ಕಳ್ಳತನ ಮಾಡಿದ್ದ ಮೊಬೈಲ್ ಮರಳಿಸುವ ವಿಚಾರಕ್ಕೆ ಗಲಾಟೆ: ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಹತ್ಯೆ
ಕಳ್ಳತನ ಮಾಡಿದ್ದ ಮೊಬೈಲ್ ಮರಳಿಸುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರನ್ನು ಹತ್ಯೆ ಮಾಡಲಾಗಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಕಳ್ಳತನ ಮಾಡಿದ್ದ ಮೊಬೈಲ್ ಮರಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರ ಹತ್ಯೆಯಲ್ಲಿ ಕೊನೆಗೊಂಡಿದೆ. ಬಿಹಾರ ಮೂಲದ ಅಬ್ದುಲ್ ಮಲೀಕ್ (52) ಮೃತಪಟ್ಟವರು. ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮನೋಜ್ ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಅಬ್ದುಲ್ ಮಲೀಕ್ ಅವರ ಕಚೇರಿಗೆ ತೆರಳಿದ್ದ ಮನೋಜ್, ಮೊಬೈಲ್ವೊಂದನ್ನು ಕಳ್ಳತನ ಮಾಡಿಕೊಂಡು ಬಂದಿದ್ದ. ಈ ದೃಶ್ಯವನ್ನು ಅಬ್ದುಲ್ ಮಲೀಕ್ ಮತ್ತು ಜೈನುಲ್ ಸಿಸಿಟಿವಿಯಲ್ಲಿ ಗಮನಿಸಿ ಮೊಬೈಲ್ ಹಿಂದಿರುಗಿಸುವಂತೆ ಮನೋಜ್ಗೆ ತಾಕೀತು ಮಾಡಿದ್ದರು.
ಅದಾದ ನಂತರ, ಮೊಬೈಲ್ ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಇವರ ನಡುವೆ ಜಗಳ ನಡೆದಿದೆ. ಅಬ್ದುಲ್ ಮಲೀಕ್ ಮೊಬೈಲ್ ಮರಳಿಸುವಂತೆ ಕೇಳಿದ್ದಾರೆ. ಆಗ ಆರೋಪಿ ಮನೋಜ್ ಮೊಬೈಲ್ ಮರಳಿಸದೆ ಅಬ್ದುಲ್ ಮಲೀಕ್ ಮತ್ತು ಅವರ ಸಹಾಯಕ ಜೈನುಲ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಅಬ್ದುಲ್ ಮಲೀಕ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಜೈನುಲ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಮಲೀಕ್ ಮತ್ತು ಜೈನುಲ್ ಅವರು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ಜತೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವರದಿ: ಎಚ್.ಮಾರುತಿ