ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ

ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ಸರ್ಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಊಟದ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ
ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ. 64 ಎಕರೆ ಪ್ರದೇಶದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಂತೆ ವೇದಿಕೆ ನಿರ್ಮಾಣ ಕಾರ್ಯದ ಸಿದ್ಧತೆ ಭರದಿಂದ ಸಾಗುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಾಸಕರು ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಅವರು ಹೇಳಿದ್ದಾರೆ.

ನಗರದ ಸ್ಯಾಂಜೊ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ವೇದಿಕೆ ನಿರ್ಮಾಣವಾಗುತ್ತಿರುವ ಸ್ಥಳದ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನ ವೇದಿಕೆಯಲ್ಲಿ ಸುಮಾರು 40 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ಸರ್ಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಊಟದ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜನದಟ್ಟಣೆಯಾಗದಂತೆ ತಡೆಯಲು ಪ್ರತ್ಯೇಕ ಫುಡ್ ಕೌಂಟರ್ ತೆರೆಯಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ 40, ಜನಸಾಮಾನ್ಯರಿಗೆ 120 ಫುಡ್ ಕೌಂಟರ್​ಗಳ ಜೊತೆಗೆ ಮಾಧ್ಯಮದವರಿಗೆ, ವಿಐಪಿಗಳಿಗೆ ಪ್ರತ್ಯೇಕ ಆಹಾರದ ಕೌಂಟರ್ ಮಾಡಲಾಗಿದೆ ಎಂದರು.

ಜಿಲ್ಲಾಡಳಿತ ಸಾಕಷ್ಟು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು, ನೋಂದಾಯಿತ ಪ್ರತಿನಿಧಿಗಳು, ಗಣ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಮ್ಮೇಳನದ ಅಂಗವಾಗಿ ಮಳವಳ್ಳಿಯಲ್ಲಿ ಡಿಸೆಂಬರ್ 18ರಂದು ನಾನಾ ಸಂಘಟನೆಗಳ ವತಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಮಂಡ್ಯ ಜಿಲ್ಲೆಗೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ಮಂಡ್ಯದ ಹಿರಿಮೆ, ಗರಿಮೆ ಎತ್ತಿಯಿಡುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿ ಜಿಲ್ಲೆಗೆ ಕೀರ್ತಿ ತರಲಾಗುವುದು ಎಂದರು.

250 ಶೌಚಾಲಯ ವ್ಯವಸ್ಥೆ

ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಶುಚಿತ್ವಕ್ಕೆ ಮತ್ತು ಶೌಚಾಲಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. 250 ಶೌಚಾಲಯ, ಅಡುಗೆ ಸಿಬ್ಬಂದಿಗಳಿಗೆ 50 ಸ್ನಾನದಗೃಹದ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಅಡಚಣೆಯಿಂದ ತೊಂದರೆ ಆಗದಂತೆ ಜನರೇಟರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಅಗ್ನಿ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಂಡಿದ್ದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ, ವೈಭವೋಪೇತದಿಂದ ಕೂಡಿರಲಿದೆ. ಇದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಮುಖ್ಯವಾಗಿದ್ದು ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

ಆಹಾರದ ಗುಣಮಟ್ಟ, ನೀರಿನ ಶುದ್ಧತೆ ಪರಿಶೀಲನೆ: ಡಿಸಿ ಡಾ. ಕುಮಾರ್

ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರು ಊಟ ಮಾಡುವುದರಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಹಾರದ ಗುಣಮಟ್ಟ ಪರಿಶೀಲನೆಗಾಗಿ 10 ಜನರ ಆಹಾರ ತಜ್ಞರ ತಂಡವೊಂದನ್ನು ರಚನೆ ಮಾಡಲಾಗಿದೆ. ಮೂರು ದಿನವೂ ಆ ತಂಡ ಆಹಾರದ ಗುಣಮಟ್ಟದ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಹೇಳಿದ್ದಾರೆ. ನೀರಿನ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ. ಒಟ್ಟು ಮೂರು ಬೋರ್ ವೆಲ್​​ಗಳಿದ್ದು ನೀರು ಪೂರೈಕೆಗೆ 5.8 ಕಿಮೀ. ಉದ್ದದ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಓವರ್ ಹೆಡ್ ಟ್ಯಾಂಕ್ ನಿಂದ ಆಹಾರ ತಯಾರಿಕಾ ಸ್ಥಳ, ಶೌಚಾಲಯಗಳಿಗೆ ನೀರು ಪೂರೈಕೆ ಆಗಲಿದೆ ಎಂದರು.

3 ಕಡೆ ಆರ್​ಓ ಪ್ಲಾಂಟ್ ನಿರ್ಮಿಸಲಾಗಿದೆ. ನೀರಿನ ಶುದ್ಧತೆ ಕೂಡ ಪರಿಶೀಲನೆ ನಡೆಸಲಾಗುವುದು. 24 ಎಕರೆ ಜಾಗವನ್ನು ಪಾರ್ಕಿಂಗ್​​ಗೆಂದೇ ನಿಗದಿಗೊಳಿಸಲಾಗಿದೆ. ನಗರದಿಂದ ಉಚಿತ ಬಸ್ ಸಂಚಾರ ಇರಲಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆಂದು ತಾಲೂಕು ಕೇಂದ್ರಗಳಿಂದ ಕೂಡ ಬಸ್ ವ್ಯವಸ್ಥೆ ಮಾಡಲಾಗಿದೆ. 6 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರೆಶ್, ಪೇಸ್ಟ್, ಸೋಪು, ಬೆಡ್ ಶಿಟ್ ಒಳಗೊಂಡ ಲೇದರ್ ಬ್ಯಾಗ್​​ನಲ್ಲಿ ವಸತಿ ಮತ್ತು ಸಮ್ಮೇಳನದ ಕಿಟ್ ನೀಡಲಾಗುವುದು ಎಂದರು.

ಪ್ಲಾಸ್ಟಿಕ್ ಮುಕ್ತ ಸಮ್ಮೇಳನ ಇದಾಗಿರಲಿದೆ. ಮಹಿಳೆಯರಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಚಿತ ಸಾರಿಗೆ ವ್ಯವಸ್ಥೆ ಬಗ್ಗೆ ರೂಟ್ ಮ್ಯಾಪ್ ಸಿದ್ಧಪಡಿಸಿ ಹಲವು ಕಡೆಗಳಲ್ಲಿ ಅವುಗಳ ಮಾಹಿತಿಯನ್ನು ಪ್ರದರ್ಶಿಸಲಾಗುವುದು. ಒಟ್ಟಾರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗಿದ್ದು ನುಡಿಹಬ್ಬವನ್ನು ಮನೆಹಬ್ಬದಂತೆ ಎಲ್ಲರೂ ಆಚರಿಸಬೇಕು ಎಂದು ಹೇಳಿದ್ದಾರೆ.

Whats_app_banner