ಮಂಡ್ಯ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯ, 201 ಕಲಾ ತಂಡ ಭಾಗಿ, ಪೊಲೀಸ್ ಬ್ಯಾಂಡ್ ವಿಶೇಷ ಆಕರ್ಷಣೆ
ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿ ಆಕರ್ಷಿಸಲಿವೆ.
ಮಂಡ್ಯ: ಮಂಡ್ಯದಲ್ಲಿ ಮುಂದಿನ ವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಸಾಂಸ್ಕೃತಿಕ ವೈವಿಧ್ಯಮ ಕಾರ್ಯಕ್ರಮಗಳು ಗಮನ ಸೆಳೆಯಲಿವೆ. ಕನ್ನಡ ಪ್ರೇಮಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ನುಡಿಹಬ್ಬದ ಸವಿಯ ಜೊತೆಗೆ ಕರುನಾಡು ಮತ್ತು ಹೊರನಾಡಿನ ಕಲೆ, ಕಲಾಪ್ರಕಾರಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಸಮಿತಿ ವೇದಿಕೆ ಸಿದ್ಧಪಡಿಸಿದೆ. ನಾನಾ ಬಗೆಯ ಕಲೆ, ಕಲಾಪ್ರಕಾರಗಳನ್ನು ನಾಡಿನ ಜನತೆಗೆ ಪ್ರದರ್ಶಿಸಲು ರಾಜ್ಯ ಹೊರರಾಜ್ಯಗಳಿಂದ ಕೂಡ ಕಲಾವಿದರು, ಕಲಾ ತಂಡಗಳು ಮಂಡ್ಯಕ್ಕೆ ಆಗಮಿಸಲಿವೆ. ಡಿ. 20, 21, 22ರಂದು ಮಂಡ್ಯದಲ್ಲಿ ಮೂರು ದಿನಗಳ ಕಾಲ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ವಿಶೇಷತೆ, ವಿಭಿನ್ನತೆ, ಹೊಸತನಗಳಿಗೆ ವೇದಿಕೆಯಾಗಲಿದೆ. 201 ಕಲಾ ತಂಡಗಳು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ.
ನಿರೀಕ್ಷೆ ಮೀರಿದ ಅರ್ಜಿಗಳು
ಸಾಹಿತ್ಯ ಸಮ್ಮೇಳನವೆಂದರೆ ಅಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಅನಾವರಣ. ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಕಲೆ ಪ್ರದರ್ಶಿಸಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆನ್ ಲೈನ್, ಆಫ್ ಲೈನ್ ಮೂಲಕ ಸಾಕಷ್ಟು ಪ್ರಚಾರ ಮಾಡಿ ಅರ್ಜಿ ಸ್ವೀಕರಿಸಿದ್ದು ಸಾಂಸ್ಕೃತಿಕ ಸಮಿತಿಯ ಆಯ್ಕೆ ಸಮಿತಿಯಿಂದ ಕಲಾವಿದರು, ಕಲಾತಂಡಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಲು ಕ್ರಮಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಬಂದಂತಹ ಅರ್ಜಿಗಳು 620 ಅದರಲ್ಲಿ ಆಯ್ಕೆಯಾದ ತಂಡಗಳು 201. ಮುಖ್ಯ ವೇದಿಕೆ ಹಾಗೂ ಸಮಾನಂತರ ವೇದಿಕೆ ಸೇರಿದಂತೆ 3 ವೇದಿಕೆಗಳಲ್ಲಿ ಕಾರ್ಯಕ್ರಮಗಳು ಬೆಳಿಗ್ಗೆ ಎಂಟರಿಂದ ಹತ್ತು ಗಂಟೆವರೆಗೆ ಸಂಜೆ 7ರಿಂದ 10.30 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಗೌರವಧನವೂ ಏರಿಕೆ
ಗೌರವಧನದಲ್ಲಿ ತಾರತಮ್ಯ ಆಗುವುದಕ್ಕೆ ಆಸ್ಪದ ನೀಡದೇ ಎಲ್ಲಾ ಕಲಾವಿದರನ್ನು ಸಮಾನ ರೀತಿಯಲ್ಲಿ ಗೌರವಿಸಲಾಗುತ್ತಿದೆ. ಸ್ಥಳೀಯ ಕಲಾ ತಂಡಗಳ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಗೌರವಧನವನ್ನು ಕಲಾವಿದರಿಗೆ ನೀಡಲಾಗುತ್ತಿದೆ. ಕನಿಷ್ಠ 20000 ಗರಿಷ್ಠ 40000 ರೂ. ಗೌರವಧನವನ್ನು ನೀಡಲಾಗುವುದು. ಕಲಾಪ್ರಕಾರಗಳು ನೀಡುವ ಕಲಾ ಪ್ರದರ್ಶನದ ಮತ್ತು ಅವರು ಬರುವ ಸ್ಥಳದ ದೂರದ ಮೇಲೆ ಗೌರವಧನ ನೀಡಲಾಗುವುದು.
