ಹೂಡಿಕೆ ಹೆಸರಿನಲ್ಲಿ 2 ಕೋಟಿ ರೂ. ವಂಚನೆ: ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲು
ದೂರುದಾರರು ರೂ. 5.89 ಕೋಟಿ ಸಿಗುತ್ತದೆ ಎಂಬ ಆಸೆಯಿಂದ ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 42.37 ಲಕ್ಷ ರೂಪಾಯಿ ಪಾವತಿಸಿದ್ದಾರೆ. ನಂತರ ವಂಚನೆ ಪ್ರಕರಣದ ಬಗ್ಗೆ ಅವರಿಗೆ ಅರಿವಾಗಿದೆ. (ವರದಿ: ಎಚ್.ಮಾರುತಿ)

ಬೆಂಗಳೂರು: ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ರೂ. 1.92 ಕೋಟಿ ವಂಚನೆ ಎಸಗಿರುವ ಪ್ರಕರಣವೊಂದು ಕೇಂದ್ರ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.
2021ರಲ್ಲಿ ಅಪರಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ಪರಿಚಯಮಾಡಿಕೊಂಡಿದ್ದರು. ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸುವ ಅವಕಾಶಗಳಿವೆ ಎಂದು ನಂಬಿಸಿದ್ದರು. ಈ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ ದೂರುದಾರರು ಆರೋಪಿ ಕಳುಹಿಸಿದ್ದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ರೂ.1.50 ಕೋಟಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮತ್ತೆ ಅದೇ ವ್ಯಕ್ತಿ 2024ರಲ್ಲಿ ದೂರುದಾರರಿಗೆ ಕರೆ ಮಾಡಿ, 2021ರಲ್ಲಿ ನೀವು ಹೂಡಿಕೆ ಮಾಡಿದ್ದ ರೂ. 1.50 ಕೋಟಿಗೆ 5.89 ಕೋಟಿ ರೂಪಾಯಿ ಲಾಭ ಬಂದಿರುತ್ತದೆ. ಈ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲು ಐಟಿ ಸೇರಿದಂತೆ ವಿವಿಧ ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸಲು ರೂ.42.37 ಲಕ್ಷ ಪಾವತಿಸಬೇಕು ಎಂದು ತಿಳಿಸಿದ್ದರು.
ದೂರುದಾರರು ರೂ. 5.89 ಕೋಟಿ ಸಿಗುತ್ತದೆ ಎಂಬ ಆಸೆಯಿಂದ ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 42.37 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಆದರೂ ಇವರ ಖಾತೆಗೆ ಯಾವುದೇ ಹಣ ಜಮೆ ಆಗಿರಲಿಲ್ಲ. ಆರೋಪಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೂ ಸಿಕ್ಕಿಲ್ಲ. ಆಗ ಅವರಿಗೆ ಮೋಸ ಹೋಗಿರುವುದು ಅರಿವಾಗಿದೆ. ನಂತರ ಅವರು ಮೋಸ ಮಾಡಿರುವ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಎಚ್.ಮಾರುತಿ