕೋಟಿ ರೂಪಾಯಿ ನಗದು, 146 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, 1,544 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟು 292.74 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.

ಮುಖ್ಯ ಚುನಾವಣಾ ಅಧಿಕಾರಿಗಳ ಪ್ರಕಾರ 45.67 ಕೋಟಿ ರೂಪಾಯಿ ನಗದು, 146 ಕೋಟಿ ರೂ. ಮೌಲ್ಯದ ಮದ್ಯದ ಬಾಟಲಿಗಳು, 9.70 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳು, 10.81 ಕೋಟಿ ರೂ. ಬೆಲೆ ಬಾಳುವ ಚಿನ್ನ ಮತ್ತು 7.73 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಕ್ಷಿಪ್ರ ಪಡೆ ಮತ್ತು ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ತಂಡಗಳು ವಶಪಡಿಸಿಕೊಂಡಿವೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆ 1,938 ಗಂಭೀರ ಪ್ರಕರಣಗಳನ್ನು ದಾಖಲಿಸಿ ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿರುವುದಕ್ಕೆ 2,400 ಪ್ರಕರಣಗಳನ್ನು ದಾಖಲಿಸಿದೆ. ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ 118 ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ ವಿವಿಧ ಪ್ರಕರಣಗಳಲ್ಲಿ 1,172 ವಿವಿಧ ರೀತಿಯ ವಾಹನಗಳನ್ನು ಜಪ್ತಿ ಮಾಡಿದೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ ಏಪ್ರಿಲ್ 26ರಂದು 14 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಮೇ 7ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಚಾಪೆಯ ಕೆಳಗೆ ತೂರಿದರೆ ರಾಜಕಾರಣಿ ರಂಗೋಲಿ ಕೆಳಗೆ ತೂರುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾನೆ. ಈಗಲೂ ಆಯೋಗದ ಕಣ್ತಪ್ಪಿಸಿ ಹಣ, ಮದ್ಯ ಮತ್ತು ಉಚಿತ ಕೊಡುಗೆಗಳ ಹಂಚುವಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಎಲ್ಲವೂ ಚುನಾವಣಾ ಆಯೋಗದ ಗಮನಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 28 ಲೋಕಸಭಾ, 224 ವಿಧಾನಸಭಾ ಮತ್ತು 6000 ಪಂಚಾಯಿತಿಗಳಿದ್ದು ಯಾವ ಹಂತದಲ್ಲಿ ಯಾವ ರೀತಿಯ ಹಂಚಿಕೆ ನಡೆಯುತ್ತಿದೆ ಎಂದುಹೇಳಲು ಅಸಾಧ್ಯ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಚಿನ್ನಾಭರಣ ವಶ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1,57,87,000 ರೂ. ಮೌಲ್ಯದ 2. 170 ಕೆಜಿ ತೂಕದ ಚಿನ್ನಾಭರಣಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಪಡೆದಿದ್ದಾರೆ. ಈ ಕಾರು ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಚಿರಾಂತ್‌ ಮತ್ತು ಕಾರ್ತಿಕ್‌ ಎಂಬುವರು ಚಿನ್ನದ ಆಭರಣಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಕ್ಷಿಪ್ರ ಪಡೆ ಅಧಿಕಾರಿಗಳು ಕಾರು ತಡೆದು ತಪಾಸಣೆ ನಡೆಸಿದ್ದಾರೆ. ಆಗ ಕಾರಿನಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ. ಈ ಆಭರಣಗಳ ಖರೀದಿ ಅಥವಾ ಮಾರಾಟ ಕುರಿತು ಅವರ ಬಳಿ ದಾಖಲೆಗಳು ಇರಲಿಲ್ಲ. ಆದ್ದರಿಂದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿನ್ನಾಭರಣ ಕೊಂಡೊಯ್ಯುತ್ತಿದ್ದ ಬಗ್ಗೆ ಅವರ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ಆದ್ದರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Whats_app_banner