ರಾಯಚೂರು ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ, ಕುರಿ ಖರೀದಿಗೆ ಹೊರಟ್ಟಿದ್ದ ನಾಲ್ವರ ದುರ್ಮರಣ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ವಾಹನ ಅಪಘಾತದಲ್ಲಿ ಆಂಧ್ರಪ್ರದೇಶದ ಹಿಂದೂಪುರದ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ರಾಯಚೂರು: ಅವರು ದೂರದ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಹೊರಟಿದ್ದರು. ಕುರಿ ಸಂತೆಗೆಂದು ಅವರ ಪಯಣ ಸಾಗಿತ್ತು. ಕುರಿಗಳನ್ನು ಖರೀದಿಸಿಕೊಂಡು ತಮ್ಮೂರಲ್ಲಿ ಮಾರಾಟ ಮಾಡುವವರು ಇದ್ದರು. ಇನ್ನೇನು ಸ್ಥಳ ತಲುಪುವುದು ಸ್ವಲ್ಪವೇ ದೂರವಿತ್ತು. ಆದರೆ ಮಾರ್ಗ ನಡುವೆಯೇ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರ ಜೀವವೇ ಹೋಗಿತ್ತು. ಇಂತಹ ದುರ್ಘಟನೆ ನಡೆದಿರುವುದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ. ಅದೂ ಶುಕ್ರವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ವಾಹನ ತಡೆಗೋಡೆಗೆ ಡಿಕ್ಕಿಹೊಡೆದಿದ್ದು. ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿದ್ದ ಹಿಂದೂಪುರ ಮೂಲದ ನಾಲ್ವರು ಮೃತಪಟ್ಟರು.
ಅಪಘಾತದಲ್ಲಿ ಮೃತಪಟ್ಟವರನ್ನು ನಾಗರಾಜ್, ಸೋಮ, ನಾಗಭೂಷಣ, ಮುರಳಿ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆಯೇ ಹಿಂದೂಪುರದಿಂದ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಹೊರಟಿದ್ದ ನಾಲ್ವರು ಶುಕ್ರವಾರ ಬೆಳಿಗ್ಗೆ ಯಾದಗಿರಿ ಜಿಲ್ಲೆಯ ಶಹಾಪುರ ತಲುಪಬೇಕಿತ್ತು. ಅಲ್ಲಿನ ಸಂತೆಯಲ್ಲಿ ಕುರಿಗಳನ್ನು ಖರೀದಿ ಮಾಡಿಕೊಂಡು ಬರಲು ಅವರು ಹೊರಟಿದ್ದರು.
ರಾಯಚೂರಿನಿಂದ ದೇವದುರ್ಗ ತಾಲ್ಲೂಕಿನ ಅಮರಾಪುರ ಬಳಿ ಹೋಗುವಾಗ ಚಾಲಕ ನಿದ್ರೆ ಮಂಪರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದು ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಗಬ್ಬೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದ ದೇಹಗಳನ್ನು ರಾಯಚೂರು ವೈದ್ಯಕೀಯ ಸಂಸ್ಥೆ ಆಸ್ಪತ್ರೆಗೆ ರವಾನಿಸಿದರು.
ಆಂಧ್ರಪ್ರದೇಶ, ತೆಲಂಗಾಣ ಭಾಗದಿಂದ ಹಲವರು ಈ ಭಾಗದ ಸಂತೆಗಳಿಗೆ ಆಗಮಿಸುತ್ತಾರೆ. ಮೇಕೆ, ಕುರಿ, ರಾಸುಗಳನ್ನು ಖರೀದಿಸಿಕೊಂಡು ಹೋಗುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಶಹಾಪುರ ಸಂತೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಬರುತ್ತಾರೆ. ಇದೇ ರೀತಿ ನಾಲ್ವರು ಕುರಿ ಖರೀದಿಸಲು ಹೊರಟಿದ್ದಾಗಲೇ ಈ ಘಟನೆ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ.