ಮಂಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ನವವಿವಾಹಿತ ಸಹಿತ 8 ಮಂದಿ ಆರೋಪಿಗಳ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ನವವಿವಾಹಿತ ಸಹಿತ 8 ಮಂದಿ ಆರೋಪಿಗಳ ಸೆರೆ

ಮಂಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ನವವಿವಾಹಿತ ಸಹಿತ 8 ಮಂದಿ ಆರೋಪಿಗಳ ಸೆರೆ

ಮಂಗಳೂರಿನಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಪ್ರಕರಣದಲ್ಲಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರಿನ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಮಂಗಳೂರು ಹತ್ಯೆ ಪ್ರಕರಣದ ಕುರಿತು ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ಮಾಹಿತಿ ನೀಡಿದ್ದಾರೆ.
ಮಂಗಳೂರು ಹತ್ಯೆ ಪ್ರಕರಣದ ಕುರಿತು ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ಮಾಹಿತಿ ನೀಡಿದ್ದಾರೆ. (The hindu)

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಡಡಿಗೆ ತೆಗೆದುಕೊಳ್ಳಲಾಗಿದೆ. ಯಾವ ಕಾರಣಕ್ಕೆ ಅವರು ಹತ್ಯೆ ಮಾಡಿದರು ಎಂಬ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ. ಈ ಕುರಿತು ಗೃಹ ಸಚಿವ ಡಾ.ಪರಮೇಶ್ವರ್‌ ಹಾಗೂ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ಸಮ್ಮುಖದಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅನುಪಮ್ ಅಗರವಾಲ್, ಘಟನೆ ನಡೆದ ಬಳಿಕ ಅವರು ಅಡಗಿಕೊಳ್ಳಲು ಯತ್ನಿಸಿದ್ದರು, ವಾಹನ ಸಂಖ್ಯೆ ಹಾಗು ಸಿಸಿಟಿವಿ ಮಾಹಿತಿ ಆಧರಿಸಿ ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಅವರನ್ನು ಪತ್ತೆ ಹಚ್ಚಲಾಗಿದೆ ಎಂದರು. ಮಹಿಳೆಯರ ಪಾತ್ರದ ಕುರಿತೂ ತನಿಖೆ ನಡೆಸಲಾಗುತ್ತಿದ್ದು, ಇಷ್ಟರವರೆಗಿನ ಮಾಹಿತಿಯಂತೆ ಈ ಕೃತ್ಯದಲ್ಲಿ 10 ಮಂದಿ ಪಾಲ್ಗೊಂಡಿರುವುದು ಖಚಿತಪಟ್ಟಿದೆ. ಇನ್ನೂ ಇಬ್ಬರ ಸೆರೆ ಬಾಕಿ ಇದೆ, ಇನ್ನಷ್ಟು ಮಂದಿ ಕೃತ್ಯದ ಹಿಂದಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸುವುದಾಗಿ ಹೇಳಿದರು.

ಬಂಧಿತರು ಯಾರು?

ಬಂಧಿತ ಆರೋಪಿಗಳ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು. ಅವು ಈ ಕೆಳಗಿನಂತಿವೆ:

1. ಅಬ್ದುಲ್ ಸಫ್ಘಾನ್ (29): ಪೇಜಾವರ ನಿವಾಸಿ, ಪ್ರಸ್ತುತ ಬಜಪೆ ಕಿನ್ನಿಪದವುದಲ್ಲಿ ವಾಸ, ವೃತ್ತಿಯಲ್ಲಿ ಡ್ರೈವರ್.

2. ಮೊಹಮ್ಮದ್ ಮುಝಮಿಲ್ (32): ಕೆಂಜಾರು ನಿವಾಸಿ, ಹಿಂದೆ ಸೌದಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಇತ್ತೀಚೆಗೆ ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆ ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣ (IPC 392) ದಾಖಲಾಗಿದೆ.

3. ಕಲಂದರ್ ಶಾಫಿ (31): ಕಳವಾರು ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್. ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

4. ರಂಜಿತ್ (19): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ, , ವೃತ್ತಿಯಲ್ಲಿ ಡ್ರೈವರ್. ಕೃತ್ಯಕ್ಕೆ ಬಳಸಿದ ಲಾಂಗ್ (ಮಚ್ಚು) ಅನ್ನು ಕಾರಿನಿಂದ ತೆಗೆದುಕೊಟ್ಟ ಆರೋಪ ಈತನ ಮೇಲಿದೆ.

5. ನಾಗರಾಜ್ (20): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ,ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.’

6. ಮೊಹಮ್ಮದ್ ರಿಜ್ವಾನ್ (28): ಜೋಕಟ್ಟೆ ನಿವಾಸಿ, ಹಿಂದೆ ಸೌದಿ ಅರೇಬಿಯಾದಲ್ಲಿ ಆಯಿಲ್ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದ.

