ಮಾನವ-ವನ್ಯಜೀವಿ ಸಂಘರ್ಷ ತಡೆಗೆ 157 ಕೋಟಿ ರೂ ಹೆಚ್ಚುವರಿ ಅನುದಾನ, ಸಚಿವ ಸಂಪುಟ ಸಭೆ ಅನುಮತಿ
ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯು ಮಾನವ ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ 157 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಅನುಮತಿ ನೀಡಿದೆ.

ಮಲೆ ಮಹದೇಶ್ವರ ಬೆಟ್ಟ ಕಾವೇರಿ ವನ್ಯಜೀವಿ ಧಾಮ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರೂ. ಹೆಚ್ಚುವರಿಯಾಗಿ ನೀಡಲು ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಲ್ಲಿ 88 ಕಿ.ಮೀ. ರೈಲ್ವೆ ಬ್ಯಾರಿಕೇಡ್, 53 ಕಿ.ಮೀ. ಆನೆ ಕಂದಕ, 50 ಕಿ.ಮೀ. ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್) ನಿರ್ಮಾಣಕ್ಕೆ ಈ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ . ಸಂಪುಟ ಸಭೆ ಬಳಿಕ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಈ ವಿಷಯ ತಿಳಿಸಿದ್ದಾರೆ.
ಮಾನವ ವನ್ಯಜೀವಿ ಅದರಲ್ಲೂ ಆನೆಗಳಿಂದ ಬೆಳೆಹಾನಿ, ಜೀವಹಾನಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವನ್ಯಜೀವಿಧಾಮಗಳಲ್ಲಿ ಲಂಟನಾ, ಸನ್ನಾ ಕಳೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಆನೆಗಳು ಮತ್ತು ಸಸ್ಯಹಾರಿ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತಿದೆ. ಕೂಡಲೇ ದೊಡ್ಡ ಪ್ರಮಾಣದಲ್ಲಿ ಲಂಟನಾ, ಸನ್ನಾ ತೆರವಿಗೆ ಕ್ರಮ ವಹಿಸುಬೇಕು ಎನ್ನುವುದು ಸಚಿವರು ನೀಡಿರುವ ಸೂಚನೆ.
ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸಲು ಹಾಗೂ ಡಿಗ್ರೇಡ್ ಆಗಿರುವ ಅರಣ್ಯದಲ್ಲಿ ಸ್ಥಳೀಯ ಪ್ರಭೇದದ ಗಿಡ ಬೆಳೆಸಲು ಮತ್ತು ಅರಣ್ಯದೊಳಗಿರುವ ಜಲಗುಂಡಿಗಳಲ್ಲಿ ಶೇಖರವಾಗಿರುವ ಹೂಳು ತೆಗೆಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಕ್ರಮ ವಹಿಸುವಂತೆಯೇ ನಿರ್ದೇಶನ ನೀಡಿದರು.
ಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಸೂಚನೆ
ಕೊಳ್ಳೆಗಾಲ ವಲಯದಲ್ಲಿ ಕರ್ನಾಟಕ ಅರಣ್ಯ ಕಾಯಿದೆಯಡಿ ಸೆಕ್ಷನ್ 4 ಆಗಿರುವ ಎಲ್ಲ 14 ಪ್ರಕರಣಗಳನ್ನು 3 ತಿಂಗಳ ಒಳಗಾಗಿ ಇತ್ಯರ್ಥಪಡಿಸಲು ಅರಣ್ಯ ಸಂಸ್ಥಾಪನಾಧಿಕಾರಿ (ಎಫ್.ಎಸ್.ಓ.) ಜೊತೆ ಸಹಕರಿಸುವಂತೆ ಆದರೆ, ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿರುವವರನ್ನು ತೆರವು ಮಾಡಿಸಲು ತತ್ ಕ್ಷಣವೇ ಕ್ರಮ ವಹಿಸಬೇಕು. ಅರಣ್ಯ ವಿಸ್ತರಣೆ ಮತ್ತು ಅರಣ್ಯ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಹಾಗೂ 2015ರ ಸರ್ಕಾರದ ನಡಾವಳಿಯಂತೆ ಜೀವನೋಪಾಯಕ್ಕೆ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವವರಿಗೆ ತೆರವು ಮಾಡದಂತೆ ಸೂಚನೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅರಣ್ಯ ಭೂಮಿ ಗುತ್ತಿಗೆ ಪಡೆದಿರುವ ಕೆಲವು ಕಂಪನಿಗಳು ಇಲಾಖೆಗೆ ಗುತ್ತಿಗೆ ಹಣವನ್ನೂ ಪಾವತಿಸುತ್ತಿಲ್ಲ, ಗುತ್ತಿಗೆ ಅವಧಿ ಪೂರ್ಣಗೊಂಡರೂ ಮರಳಿ ಇಲಾಖೆಗೆ ನೀಡಿಲ್ಲ. ಈ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸರ್ಕಾರಿ ವಕೀಲರಿಗೆ ಸೂಕ್ತ ದಾಖಲೆ ಒದಗಿಸಬೇಕು ಎನ್ನುವುದು ಸಚಿವರ ನಿರ್ದೇಶನ.
ಕಾಡು ಹಂದಿ ಸಾಯಿಸಲು ಕಚ್ಚಾ ಬಾಂಬ್ ಬಳಕೆ ನಿಗ್ರಹಿಸಿ
ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಹಂದಿಯನ್ನು ಸಾಯಿಸಲು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ತಯಾರಿಸಿ ಇಡಲಾಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ಮತ್ತು ವನ್ಯಜೀವಿಗಳುವ ಸಾವಿಗೀಡಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕಚ್ಚಾ ಬಾಂಬ್ ತಿಂದು ಹಲವು ಆನೆಯ ಮರಿಗಳ ಬಾಯಿಯಲ್ಲೇ ಸ್ಫೋಟವಾಗಿ, ದವಡೆ ಛಿದ್ರವಾಗಿ, ಹಸಿವಿನಿಂದ ಬಳಲಿ ಸಾಯುತ್ತಿವೆ ಎಂದು ವರದಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,ಕೂಡಲೇ ಈ ಬಗ್ಗೆ ನಿಗಾ ಇಟ್ಟು, ಕಚ್ಚಾ ಬಾಂಬ್ ಇಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಕೆರೆ ಕಲುಷಿತ, ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಆದೇಶ
ಚಾಮರಾಜನಗರ ಜಿಲ್ಲೆಯ 620 ಕೆರೆಗಳ ಪೈಕಿ 100 ಕೆರೆಗಳ ನೀರು ಕಲುಷಿತವಾಗಿರುವುದು ಪರೀಕ್ಷೆಯಿಂದ ದೃಢವಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ ಜಲ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.
ಕಾವೇರಿ ವನ್ಯಜೀವಿ ವಿಭಾಗದಲ್ಲಿ ಸಮೃದ್ಧವಾಗಿ ಬಿದಿರು ಬೆಳೆಸಲಾಗಿದೆ, ಬಿದಿರು ಸ್ವಾಭಾವಿಕ ಮತ್ತು ಜೈವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಆನೆಗಳಿಗೆ ಆಹಾರವೂ ಆಗುತ್ತದೆ. ಜೊತೆಗೆ ಆನೆಗಳು ನಾಡಿಗೆ ಬಾರದಂತೆ ತಡೆಯುತ್ತದೆ. ಇದನ್ನು ಬೇರೆ ವಲಯದಲ್ಲಿ ಬೆಳೆಸಲು ಕ್ರಮ ಕೈಗೊಳ್ಳಿ ಎಂಬುದು ಸಚಿವ ಈಶ್ವರ ಖಂಡ್ರೆ ಸೂಚನೆ.
ಅರಣ್ಯದೊಳಗಿನ ಹೋಂಸ್ಟೇ, ರೆಸಾರ್ಟ್ ತೆರವಿಗೆ ಸೂಚನೆ
ಅರಣ್ಯದೊಳಗೆ ಮತ್ತು ಸೂಕ್ಷ್ಮ ಪರಿಸರ ವಲಯದಲ್ಲಿ ಹೋಂ ಸ್ಟೇ ಹೆಸರಲ್ಲಿ ಶಾಶ್ವತ ರೆಸಾರ್ಟ್ ಕಟ್ಟಡ ತಲೆ ಎತ್ತುತ್ತಿದೆ ಎಂದು ದೂರುಗಳು ಬಂದಿದ್ದು, ಇವುಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆಯೂ ನಿರ್ದೇಶನ ನೀಡಿದರು
ಸಭೆಯಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಶ್ರೀನಿವಾಸುಲು, ಲಿಂಗರಾಜು, ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸಭೆಯಲ್ಲಿ ಭಾಗಿಯಾದರು.