ಮಂಗಳೂರು: ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ದಕ್ಷಿಣ ಕನ್ನಡದಲ್ಲಿ ತಂಡ ರಚನೆ
ಹೆದ್ದಾರಿಗಳ ಬದಿಯಲ್ಲಿ ವಾಹನದಲ್ಲಿ ಬಂದು ಬೇಕಾಬಿಟ್ಟಿ ಕಸ ಎಸೆಯುವವರನ್ನು ತಡೆಯಲು ಹಾಗೂ ಪತ್ತೆಹಚ್ಚಲು ದಕ್ಷಿಣ ಕನ್ನಡದಲ್ಲಿ ತಂಡ ರಚನೆ ಮಾಡಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಬದಿಯಲ್ಲಿ ಬೇಕಾಬಿಟ್ಟಿ ಕಸ ಎಸೆಯುವವರನ್ನು ತಡೆಯಲು ಹಾಗೂ ಪತ್ತೆಹಚ್ಚಲು ತಂಡ ರಚನೆ ಮಾಡಲಾಗಿದೆ. ತ್ಯಾಜ್ಯ ಬೀಳುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು; ನಮ್ಮೊಂದಿಗೆ ನೀವು” ಅಭಿಯಾನ ಯಶ್ವಸ್ವಿಯಾಗಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೊಡ ಸೂಚಿಸಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಂಗಳವಾರ ಸಭೆ ನಡೆದಿದೆ. ದ.ಕ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ನಿಯಂತ್ರಿಸುವ ಸಲುವಾಗಿ ಸಭೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ 73 ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ತಡೆಗಟ್ಟಲು ಮೊದಲನೆಯದಾಗಿ ಮಂಗಳೂರು ತಾಲೂಕಿನ ಅಡ್ಯಾರ್, ಬಂಟ್ವಾಳ ತಾಲೂಕಿನ ತುಂಬೆ, ಪುದು ಹಾಗೂ ಕಳ್ಳಿಗೆ ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದ್ದು, ಈ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಬೀಳುವ ತ್ಯಾಜ್ಯಗಳನ್ನು ತಡೆಗಟ್ಟಲು ಗಸ್ತು ಪಡೆ ಹಾಗೂ ಬ್ಲಾಕ್ ಸ್ಪಾಟ್ಗಳಲ್ಲಿ ನಿಲ್ಲಲು 5 ಜನರ ತಂಡವನ್ನು ರಚಿಸಲು ಸಿದ್ಧತೆ ನಡೆಸಲಾಗಿದೆ. ಬ್ಲಾಕ್ ಸ್ಪಾಟ್ನಲ್ಲಿ ನಿಲ್ಲಲು ಪರಿಸರ ಮತ್ತು ಸ್ವಚ್ಛತೆ ವಿಷಯದಲ್ಲಿ ಕಾಳಜಿ ಇರುವವರು ಭಾಗವಹಿಸಬಹುದು. ಈ ಅಭಿಯಾನವು 3 ತಿಂಗಳಿನವರೆಗೆ ನಡೆಯಲಿದ್ದು ಈ ವೇಳೆ ಜನರನ್ನು ಮಾಹಿತಿ, ಶಿಕ್ಷಣ ಹಾಗೂ ಸಂವಹನ ನೀಡಿ ತ್ಯಾಜ್ಯ ಬಿಸಾಡುವವರ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ಕಸ ನಿರ್ವಹಣೆಗೆ ತೊಡಗುವ ಮೊದಲು ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ಪ್ರತೀ ಮನೆಗಳಲ್ಲಿ ಕಸ ವಿಂಗಡಿಸಿ ಕೊಡುವಂತೆ ಕ್ರಮವಹಿಸಬೇಕಿದೆ. 100 ಶೇಕಡಾ ಮನೆಗಳಿಂದ ಸರಿಯಾದ ಕ್ರಮದಲ್ಲಿ ತ್ಯಾಜ್ಯ ಸಂಗ್ರಹ ಆದರೆ ಮಾತ್ರ ರಸ್ತೆ ಬದಿಗಳಲ್ಲಿ ಕಸ ಬೀಳುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ.
ಕಸ ಬೀಳುವ ಪ್ರದೇಶ ಗುರುತಿಸಿ ಆ ಪ್ರದೇಶದಲ್ಲಿ ಬೆಳಗ್ಗೆ 5 ರಿಂದ 8 ಗಂಟೆಯವರಗೆ ಹಾಗೂ ಸಂಜೆ 6 ರಿಂದ 9 ಗಂಟೆಯವರೆಗೆ ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ 5 ಜನ ಸ್ವಯಂ ಸೇವಕರನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವೇಳೆ ತ್ಯಾಜ್ಯ ಬಿಸಾಡುವರನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಲು ಉದ್ದೇಶಿಸಿದೆ. ಅಲ್ಲದೆ ಸ್ವಚ್ಛತೆ ಜಾಗೃತಿ ಮೂಡಿಸುವ ಸಲುವಾಗಿ ವಾಹನದಲ್ಲಿ ಮೈಕ್ ಮೂಲಕ ವ್ಯಾಪಕ ಪ್ರಚಾರ, ತ್ಯಾಜ್ಯ ಬೀಳುವುದನ್ನು ತಡೆಹಿಡಿಯಲು ಗಸ್ತು ಪಡೆ ರಚಿಸಲು ದ.ಕ. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಿದ್ಧತೆ ನಡೆಸಿದೆ.