7. ಅದಿಲ್ ಮೆಹರೂಫ್ (ಈಗ ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದಾನೆ ಎನ್ನಲಾದ ಫಾಝಿಲ್ ಸಹೋದರ ಸಂಬಂಧಿ ಎನ್ನಲಾಗಿದೆ)

8. ನಿಯಾಜ್ (28): ಬಜೆ ಶಾಂತಿಗುಡ್ಡೆ ನಿವಾಸಿ, ಮೇಸ್ತ್ರಿ ಹೆಲ್ಪರ್ ಕೆಲಸ.

ಬಂಧಿತರಲ್ಲಿ ಮಂಗಳೂರು ಸ್ಥಳೀಯರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯುವಕರೂ ಸೇರಿದ್ದಾರೆ. ಕೆಲವರ ಮೇಲೆ ಈ ಹಿಂದೆಯೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಕೊಲೆಯ ಹಿಂದಿನ ನಿಖರ ಕಾರಣ, ಸಂಚು ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಕಮೀಷನರ್ ತಿಳಿಸಿದರು.

ಕಿನ್ನಿಪದವಿನಲ್ಲಿ ಇನ್ನೋವಾ ಕಾರಿನಲ್ಲಿ ಸುಹಾಸ್ ಶೆಟ್ಟಿ ತನ್ನ ಸ್ನೇಹಿತರ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಏಕಾಏಕಿ ಬೊಲೆರೊ ಪಿಕಪ್ ಬಂದು ಅಡ್ಡಗಟ್ಟಿತು. ಅದೇ ಹೊತ್ತಿಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಮಚ್ಚು, ತಲವಾರಿನಿಂದ ಹಲ್ಲೆ ನಡೆಸಿದ್ದು, ಗಾಯಗೊಂಡ ಸುಹಾಸ್ ಶೆಟ್ಟಿ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಹೊತ್ತಿಗೆ ವಿಡಿಯೋಗಳೂ ವೈರಲ್ ಆಗಿತ್ತು. ಅದರಲ್ಲಿರುವಂತೆ ತನಿಖೆ ಮಾಡಿ, 8 ಮಂದಿಯನ್ನು ದಸ್ತಗಿರಿ ಮಾಡಿದ್ದೇವೆ ಎಂದರು. ಅಬ್ದುಲ್ ಸಫ್ವಾನ್ ಮೊದಲನೇ ಆರೋಪಿಯಾಗಿದ್ದಾನೆ. ಫಾಸಿಲ್ ಕೊಲೆ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಮುಗಿಸಬೇಕು ಎಂಬ ಕಾರಣದಿಂದ ಸಫ್ವಾನ್ ಸಂಬಂಧಿಕ ಆದಿಲ್ ಮೆಹರೂಫ್ ಜೊತೆ ತಂಡ ರಚಿಸುತ್ತಾರೆ. ಇದಕ್ಕಿಂತ ಮೊದಲೇ ಕೊಲೆ ಮಾಡಲು ಪ್ರಯತ್ನಿಸಿದ್ದು, ಆದರೆ ಸಫಲರಾಗಿರಲಿಲ್ಲ. ಮೊದಲೇ ನಿಗದಿಪಡಿಸಿದಂತೆ ಹಲ್ಲೆ ನಡೆಸಿ ಕೊಂದಿದ್ದಾರೆ. ಈಗಾಗಲೇ ಎಂಟು ಮಂದಿಯನ್ನು ಅರೆಸ್ಟ್ ಮಾಡಿದ್ದು, ಇನ್ನೂ ಇಬ್ಬರನ್ನು ಬಂಧಿಸಲು ಬಾಕಿ ಇದೆ ಎಂದರು.

ಇದನ್ನು ಕೇವಲ ರಿವೆಂಜ್ ಕೇಸ್ ಎನ್ನಲು ಸಾಧ್ಯವಿಲ್ಲ. ಸಫ್ವಾನ್ ಮತ್ತು ಆದಿಲ್ ಸೇರಿ ಈ ಸಂಚು ರೂಪಿಸಿದ್ದಾರೆ. 2023ರಲ್ಲಿ ಸುಹಾಸ್ ಶೆಟ್ಟಿ ಮತ್ತು ಸ್ನೇಹಿತರು ಸಫ್ವಾನ್ ಮೇಲೆ ಹಲ್ಲೆ ನಡೆಸಿದ ಆರೋಪವಿತ್ತು, ಈ ಹಿನ್ನೆಲೆಯಲ್ಲಿ ಸಫ್ವಾನ್ ಗೂ ಸುಹಾಸ್ ಮೇಲೆ ಕೋಪವಿತ್ತು ಎಂದರು. ಬುರ್ಖಾದಾರಿ ಮಹಿಳೆಯರನ್ನು ಗುರುತಿಸಿದ್ದು, ಮುಂದಿನ ತನಿಖೆ ನಡೆಸಲಾಗುವುದು ಎಂದರು.

15 ಪ್ರಕರಣ ದಾಖಲು

ಸೋಶಿಯಲ್ ಮೀಡಿಯಾ ಮೂಲಕ ಸುಳ್ಳು ವದಂತಿಗಳನ್ನು ಹಬ್ಬಿಸುವುದು, ನಿಷೇಧಾಜ್ಞೆ ಸಂಬಂಧಿಸಿದಂತೆ ನಿರ್ಬಂಧ ಉಲ್ಲಂಘಿಸುವ ಕುರಿತು ತನಿಖೆ ನಡೆಸಲಾಗುತ್ತಿದೆ. ಇನ್ಸ್ ಟಾಗ್ರಾಮ್ ಮತ್ತು ಫೇಸ್ ಬುಕ್ ನ ಅಸಲಿ, ನಕಲಿ ಕುರಿತು ತನಿಖೆ ಮಾಡಲಾಗುತ್ತಿದೆ. ಈಗಾಗಲೇ 15 ಪ್ರಕರಣಗಳು ದಾಖಲಾಗಿವೆ ಎಂದು ಕಮೀಷನರ್ ಅನುಪಮ್ ಅಗರವಾಲ್ ಹೇಳಿದರು.

ಸಚಿವರ ಸಭೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಘಟನೆ ನಡೆದ ಸ್ಥಳ ಸಹಿತ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯನ್ನೂ ನಡೆಸಿದರು.

ಗುರುವಾರ ಗುಂಪೊಂದು ಹಿಂದೂ ಕಾರ್ಯಕರ್ತ ಸುಹಾಸ್‌ಶೆಟ್ಟಿಯನ್ನು ಭೀಕರವಾಗಿ ಕೊಲೆ ಮಾಡಿದ್ದು. ಮತ್ತೊಬ್ಬ ಸ್ನೇಹಿತನ ಮೇಲೆಯೂ ತಂಡ ಕೊಲೆಗೆ ಯತ್ನಿಸಿತ್ತು. ಗುರುವಾರ ರಾತ್ರಿ ಸುಮಾರು 8.30ರ ಹೊತ್ತಿಗೆ ಘಟನೆ ನಡೆದಿದ್ದು, ಮಂಗಳೂರಿನಿಂದ ಬಜಪೆಯತ್ತ ಇನ್ನೋವಾ ಕಾರಿನಲ್ಲಿ ಸಾಗುತ್ತಿದ್ದ ಸುಹಾಸ್ ಮತ್ತು ಸ್ನೇಹಿತರನ್ನು ವಾಹನದಲ್ಲಿ ಬೆನ್ನಟ್ಟಿ ಬಂದು ಕಿನ್ನಿಪದವಿನಲ್ಲಿ ಮತ್ತೊಂದು ಪಿಕಪ್ ವಾಹನ ಮೂಲಕ ಅಡ್ಡಗಟ್ಟಿ, ಸುಹಾಸ್ ಕೆಳಗೆ ಇಳಿಯುವುದನ್ನೇ ಕಾದು ತಲವಾರಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದೆ. ಹತ್ಯೆ ಖಚಿತಗೊಂಡ ಬಳಿಕ ತಂಡ ಪರಾರಿಯಾಗಿತ್ತು. ಕೂಡಲೇ ಸುಹಾಸ್ ಅವರನ್ನು ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಕೊಲೆಯಾದ ಸುಹಾಸ್ ಶೆಟ್ಟಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದವರಾಗಿದ್ದರೂ ಬಜಪೆಯಲ್ಲಿ ವಾಸವಾಗಿದ್ದರು. 2022ರ ಸುರತ್ಕಲ್ ನಲ್ಲಿ ಹತ್ಯೆಗೀಡಾಗಿದ್ದ ಫಾಝಿಲ್ ಪ್ರಕರಣದ ಆರು ಆರೋಪಿಗಳಲ್ಲಿ ಒಬ್ಬ. ಸುಹಾಸ್ ಶೆಟ್ಟಿ ವಿರುದ್ಧ ಬಜಪೆ, ಬೆಳ್ತಂಗಡಿ, ಸುರತ್ಕಲ್ ವ್ಯಾಪ್ತಿಯಲ್ಲಿ ಒಟ್ಟು 5 ಪ್ರಕರಣಗಳಿವೆ. 2024 ಮಾ.17ರಂದು ಈತನಿಗೆ ಜಾಮೀನು ಲಭಿಸಿತ್ತು. ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಫಾಜಿಲ್ ಹತ್ಯೆ ನಡೆದಿತ್ತು.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.