ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ; ಇಂದು ನಡೆಯಲಿದೆ ಶೇರ್ತಿಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ; ಇಂದು ನಡೆಯಲಿದೆ ಶೇರ್ತಿಸೇವೆ

ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ; ಇಂದು ನಡೆಯಲಿದೆ ಶೇರ್ತಿಸೇವೆ

ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಭಾನುವಾರ (ಏಪ್ರಿಲ್ 13) ಮಹಾಭಿಷೇಕ ನೆರವೇರಿತು. ಇಂದು (ಏಪ್ರಿಲ್ 14) ಶೇರ್ತಿಸೇವೆ ನಡೆಯಲಿದೆ.

ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ
ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ

ಮೇಲುಕೋಟೆ: ಭೂವೈಕುಂಠ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯ ದಿವ್ಯಸನ್ನಿಧಿಯಲ್ಲಿ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಮಹಾಭಿಷೇಕ ವೈಭವದಿಂದ ನೆರವೇರಿತು.

ವೈರಮುಡಿ ಜಾತ್ರಾಮಹೋತ್ಸವದ 10ನೇ ತಿರುನಾಳ್ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಸೌರಮಾನದ ಮೀನಮಾಸದ ಚಿತ್ತಾನಕ್ಷತ್ರದ ಶುಭದಿನವಾದ ಭಾನುವಾರ ವೇದ ಮಂತ್ರಗಳೊಂದಿಗೆ ದ್ವಾದಶಾರಾಧನೆಯ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ಹತ್ತುದಿನಗಳಿಂದ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಸಂಪನ್ನವಾಯಿತು.

ಮುಂಜಾನೆಯೇ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಬ್ರಹ್ಮೋತ್ಸವದಲ್ಲಿ ಯಾವುದೇ ಲೋಪದೋಷಗಳು ನಡೆದಿದ್ದರೂ ಕ್ಷಮಿಸುವಂತ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಚಿನ್ನದ ಧ್ವಜ ಸ್ಥಂಭದ ಬಳಿ ವಿಶೇಷ ಪರಿಹಾರ ಹೋಮ ನೆರವೇರಿಸಲಾಯಿತು. ಮೂಲಮೂರ್ತಿ ಉತ್ಸವಮೂರ್ತಿ ಅಳ್ವಾರ್‌ಗಳು ರಾಮಾನುಜಾಚಾರ್ಯರಿಗೆ ಹಾಲು, ಜೇನು, ಮೊಸರು, ಎಳನೀರು, ಅರಿಸಿನ, ಮಂಗಳ ದ್ರವ್ಯಗಳು ಸೇರಿದ ಪವಿತ್ರತೀರ್ಥಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಭಾನುವಾರವಾದ್ದರಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಮಹಾಭಿಷೇಕ ಮಧ್ಯೆ ಹಾಲು ಮತ್ತು ಪವಿತ್ರ ತೀರ್ಥದ ಅಭಿಷೇಕ ವೇಳೆ ಹಾಗೂ ಅರಿಸಿನ ಅಲಂಕಾರದ ವೇಳೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು.

ಒಂದು ಸಂವತ್ಸರದಲ್ಲಿ ಎರಡುಸಲ ಮಾತ್ರ ಮೂಲಮೂರ್ತಿಗೆ ಅಭಿಷೇಕ ನಡೆಯುವ ಸಂಪ್ರದಾಯವಿದ್ದು ವಿಶ್ವಾವಸು ಸಂವತ್ಸರದ ಮೊದಲ ಮಹಾಭಿಷೇಕ ವೈರಮುಡಿ ಬ್ರಹ್ಮೋತ್ಸವದಲ್ಲಿ ಕೊನೆಯ ದಿನ ಅದ್ಧೂರಿಯಾಗಿ ನಡೆಯಿತು. ಇದೇ ಸಂವತ್ಸರದ ಆಷಾಡಮಾಸದಲ್ಲಿ ಮುಮ್ಮುಡಿ ಶ್ರೀಕೃಷ್ಣರಾಜಒಡೆಯರ್ ಜಯಂತ್ಯುತ್ಸವದಂದು ಎರಡನೇ ಭಾರಿ ಮಹಾಭಿಷೇಕ ನಡೆಯುತ್ತದೆ.

