ಕೆಆರ್‌ಎಸ್‌ನಲ್ಲಿ ಏಕಕಾಲಕ್ಕೆ 10 ಸಾವಿರ ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅವಕಾಶ, ಯೋಜನೆ ರೂಪಿಸಲು ಸಮಿತಿ ರಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಆರ್‌ಎಸ್‌ನಲ್ಲಿ ಏಕಕಾಲಕ್ಕೆ 10 ಸಾವಿರ ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅವಕಾಶ, ಯೋಜನೆ ರೂಪಿಸಲು ಸಮಿತಿ ರಚನೆ

ಕೆಆರ್‌ಎಸ್‌ನಲ್ಲಿ ಏಕಕಾಲಕ್ಕೆ 10 ಸಾವಿರ ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅವಕಾಶ, ಯೋಜನೆ ರೂಪಿಸಲು ಸಮಿತಿ ರಚನೆ

ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೃಷ್ಣರಾಜಸಾಗರದಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವ ಸಂಬಂಧ ಪ್ರಕ್ರಿಯೆಗಳು ಚುರುಕುಗೊಂಡಿದ್ದು ಸಮಿತಿ ರಚಿಸಲಾಗಿದೆ.

ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್‌ ಸ್ಥಳ ಪರಿಶೀಲನೆ ನಡೆಸಿದರು.
ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್‌ ಸ್ಥಳ ಪರಿಶೀಲನೆ ನಡೆಸಿದರು.

ಮಂಡ್ಯ: ಈಗಾಗಲೇ ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ. ಕಾವೇರಿ ಆರತಿಯನ್ನು(KRS Cauvery Aarti) ಒಂದೇ ಬಾರಿಗೆ 10ಸಾವಿರ ಜನರು ನೋಡುವ ವ್ಯವಸ್ಥೆಯನ್ನು ಮಾಡಲಾಗುವುದು ವಾರದಲ್ಲಿ ಎಷ್ಟು ದಿನ ಕಾವೇರಿ ಆರತಿ ಮಾಡಬೇಕು ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೂ ಮತ್ತೊಂದು ಸಭೆ ಮಾಡಿ ತೀರ್ಮಾನ ಕೈಗೊಳ್ಳಲು ಕೂಡ ನಿರ್ಧರಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಿ ಕೆಆರ್‌ಎಸ್‌ ಭಾಗದಲ್ಲಿ ಇನ್ನಷ್ಟು ಮಂದಿಗೆ ಉದ್ಯೋಗ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಕೆ ಆರ್ ಎಸ್ ಅಣೆಕಟ್ಟೆಯ ಸುತ್ತ ಭೇಟಿ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ. ಕೆ. ಶಿವಕುಮಾರ್ ಸ್ಥಳೀಯ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್. ಸರ್ಕಾರದ ವತಿಯಿಂದ 98 ಕೋಟಿ ಹಣವನ್ನು ಕಾವೇರಿ ಆರತಿ ಮಾಡುವ ಸಲುವಾಗಿ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದೆ. ಈ ಭಾಗದ ಪವಿತ್ರ ನದಿಯಾಗಿ ಜೀವನಾಡಿ ಯಾಗಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಸಲುವಾಗಿ ಅನೇಕ ಸಲಹೆಯನ್ನು ಪಡೆಯಲಾಗಿದೆ ಎಂದರು.

ನೀಲನಕ್ಷೆ ತಯಾರಿ

ಕಾವೇರಿ ಆರತಿಯನ್ನು ಒಂದೇ ಬಾರಿಗೆ 10ಸಾವಿರ ಜನರು ನೋಡುವ ವ್ಯವಸ್ಥೆಯನ್ನು ಮಾಡಲಾಗುವುದು ವಾರದಲ್ಲಿ ಎಷ್ಟು ದಿನ ಕಾವೇರಿ ಆರತಿ ಮಾಡಬೇಕು ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೂ ಮತ್ತೊಂದು ಸಭೆ ಮಾಡಿ ತೀರ್ಮಾನ ಮಾಡಲಾಗುವುದು. ಕಂದಾಯ, ಮುಜರಾಯಿ, ಪ್ರವಾಸೋದ್ಯಮ, ನೀರಾವರಿ, ಸೆಸ್ಕ್‌ ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಸಮಿತಿಯನ್ನು ರಚಿಸಲಾಗಿದೆ. ಇನ್ನೆರಡು ದಿನದಲ್ಲಿ ನೀಲಿ ನಕ್ಷೆ ತಯಾರಿಸಲಾಗುವುದು ಎಂದು ವಿವರಣೆ ನೀಡಿದರು.

98 ಕೋಟಿ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುದಾನ ಪಡೆದು ವಿಶೇಷ ರೀತಿಯಲ್ಲಿ ಕಾವೇರಿ ಆರತಿ ಮಾಡಲಾಗುವುದು. ವಿದ್ಯುತ್ ಅಲಂಕಾರ ಸೇರಿದಂತೆ ಇದರ ಜೊತೆಗೆ ಹಲವು ಇಲಾಖೆಯಿಂದಲೂ ಹಣವನ್ನು ಬಳಸಿಕೊಳ್ಳಲಾಗುವುದು. ಸಮರ್ಪಕ ರಸ್ತೆ ನಿರ್ಮಿಸಿ ಧಾರ್ಮಿಕವಾಗಿ ಕುಟುಂಬ ಸಮೇತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎನ್ನುವುದು ಡಿಕೆಶಿ ವಿವರಣೆ.

ಕೆ ಆರ್ ಎಸ್ ವ್ಯಾಪ್ತಿಗೆ ಬರುವ 4 ಪಂಚಾಯತಿಗಳ ಅಭಿವೃದ್ದಿಗೆ ಯೋಜನೆ ರೂಪಿಸಬೇಕು. ಯೋಜನೆ ವಿವರವನ್ನು ನೀಡಲಾಗುವುದು ಉಳಿದ ವ್ಯವಸ್ಥೆ ಆಯಾ ನಿವಾಸಿಗಳೇ ಮಾಡಿಕೊಳ್ಳಬೇಕು. ಇದರಿಂದ ಇಲ್ಲಿನ ಸ್ಥಳೀಯ ಯುವ ಜನರಿಗೆ ಹೆಚ್ಚು ಉದ್ಯೋಗವಕಾಶವನ್ನು ನೀಡಲಾಗುವುದು

ಈ ಬಾರಿ ವಿನೂತನ ದಸರಾ; ಕಂಬಳ ಸೇರ್ಪಡೆ

"ನಾಡ ಹಬ್ಬ ದಸರಾವನ್ನು ಸಹ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದು ಹೇಳಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ, ಮೇಲುಕೋಟೆ ದರ್ಶನ ಪುಟ್ಟಣ್ಣಯ್ಯ, ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ. ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಸಿ ಇ ಒ ‌ ಕೆ.ಆರ್. ನಂದಿನಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಕಾವೇರಿ ನೀರಾವರಿ ನಿಗಮದ ಎಂ.ಡಿ. ಮಹೇಶ್ ಮತ್ತಿತರರು ಭಾಗವಹಿಸಿದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.