ಲೋಕಸಭಾ ಚುನಾವಣೆ; 1ನೇ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ, ಕಾಂಗ್ರೆಸ್ 8, ಬಿಜೆಪಿ ಜೆಡಿಎಸ್ ಮೈತ್ರಿ 6 ಒಕ್ಕಲಿಗ ಅಭ್ಯರ್ಥಿಗಳು
ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯವಿದೆ. ಕಾಂಗ್ರೆಸ್ 8, ಬಿಜೆಪಿ- ಜೆಡಿಎಸ್ ಮೈತ್ರಿಕೂಟ 6 ಒಕ್ಕಲಿಗರಿಗೆ ಟಿಕೆಟ್ ನೀಡಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಒಕ್ಕಲಿಗ ವರ್ಸಸ್ ಒಕ್ಕಲಿಗ ನಡುವೆ ಸ್ಪರ್ಧೆ ಏರ್ಪಟ್ಟಿದೆ. (ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಈ 14 ಕ್ಷೇತ್ರಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳೇ ಪ್ರಮುಖವಾಗಿ ಕಣದಲ್ಲಿದ್ದಾರೆ ಮತ್ತು ಮತದಾರರೂ ಆಗಿದ್ದಾರೆ ಎನ್ನುವುದು ಮೊದಲ ಹಂತದ ವಿಶೇಷವಾಗಿದೆ.
14 ಕ್ಷೇತ್ರಗಳಲ್ಲಿ ಕೋಲಾರ, ಚಿತ್ರದುರ್ಗ ಮತ್ತು ಚಾಮರಾಜನಗರ ಮೀಸಲು ಕ್ಷೇತ್ರಗಳಾಗಿವೆ. ಉಳಿದ 11 ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಒಕ್ಕಲಿಗ ಅಭ್ಯರ್ಥಿಗಳು ಪರಸ್ಪರ ಎದುರಾಳಿಗಳಾಗಿದ್ದಾರೆ. ಉಳಿದ 11 ರಲ್ಲಿ 10 ಕ್ಷೇತ್ರಗಳಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕ ಸಂಖ್ಯೆಯಯಲ್ಲಿದ್ದಾರೆ. ಇನ್ನೂ ಆಳಕ್ಕಿಳಿದು ಸೂಕ್ಷ್ಮವಾಗಿ ಅವಲೋಕಿಸಿದರೆ ಮೊದಲ ಹಂತದ ಚುನಾವಣೆ ನಡೆಯುವ ಚಿತ್ರದುರ್ಗ ಹೊರತುಪಡಿಸಿ ಎಲ್ಲ 13 ಕ್ಷೇತ್ರಗಳಲ್ಲಿ ಒಕ್ಕಲಿಗರ ಸಂಖ್ಯೆ ಶೇ.25 ರಿಂದ ಶೇ.30 ರಷ್ಟಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.
ಯಾವ ಪಕ್ಷ ಎಷ್ಟು ಟಿಕೆಟ್ ನೀಡಿದೆ ?
ಮೊದಲ ಹಂತದ ಚುನಾವಣೆ ನಡೆಯುವ 14 ರಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸೌಮ್ಯ ರೆಡ್ಡಿ ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಬಂಟ ಸಮುದಾಯದ ಜಯಪ್ರಕಾಶ ಶೆಟ್ಟಿ ಅವರೂ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ 6 ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತರೆ ಹಿಂದುಳಿದ ವರ್ಗಗಳ ಮತದಾರರ ಸಂಖ್ಯೆಯನ್ನು ನೋಡುವುದಾದರೆ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಅಂದಾಜು ಶೇ.8ರಷ್ಟು ಕುರುಬ ಮತದಾರರಿದ್ದು ಇವರನ್ನು ಓಲೈಸಲು ಮೂರೂ ಪಕ್ಷಗಳೂ ಕಸರತ್ತು ನಡೆಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಕುರುಬರು ಕಾಂಗ್ರೆಸ್ ಕೈ ಹಿಡಿಯುವ ಸಾಧ್ಯತೆಗಳೇ ಹೆಚ್ಚು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಒಕ್ಕಲಿಗರು ಗಣನೀಯ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಒಕ್ಕಲಿಗ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು.
ಒಕ್ಕಲಿಗ ಮತದಾರರು ಪ್ರಮುಖವಾಗಿರುವ ಕ್ಷೇತ್ರಗಳು
ಒಕ್ಕಲಿಗ ಮತದಾರರು ಪ್ರಮುಖವಾಗಿರುವ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು.ಜೆಡಿಎಸ್ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಒಕ್ಕಲಿಗ ಮತ್ತು ಬಿಜೆಪಿಯ ಓಬಿಸಿ ಅಭ್ಯರ್ಥಿ ನಡುವೆ ಹಣಾಹಣಿ ನಡೆಯಲಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಒಕ್ಕಲಿಗ ಮತ್ತು ಬಿಜೆಪಿ ಓಬಿಸಿ ಅಭ್ಯರ್ಥಿಯನ್ನು ಉಮೇದುವಾರರನ್ನಾಗಿ ಮಾಡಿವೆ. ಮಂಡ್ಯದಲ್ಲಿ ಎರಡೂ ಪಕ್ಷಗಳು ಒಕ್ಕಲಿಗ.ಅಭ್ಯರ್ಥಿಗೆ ಮಣೆ ಹಾಕಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಮತ್ತು ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗ (ಕಾಂಗ್ರೆಸ್) ಮತ್ತು ಒಕ್ಕಲಿಗ (ಬಿಜೆಪಿ) ಅಭ್ಯರ್ಥಿ ನಡುವೆ ಪೈಪೋಟಿ ನಡೆಯಲಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳ ಒಕ್ಕಲಿಗ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಎದುರಾಗಿದೆ. ಬೆಂಗಳೂರು
ಕೇಂದ್ರದಲ್ಲಿ ಒಕ್ಕಲಿಗ ಮತದಾರರು ಗಣನೀಯ ಪ್ರಮಾಣದಲ್ಲಿದ್ದರೂ ಕಾಂಗ್ರೆಸ್ ಮುಸ್ಲಿಂ ಮತ್ತು ಬಿಜೆಪಿ ಓಬಿಸಿ ಸಮುದಾಯದ ಅಬ್ಯರ್ಥಿಗಳಿಗೆ ಮಣೆ ಹಾಕಿವೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಓಬಿಸಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಳಿಸಿದ್ದರೆ ಬಿಜೆಪಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಓಬಿಸಿ ಮತ್ತು ಬಿಜೆಪಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿವೆ. ತುಮಕೂರಿನಲ್ಲಿ ಕಾಂಗ್ರೆಸ್ ನ ಒಕ್ಕಲಿಗ ಅಭ್ಯರ್ಥಿ ಮತ್ತು ಬಿಜೆಪಿಯ ಲಿಂಗಾಯತ ಅಭ್ಯರ್ಥಿ ನಡುವೆ ಸ್ಪರ್ಧೆ ಇದೆ.
(ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
