Mangalore Bomb Blast: ಮಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎ ಮೂಲಕ ವಿಚಾರಣೆ ನಡೆಸಲು ಕೇಂದ್ರ ಸಮ್ಮತಿ
ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIA ಗೆ ವರ್ಗಾಯಿಸಿದ್ದು, ಕೇಂದ್ರ ಗೃಹ ಇಲಾಖೆಯು, ರಾಜ್ಯದ ಶಿಫಾರಸನ್ನು ಮಾನ್ಯ ಮಾಡಿದೆ.
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಂಕನಾಡಿ ಸಮೀಪ, ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIA ಗೆ ವರ್ಗಾಯಿಸಿದ್ದು, ಕೇಂದ್ರ ಗೃಹ ಇಲಾಖೆಯು, ರಾಜ್ಯದ ಶಿಫಾರಸನ್ನು ಮಾನ್ಯ ಮಾಡಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆ ಯಲ್ಲಿ, ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ, ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, ಕೇಂದ್ರ ತನಿಖಾ ಸಂಸ್ಥೆ NIA ಗೆ ವಹಿಸಲು, ಶಿಫಾರಸು ಮಾಡಲಾಗಿತ್ತು.
"ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, UAPA ಕಾಯಿದೆ ಅನ್ವಯ ತನಿಖೆಯನ್ನು ನಡೆಸಲು ಶಿಫಾರಸು ಮಾಡಲಾಗಿತ್ತು. ರಾಜ್ಯ ಸರಕಾರದ ಶಿಫಾರಸ್ಸನ್ನು ಕೇಂದ್ರ ಗೃಹ ಇಲಾಖೆಯು ಮಾನ್ಯ ಮಾಡಿದೆʼʼ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಂಕಿತ ಉಗ್ರ ಶಾರೀಕ್ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರಮುಖ ದೇಗುಲಗಳನ್ನು ಟಾರ್ಗೆಟ್ ಮಾಡಿದ್ದನಂತೆ. ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಲು ಯೋಜನೆ ರೂಪಿಸಿದ್ದ ಎಂದು ವರದಿಗಳು ತಿಳಿಸಿದ್ದವು. ಮಂಗಳೂರು ಬಾಂಬ್ ಸ್ಫೋಟಕ್ಕೆ ಇಂತಹ ಹಲವು ಆಯಾಮಗಳು ಇರುವ ಕಾರಣ ಕೇಂದ್ರ ತನಿಖಾ ಸಂಸ್ಥೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿದೆ.
ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್ನನ್ನು ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಬೆದರಿಕೆ ಹಾಕಿತ್ತು. ಡಾರ್ಕ್ ವೆಬ್ನಲ್ಲಿ ಪ್ರಕಟವಾದ ಈ ಪ್ರಕಟಣೆಯ ಕುರಿತೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಪ್ರಸಿದ್ಧ ದೇಗುಲಗಳು, ಬಸ್ ನಿಲ್ದಾಣ ಹಾಗೂ ಆರ್ಎಸ್ಎಸ್ ಕಚೇರಿ ಶರೀಕ್ನ ಟಾರ್ಗೆಟ್ ಆಗಿತ್ತು ಎನ್ನುವ ಆಘಾತಕಾರಿ ಅಂಶಗಳು ಪೊಲೀಸ್ ತನಿಖೆ ವೇಳೆ ಹೊರಬಂದಿವೆ.
ಕುಕ್ಕರ್ ಸ್ಫೋಟದ ವಿಚಾರವಾಗಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆಯ ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಸ್ಟ್ ಜೊತೆ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಆರೋಪಿ ಶಾರೀಕ್ ಫೋಟೋಗಳನ್ನು ಕೂಡ ಅಳವಡಿಸಿ ನವೆಂಬರ್ 23 ರಂದು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ, ಪೊಲೀಸರು ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದರ ಜೊತೆ ಎಡಿಜಿಪಿ ಅಲೋಕ್ ಕುಮಾರ್ಗೆ ನಿಮ್ಮ ಸಂತೋಷ ಕ್ಷಣಿಕವಾದದ್ದು, ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಸದ್ಯದಲ್ಲಿಯೇ ಅನುಭವಿಸಲಿದ್ದೀರಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
“ಕೇಸರಿ ಭಯೋತ್ಪಾದಕರು ಇರುವ ಪ್ರದೇಶ ಮಂಗಳೂರಿನ ಕದ್ರಿಯ ಹಿಂದೂ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ನಮ್ಮ ಮುಜಾಹಿದ್ ಸಹೋದರ ಮೊಹಮದ್ ಶಾರೀಕ್ ಪ್ರಯತ್ನಿಸಿದ್ದಾನೆ. ಈ ಆಪರೇಷನ್ ನಿಗದಿತ ಗುರಿಯನ್ನು ತಲುಪದಿದ್ದರೂ ಇದನ್ನು ನಾವು ಯಶಸ್ಸು ಎಂದೇ ಪರಿಗಣಿಸುತ್ತೇವೆ. ಏಕೆಂದರೆ, ಇಲ್ಲಿ ಆತ ಅನುಸರಿಸಿರುವ ಕಾರ್ಯತಂತ್ರಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಗಳನ್ನು ಕಣ್ತಪ್ಪಿಸಿ ದಾಳಿ ನಡೆಸುವ ಪ್ರಯತ್ನ ಮಾಡಿರುವುದು ನಮ್ಮ ಯಶಸ್ಸನ್ನು ಹೇಳುತ್ತವೆ. ಆದರೆ, ದಾರಿಯ ಮಧ್ಯೆಯೇ ಬಾಂಬ್ ಸ್ಫೋಟವಾಗಿದ್ದರಿಂದ ನಮ್ಮ ಗುರಿಯನ್ನು ನಾವು ತಲುಪದೇ ನಮ್ಮ ಸಹೋದರ ಶಾರೀಕ್ ಬಂಧನ ಆಗಿದ್ದಾನೆ” ಎಂದು ಐಆರ್ಸಿ ಹೇಳಿದೆ.