Mangalore News: ಗೋಡೌನ್‌ನಲ್ಲಿ ಕೋಟ್ಯಂತರ ರೂ ಮೌಲ್ಯದ ಅಕ್ಕಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಗೋಡೌನ್‌ನಲ್ಲಿ ಕೋಟ್ಯಂತರ ರೂ ಮೌಲ್ಯದ ಅಕ್ಕಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Mangalore News: ಗೋಡೌನ್‌ನಲ್ಲಿ ಕೋಟ್ಯಂತರ ರೂ ಮೌಲ್ಯದ ಅಕ್ಕಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Mangalore News: ಅಕ್ಕಿ ಕಳವು ಪ್ರಕರಣದ ಆರೋಪಿಗಳು ಬಂಧನವಾಗದ ಕಾರಣ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಆರೋಪಿಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಗೋಡೌನ್‌ನಲ್ಲಿ ಪಡಿತರ ಅಕ್ಕಿ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆ.
ಗೋಡೌನ್‌ನಲ್ಲಿ ಪಡಿತರ ಅಕ್ಕಿ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆ.

ಮಂಗಳೂರು: ಬಡವರಿಗೆ ಸರಕಾರ ನೀಡುವ ಪಡಿತರ ಅಕ್ಕಿಯನ್ನು ಗೋಡೌನ್ ನಿಂದ ಕಳವು ಮಾಡಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಟ್ವಾಳ ‌ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಜಯ್ ಮತ್ತು ರಝಾಕ್ ಅವರನ್ನು ಪೊಲೀಸರು ಬಂಧಿಸಲಾಗಿದ್ದು, ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ಬಂಟ್ವಾಳದ ತಲಪಾಡಿಯಲ್ಲಿ ಗೋಡೌನಲ್ಲಿ ಇರಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಕಳ್ಳತನ ಮಾಡಲಾಗಿದೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಚಿವರಿಗೆ ಕರಿಪತಾಕೆಗೆ ಸಿದ್ಧತೆ ನಡೆದಿತ್ತು

ಅಕ್ಕಿ ಪ್ರಕರಣದ ಆರೋಪಿಗಳು ಬಂಧನವಾಗದ ಕಾರಣ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರಿಪತಾಕೆ ಹಿಡಿಯುವ ಕಾರ್ಯಕ್ಕೆ ತುಂಗಪ್ಪ ಬಂಗೇರ ಮತ್ತು ಹೋರಾಟಗಾರರು ಮುಂದಾಗಿದ್ದರು. ಏಳು ತಿಂಗಳು ಕಳೆದರೂ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಕರಣದ ಹಿಂದಿರುವವರ ಬಂಧನಕ್ಕೂ ಆಗ್ರಹ

ಈ ಕುರಿತು ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಉತ್ತರಿಸಿದ ಜಿಪಂ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಬಿಜೆಪಿಯ ಹಿರಿಯ ಮುಖಂಡ ಎ.ಗೋವಿಂದ ಪ್ರಭು, ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ, ಇದರ ಹಿಂದೆ ಯಾರಿದ್ದಾರೆ, ಅವರನ್ನೂ ಬಂಧಿಸಿ ಎಂದು ಒತ್ತಾಯಿಸಿದರು. ತನಿಖೆಗೆ ಸರ್ಕಾರ ಸಹಕಾರ ನೀಡದೆ ನೈಜ ಆರೋಪಿಗಳ ಬಂಧನಕ್ಕೆ ಮೀನಮೇಷ ಎಣಿಸಿದರೆ ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಬಡವರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ಅವ್ಯವಹಾರ ಮಾಡುವ ಗ್ಯಾಂಗನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆರೋಪಿಸಿ ಈ ಕುರಿತು ಪ್ರತಿಭಟನೆ ನಡೆಸಿದ್ದರು. ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಅಧಿಕಾರಿಗಳಿಗೆ, ಅದಕ್ಕೆ ಪ್ರೋತ್ಸಾಹಿಸುವ ದಳ್ಳಾಳಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದರು

ಘಟನೆಯ ವಿವರ

ಕಳೆದ ಏಳು ತಿಂಗಳ ಹಿಂದೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆ ಸಂದರ್ಭ ಓರ್ವನನ್ನು ವಶಕ್ಕೆತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಬಳಿಕ ಆಹಾರ ಇಲಾಖೆಯ ಓರ್ವನನ್ನು ಅಮಾನತು ಮಾಡಲಾಗಿತ್ತು. ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಮಾತ್ರ ಬಹಿರಂಗವಾಗಲೇ ಇಲ್ಲ. ಎಷ್ಟು ಸಮಯದಿಂದ ಅಕ್ಕಿ ಸಾಗಾಟ ನಡೆಯುತ್ತಿದೆ, ಯಾವ ಕಡೆಗಳಿಗೆ ಹೋಗುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಯಾವುದೇ ಸ್ಪಷ್ಟ ಚಿತ್ರಣ ದೊರಕಿಲ್ಲ. ಮೂರು ಗೋದಾಮುಗಳಲ್ಲಿ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಮಾಡಿದಾಗ ಅಲ್ಲೂ ಲೆಕ್ಕಾಚಾರ ತಪ್ಪಿದ್ದನ್ನು ಗಮನಿಸಿದ್ದರು. ದಾಸ್ತಾನು ಕೊಠಡಿಯಲ್ಲಿ ಯಾಕೆ ಈ ತರಹದ ವ್ಯತ್ಯಾಸ ಆಗಿದೆ ಎಂಬುದರ ಮೇಲೆ ಇಲ್ಲಿನ ಡಿಪೋ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು. ಯಾವ ರೀತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬುದರ ಬಗ್ಗೆ ಕೆಎಸ್‌ಎಫ್‌ಸಿಯ ರಾಜ್ಯಮಟ್ಟದ ಅಧಿಕಾರಿಗಳು ತನಿಖೆ ನಡೆಸಿದ್ದರು.

ಸುಮಾರು 1.32 ಕೋಟಿ ರೂಪಾಯಿ ಮೌಲ್ಯದ 3,892 ಕಿಂಟ್ವಾಲ್ ಅಕ್ಕಿಯ ಕೊರತೆ ದಾಸ್ತಾನು ಕೊಠಡಿಯಲ್ಲಿ ಕಂಡು ಬಂದಿದ್ದು, ಅವ್ಯವಹಾರ ನಡೆದಿರಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ದೂರು ನೀಡಿದ್ದರು. ಪಡಿತರ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ 2023 ಆಗಸ್ಟ್ 17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು 1.32 ಕೋಟಿ ರೂಪಾಯಿ ಮೌಲ್ಯದ 3,892 ಕಿಂಟ್ವಾಲ್ ಅಕ್ಕಿ ಕೊರತೆ ಇರುವುದು ಕಂಡು ಬಂದಿರುತ್ತದೆ ಎಂದು ಈ ಬಗ್ಗೆ ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಗೋದಾಮಿನ ನಿವಾರ್ಹಕರಾಗಿದ್ದ ಕಿರಿಯ ಸಹಾಯಕರ ವಿರುದ್ದ ದೂರು ನೀಡಿದ್ದನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. (ವರದಿ: ಹರೀಶ್ ಮಾಂಬಾಡಿ)