ಮೇಲುಕೋಟೆ ಭೂವೈಕುಂಠ ಗರ್ಭಗೃಹ ಪ್ರದಕ್ಷಿಣೆ ಅವಕಾಶ

ಮೇಲುಕೋಟೆ ಸಾಕ್ಷಾತ್ ಶ್ರೀಮನ್ನಾರಾಯಣನೇ ನೆಲೆಸಿ ಸದಾಕಾಲ ದಿವ್ಯದರ್ಶನ ನೀಡುವ ಕಾರಣ ಭೂವೈಕುಂಠವಾಗಿದ್ದು, ಇಲ್ಲಿ ವೈಕುಂಠದ್ವಾರ ತೆರೆಯುವ ಸಂಪ್ರದಾಯ ಇಲ್ಲ. ಬದಲಾಗಿ ವರ್ಷಕ್ಕೊಮ್ಮೆ ಚೆಲುವನಾರಾಯಣಸ್ವಾಮಿಯ ಮೂಲಗರ್ಭಗುಡಿಯ ಪ್ರದಕ್ಷಿಣೆಗೆ ಮಹಾಭಿಷೇಕದ ರಾತ್ರಿ ಅವಕಾಶ ನೀಡಲಾಗುತ್ತಿದ್ದು ಭಾನುವಾರ ರಾತ್ರಿ ಭಕ್ತರಿಗೆ ಪ್ರದಕ್ಷಿಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಹನುಮಂತವಾಹನೋತ್ಸವ ಉತ್ಸವಬೀದಿಗಳಲ್ಲಿ ಮೆರವಣಿಗೆ ಬರುವ ಸಮಯಾವಕಾಶದಲ್ಲಿ ಮಾತ್ರ ಪ್ರದಕ್ಷಿಣೆಗೆ ಅವಕಾಶವಿದ್ದ ಕಾರಣ ಅರ್ಧಗಂಟೆಯಲ್ಲಿ ನೂರಾರುಭಕ್ತರು ಗರ್ಭಗೃಹಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.

ಇಂದು ಶೇರ್ತಿಸೇವೆ

ಶ್ರೀಕೃಷ್ಣಬಲರಾಮರು ಚೆಲುವನಾರಾಯಣನನ್ನು ಆರಾಧಿಸಿದ ಪ್ರತೀಕವಾಗಿ ನಡೆಯುವ ಶೇರ್ತಿಸೇವೆ ಇಂದು (ಏಪ್ರಿಲ್ 14) ಸೋಮವಾರ ನಡೆಯಲಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ-ಬಲರಾಮರು ಯದುಗಿರಿಗೆ ಆಗಮಿಸಿ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿ ತಾವೇ ಆರಾಧಿಸುತ್ತಿದ್ದ ಉತ್ಸವಮೂರ್ತಿಯನ್ನು ದೇವಾಲಯಕ್ಕೆ ಸಮರ್ಪಿಸಿದರು ಎನ್ನುವ ಪುರಾಣದ ಉಲ್ಲೇಖದಂತೆ ನಡೆಯುವ ಶೇರ್ತಿಸೇವೆ ಸೋಮವಾರ ನಡೆಯಲಿದೆ. ಮೂಲಮೂರ್ತಿ ಮತ್ತು ಉತ್ಸವಮೂರ್ತಿ ವರ್ಷದಲ್ಲೊಮ್ಮೆ ಮಾತ್ರ ಒಂದೇ ಕಡೆ ಆರಾಧನೆಗೊಳ್ಳುವುದು ಶೇರ್ತಿಸೇವೆಯ ವಿಶೇಷವಾಗಿದೆ. ಇದಕ್ಕೂ ಮುನ್ನ ಮಹಾನಿವೇದನ ನಡೆಯಲಿದ್ದು, ಪಂಚಭಕ್ಷಪರಮಾನ್ನಗಳನ್ನು ತಯಾರಿಸಿ ಚೆಲುವನಾರಾಯಣಸ್ವಾಮಿಗೆ ಸಮರ್ಪಿಸಲಾಗುತ್ತದೆ. ಅಂದು ದೊಡ್ಡ ದೊಡ್ಡ ಹಂಡೆಗಳಲ್ಲಿ ತಯಾರಿಸಿದ ಪ್ರಸಾದವನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆಲ್ಲರಿಗೂ ವಿತರಿಸಲಾಗುತ್ತದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾಹಿತಿ ನೀಡಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner