Lok Sabha Election 2024: ಮತದಾನ ಜಾಗೃತಿಗೆ ಬೀದಿನಾಟಕ; ಕರ್ನಾಟಕದ 4 ಜಿಲ್ಲೆಗಳಲ್ಲಿ ರೋಟರಿ ದಾಖಲೆಯ ಅಭಿಯಾನ
ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕಾಗಿ ರೋಟರಿ ವತಿಯಿಂದ 4 ಜಿಲ್ಲೆಗಳಲ್ಲಿ ಜಾಗೃತಿಯ ಅಭಿಯಾನ ನಡೆದಿದೆ.

ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರತಿಯೊಬ್ಬ ಭಾರತೀಯ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸಂಘ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇತ್ತ ರಾಜ್ಯದಲ್ಲಿ ರೋಟರಿ ಸಂಸ್ಥೆ ಬೀದಿ ನಾಟಕ ಪ್ರದರ್ಶನ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದೆ. 2 ದಿನಗಳಲ್ಲಿ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ 940 ಕಿ.ಮೀ.ಪ್ರಯಾಣ ಮಾಡಿ 21 ಸ್ಥಳಗಳಲ್ಲಿ ಮತದಾನದ ಜಾಗೃತಿಗಾಗಿ ಬೀದಿನಾಟಕ ಪ್ರದರ್ಶನ ನೀಡಿದೆ.
ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರ ಜಾಗೃತಿಗಾಗಿ ರೋಟರಿಯ ಪಬ್ಲಿಕ್ ಇಮೇಜ್ ಚೇರ್ಮೆನ್ ರೊ.ವಿಶ್ವಾಸ್ ಶೆಣೈ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೋಟರಿ ಆನ್ ವ್ಹೀಲ್ಸ್ ಕಾರ್ಯಕ್ರಮ ರೋಟರಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
ಗಮನ ಸೆಳೆದ ಬೀದಿನಾಟಕ
ಈ ಮತದಾರರ ಜಾಗೃತಿ ಯಾತ್ರೆಯುದ್ದಕ್ಕೂ ರೋಟರಿ ಪುತ್ತೂರು ಎಲೈಟ್ ಸದಸ್ಯ ರೊ.ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಪ್ರದರ್ಶನಗೊಂಡ ಜಾಗೃತಿ ಬೀದಿನಾಟಕ ಎಲ್ಲರ ಗಮನಸೆಳೆಯಿತು. ಹಾಡು, ಕುಣಿತ ನಟನೆಯ ಮೂಲಕ ಮತದಾರರ ಜವಾಬ್ದಾರಿಯನ್ನು ತಿಳಿಸಿಕೊಡುವಲ್ಲಿ ನಾಟಕ ಯಶಸ್ವಿಯಾಯಿತು. ತಂಡದಲ್ಲಿ ರೊ.ಬಾಲುನಾಯ್ಕ್, ಪೃಥ್ವಿರಾಜ್, ರಾಕೇಶ್ ಆಚಾರ್ಯ, ಚಂದ್ರಮೌಳಿ ಹಾಗೂ ಹೇಮಂತ್ ಎಸ್.ಪಾಟೀಲ್ ಭಾಗವಹಿಸಿದ್ದರು.
ಪುತ್ತೂರಿನಲ್ಲೂ ಮತದಾನದ ಜಾಗೃತಿ
ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆಗೊಂಡ ಉದ್ಘಾಟನಾ ಕಾರ್ಯಕ್ರಮವನ್ನು ನಿಯೋಜಿತ ಜಿಲ್ಲಾ ಗವರ್ನರ್ ರೊ.ವಿಕ್ರಮದತ್ತ ಉದ್ಘಾಟಿಸಿದರು. ತಾಲೂಕು ಸ್ವೀಪ್ಸಮಿತಿ ಅಧ್ಯಕ್ಷರಾದ ಇಒ ಹನಮ ರೆಡ್ಡಿಯವರು ಚಾಲನೆ ನೀಡಿದರು. ಕಾಲೇಜು ಆವರಣದಲ್ಲಿ ರೋಟರಿ ಜಿಲ್ಲೆಯ ಅನೇಕ ಗಣ್ಯರು, ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮೊದಲ ಪ್ರದರ್ಶನವೇ ಅತ್ಯುತ್ತಮವಾಗಿ ಮೂಡಿಬಂದು ಉಳಿದೆಲ್ಲಾ ಪ್ರದರ್ಶನಗಳಿಗೆ ಉತ್ತಮ ಆರಂಭಕೊಟ್ಟಿತು. ನಂತರ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಉಜಿರೆ, ಮೂಡಬಿದ್ರೆ, ಕಿನ್ನಿಗೋಳಿ, ಸುರತ್ಕಲ್ , ಮಂಗಳೂರು, ಬಂಟ್ವಾಳ ಹಾಗೂ ಉಪ್ಪಿನಂಗಡಿಯಲ್ಲಿ ಮೊದಲ ದಿನದ ಕೊನೆಯ 11ನೇ ಪ್ರದರ್ಶನ ನಡೆಯಿತು. ನಿಗದಿ ಪಡಿಸಿದ್ದ ವೇಳಾಪಟ್ಟಿಯಂತೆಯೇ ಸಮಯಪಾಲನೆ ಮಾಡಿರುವುದು ತಂಡದ ವಿಶೇಷತೆ.
ಎರಡನೇ ದಿನ ಎಪ್ರಿಲ್ 1 ರಂದು ಮುಂಜಾನೆ 5 ಗಂಟೆಗೆ ಪುತ್ತೂರಿನಿಂದ ಹೊರಟ ತಂಡ 7 ಗಂಟೆಗೆ ಮಡಿಕೇರಿಯಲ್ಲಿ ಮೊದಲ ಪ್ರದರ್ಶನ ನೀಡಿತು. ಕೊಡಗು ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಯವರು ಮತದಾರರ ಜಾಗೃತಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಮೈಸೂರು, ಚಾಮರಾಜನಗರ, ಯಳಂದೂರು, ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರದರ್ಶನ ನಡೆದು, ಕೊನೆಯ ಪ್ರದರ್ಶನವು ಮೈಸೂರು ಆರ್ ಟಿ ನಗರದಲ್ಲಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ್ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಿತು.
ಹೆಚ್ಚಿತು ರೋಟರಿ ಪಬ್ಲಿಕ್ ಇಮೇಜ್..!
ರೋಟರಿ ಪಬ್ಲಿಕ್ ಇಮೇಜ್ ಅಂಗವಾಗಿ ಆಯೋಜಿಸಿದ್ದ ಈ ಜಾಗೃತಿ ಯಾತ್ರೆ ನಿರೀಕ್ಷೆಗೂ ಮೀರಿ ಪಬ್ಲಿಕ್ಇಮೇಜ್ ಹೆಚ್ಚುವಲ್ಲಿ ಯಶಸ್ವಿಯಾಯಿತು. ಚಾಮರಾಜನಗರದ ಬೀದಿನಾಟಕ ಪ್ರದರ್ಶನದ ಬಗ್ಗೆ ತಿಳಿದ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಾಟಕ ತಂಡವನ್ನು ಡಿಸಿ ಕಚೇರಿ ಆವರಣಕ್ಕೆ ಕರೆಯಿಸಿ, ನಾಟಕವನ್ನು ಪೂರ್ತಿಯಾಗಿ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿ, ಅಭಿನಂದಿಸಿದ್ದಾರೆ. ಜೊತೆಗೆ ರೋಟರಿ ಜಿಲ್ಲೆ3181ರ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಸಂಚರಿಸುವ ಸಂದರ್ಭ ವಿವಿಧ ಜಿಲ್ಲಾಡಳಿತ, ತಾಲೂಕು ಆಡಳಿತದ ಮುಖ್ಯಸ್ಥರು, ಸ್ವೀಪ್ಸಮಿತಿ ಪ್ರಮುಖರು, ವಿವಿಧ ಜಿಲ್ಲೆ, ತಾಲೂಕು ವ್ಯಾಪ್ತಿಯ ರೋಟರಿ ಕ್ಲಬ್ಗಳ ಅಧ್ಯಕ್ಷರು, ಪದಾಧಿಕಾರಿಗಳು ,ಸದಸ್ಯರು ಜಾಗೃತಿ ಯಾತ್ರೆಯ ತಂಡವನ್ನು ಸ್ವಾಗತಿಸಿ ಆತಿಥ್ಯ ನೀಡುತ್ತಿದ್ದರು.
ಪಕ್ಕಾ ಪ್ಲಾನ್, ಉತ್ತಮ ಸ್ಪಂದನೆ
ಎರಡು ದಿನದ ಕಾರ್ಯಕ್ರಮವಾಗಿದ್ದರೂ, ಅತ್ಯುತ್ತಮ ರೀತಿಯ ಸಂಘಟನೆಯಿಂದ ಎಲ್ಲಾ ಅಚ್ಚುಕಟ್ಟಾಗಿಯೇ ಆಯೋಜಿಸಲಾಗಿತ್ತು. ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಚೇರ್ ಮೆನ್ ರೊ.ವಿಶ್ವಾಸ್ ಶೆಣೈ ಯವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಹಲವು ರೋಟರಿ ಕ್ಲಬ್ ಗಳ ಮಹನೀಯರು ಜಾಥಾದ ತಂಡದಲ್ಲಿ ಭಾಗವಹಿಸಿ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಇದೇ ಸಂದರ್ಭ ರಸ್ತೆ ಸುರಕ್ಷತೆ ಮತ್ತು ಜಾಗೃತಿಯ ಜಿಲ್ಲಾ ಚೇರ್ ಮೆನ್ ರೊ.ಹರ್ಷಕುಮಾರ್ ರೈ ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಕುರಿತ ಕರಪತ್ರಗಳನ್ನು ವಿತರಿಸಲಾಯಿತು.
ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಕಾರ್ಯಕ್ರಮವಾಗಿ ಮತದಾರರ ಜಾಗೃತಿಗೆ ಹಮ್ಮಿಕೊಂಡ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ನಮ್ಮ ತಂಡ ಪ್ರದರ್ಶಿಸಿದ್ದ ಬೀದಿನಾಟಕಕ್ಕೆ ಎಲ್ಲೆಡೆ ಪ್ರಶಂಸೆ ದೊರೆತಿದೆ. ಈ ಯಶಸ್ಸು ನಾಲ್ಕು ಕಂದಾಯ ಜಿಲ್ಲೆಗಳ ಎಲ್ಲಾ ರೋಟರಿ ಕ್ಲಬ್ ಗಳಿಗೂ ಸಲ್ಲುತ್ತದೆ ಎಂದು ರೋಟರಿ ಜಿಲ್ಲೆ ಪಬ್ಲಿಕ್ ಇಮೇಜ್ ಚೇರ್ ಮೆನ್ ವಿಶ್ವಾಸ್ ಶೆಣೈ ಹೇಳಿದ್ದಾರೆ. ಬೀದಿ ನಾಟಕದ ಮೂಲಕ ರೋಟರಿಯವರು ಮತದಾನದ ಜಾಗೃತಿ ಮೂಡಿಸುತ್ತಿರುವುದಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.