ಕಲಾಪ್ರಕಾರದಲ್ಲಿ ಜಿಲ್ಲೆಯ ಮಹಿಳೆಯರು, ವಿಕಲಚೇತನರು, ಮಕ್ಕಳು, ಹಿರಿಯರು ಎಲ್ಲರನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ. ಕಲಾವಿದರಿಗೆ ನೀಡಲಾಗುವ ಗೌರವಧನದಲ್ಲಿ ಜಿ.ಎಸ್ಟಿ ಹಾಗೂ ಸರ್ವಿಸ್ ಟ್ಯಾಕ್ಸ್ ಸೇರಿರುವುದಿಲ್ಲ. ಜಿಎಸ್ಟಿ ಹಾಗೂ ಸರ್ವಿಸ್ ಟ್ಯಾಕ್ಸ್ ಅನ್ನು ಕನ್ನಡ ಸಂಸ್ಕೃತಿ ಇಲಾಖೆಯೇ ಬರಿಸಲಿದೆ. ಮೈಸೂರು ವಿಭಾಗಕ್ಕೆ ಶೇಕಡ 50ರಷ್ಟು ಹಾಗೂ ಇತರ ಜಿಲ್ಲೆಗೆ ಶೇ. 50ರಷ್ಟು ಕಾರ್ಯಕ್ರಮ ನೀಡಲಾಗುವುದು.
ಬೇರೆ ರಾಜ್ಯದ 5 ಕಲಾ ಪ್ರಕಾರಗಳು, ಹೊರ ಜಿಲ್ಲೆಯಿಂದ 33 ಹಾಗೂ ಮಂಡ್ಯ ಜಿಲ್ಲೆಯಿಂದ 109 ಕಲಾ ತಂಡಗಳು ಭಾಗಿಯಾಗಲಿವೆ. ಮೂಡಲಪಾಯ, ಯಕ್ಷಗಾನ, ಬುಡಕಟ್ಟು ಸಮುದಾಯದ ನೃತ್ಯಗಳು, ನಾಡಿನ ಹೆಸರಾಂತ ಜನಪದ ಕಲಾ ಪ್ರದರ್ಶನಗಳು, ಸುಗಮ ಸಂಗೀತ ಇನ್ನಿತರ ಕಲಾ ಪ್ರದರ್ಶನಗಳು ನಡೆಯಲಿದೆ.
ಆಯ್ಕೆ ಹೇಗೆ
ಮಂಡ್ಯ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಿಗೆ ಶೇ.50 ಇತರೆ ಜಿಲ್ಲೆಯ ಕಲಾವಿದರಿಗೆ ಶೇ. 50ರಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಮುಖ್ಯ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ರಾಜ್ಯ ಮಟ್ಟದ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಂಡ್ಯ ಮೂಲದವರು ಕೂಡ ಇರಬಹುದು. ಬಹುಮುಖ್ಯವಾಗಿ ಮಂಡ್ಯ ಜಿಲ್ಲೆಯ ಕಲಾವಿದರಿಗೆಂದೇ ಕಲಾಮಂದಿರ ಮತ್ತು ಅಂಬೇಡ್ಕರ್ ಭವನದಲ್ಲಿ ಮೂರು ದಿನ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅನುಭವ, ಜನಪ್ರಿಯತೆ, ಅರ್ಹತೆ, ವಿಶೇಷತೆ, ಶೈಕ್ಷಣಿಕ ಪದವಿಗಳು, ಪಡೆದಿರುವ ಪ್ರಶಸ್ತಿಗಳು ಇತ್ಯಾದಿಗಳನ್ನು ಪರಿಗಣಿಸಿ ಕಲಾವಿದರ ಆಯ್ಕೆಗೆ ಕ್ರಮವಹಿಸಲಾಗಿದೆ. ಅವರ ವಾಸ್ತವ್ಯಕ್ಕೆ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ಸಮುದಾಯ ಭವನ ಕಾಯ್ದಿರಿಸಲಾಗಿದೆ. ಕಲಾವಿದರು ತಂಗುವ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮೊದಲ ಬಾರಿಗೆ ಮೇಳೈಸಲಿದ ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಬ್ಯಾಂಡ್
ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್ 22 ರಂದು ಸಂಜೆ 6 ಗಂಟೆಗೆ ಪೊಲೀಸ್ ಬ್ಯಾಂಡ್ ಮೇಳೈಸಲಿದೆ. ಮೈಸೂರು ದಸರಾದಲ್ಲಿ ಪೊಲೀಸ್ ಬ್ಯಾಂಡ್ ನೋಡಲು ಜನರು ಖಾತರದಿಂದ ಕಾಯುತ್ತಾರೆ ಈ ಅವಕಾಶವನ್ನು ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇಂತಹ ಸದವಕಾಶವನ್ನು ಮಂಡ್ಯ ಜಿಲ್ಲೆಯ ಜನತೆಗೆ ಜಿಲ್ಲೆಯಲ್ಲೇ ಕಲ್ಪಿಸಿಕೊಟ್ಟಿರುವುದು ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷತೆ ಎನ್ನಬಹುದು ಎನ್ನುತ್ತಾರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ.