ಕನ್ನಡ ಸುದ್ದಿ  /  Karnataka  /  Mangalore News: Dakshina Kannada Koila Cattle Farm Caught Fire

Koila Farm Fire: ಮತ್ತೆ ಕೊಯಿಲಾ ಪಶುಸಂಗೋಪನಾ ಫಾರ್ಮ್‌ಗೆ ಬೆಂಕಿ, ಹಲವು ಎಕರೆ ಹುಲ್ಲುಗಾವಲು ಬೆಂಕಿಗಾಹುತಿ

ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲಾ ಪಶು ಸಂಗೋಪನಾ ಕೇಂದ್ರದಲ್ಲಿ ಮತ್ತೆ ಬೆಂಕಿ ಅನಾಹುತ ವರದಿಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲಾ ಪಶು ಸಂಗೋಪನಾ ಕೇಂದ್ರದಲ್ಲಿ ಮತ್ತೆ ಬೆಂಕಿ ಅನಾಹುತ ವರದಿಯಾಗಿದೆ. ಬೆಂಕಿಯ ಕೆನ್ನಾಲಗೆಗೆ ಹಲವು ಎಕರೆ ಹುಲ್ಲುಗಾವಲು ಭಸ್ಮವಾಗಿದೆ ಎನ್ನಲಾಗಿದೆ. ಸ್ಥಳೀಯರು ಸೇರಿದಂತೆ ಅಗ್ನಶಾಮಕ ದಳ ಬೆಂಕಿ ಆರಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಅತ್ಯಂತ ಸುಂದರ ಹುಲ್ಲುಗಾವಲು ಪ್ರದೇಶವಾಗಿರುವ ಕೊಯಿಲಾ ಫಾರ್ಮ್‌ ಸಹಜವಾಗಿ ಬೇಸಿಗೆಗೆ ಒಣಗಿ ಹುಲ್ಲು ತುಂಬಿದೆ. ಇಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಎಕರೆ ಪ್ರದೇಶಗಳಿಗೆ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.

ಬೆಂಕಿ ಆಕಸ್ಮಿಕದಿಂದ ಆ ಪ್ರದೇಶದಲ್ಲಿ ದಟ್ಟ ಹೊಗೆ ಉಂಟಾಗಿದ್ದು, ಭಯಾನಕವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

2017ರ ಜನವರಿ ತಿಂಗಳಿನಲ್ಲೂ ಕೊಯಿಲ ಹುಲ್ಲುಗಾವಲಿಗೆ ಬೆಂಕಿ ಬಿದ್ದು ಐವತ್ತು ಎಕರೆ ಪ್ರದೇಶದಲ್ಲಿ ಹುಲ್ಲುಗಾವಲು ಹೊತ್ತಿ ಉರಿದಿತ್ತು.

ಆ ಸಮಯದಲ್ಲಿ ಕೊಯಿಲಾ ಗಂಡಿಬಾಗಿಲು ರಸ್ತೆ ಬದಿಯಲ್ಲಿ ಹಾಕಿರುವ ಬೆಂಕಿಯಿಂದ ಹುಲ್ಲುಗಾವಲಿಗೆ ಬೆಂಕಿ ತಗುಲಿತ್ತು. ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿ ಆನೆಗುಂಡಿ, ಕೊಯಿಲ ಗೇಟ್‌ ಬಳಿಯ ಗುಡ್ಡದ ತನಕ ಬೆಂಕಿ ವ್ಯಾಪಿಸಿತ್ತು.

2015ರ ಫೆಬ್ರವರಿ ತಿಂಗಳಲ್ಲಿಯೂ ಕೊಯಿಲಾ ಪಶಶಸಂಗೋಪನಾ ಕ್ಷೇತ್ರಕ್ಕೆ ಒಳಪಟ್ಟ ಮುಳಿ ಹುಲ್ಲುಗಾವಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಆನೆಗುಂಡಿ, ವೂಪಾಲ್‌, ಬೇಂಗದಪಡ್ಪು ಪ್ರದೇಶಗಳಲ್ಲಿ ಬೆಂಕಿ ಹರಡಿ ಅಪಾರ ನಷ್ಟವುಂಟಾಗಿತ್ತು.

ಬೆಂಕಿಯ ಕೆನ್ನಾಲಗೆಗೆ ಬೆಲೆಬಾಳುವ ಗಿಡಮರಗಳು, ಬಿದಿರಿನ ಪೊದೆಗಳು, ಗಿಡಗಂಟಿಗಳು, ಅಪಾರ ಹುಲ್ಲುಗಳು ಉರಿದು ಹೋಗಿದ್ದವು.

ಇಲ್ಲಿ ಪ್ರತಿಬಾರಿಯೂ ಬೆಂಕಿ ಆಕಸ್ಮಿಕ ಸಂಭವಿಸುತ್ತಿದ್ದು, ಹೆಚ್ಚಿನ ಮುಂಜಾಗ್ರತೆ ಕೊರತೆಯೂ ಕಾರಣ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿಯೂ ಅರಣ್ಯ ಸಿಬ್ಬಂದಿಗಳು ಈ ಸಮಯದಲ್ಲಿ ಕಾಡ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಬೆಂಕಿ ರೇಖೆ ನಿರ್ಮಿಸುವುದು, ಬೆಂಕಿ ನಂದಿಸಲು ಬೇಕಾಗುವ ಸಾಧನ ಸಲಕರಣೆಗಳನ್ನು ಸಜ್ಜುಗೊಳಿಸುವುದು ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಲಾಗುತ್ತಿದೆ. ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ ಪ್ರಕಾರ, ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ 13 ವಲಯಗಳಲ್ಲಿ ಒಟ್ಟು 2581 ಕಿ.ಮೀ. ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ. ಬೆಂಕಿ ಆಕಸ್ಮಿಕ ತಡೆಯುವ ನಿಟ್ಟಿನಲ್ಲಿ ಪ್ರತಿ ವರ್ಷ 100 ಕಿ.ಮೀ. ಹೆಚ್ಚಿಗೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮಡಿಕೇರಿಯಲ್ಲಿಯೂ ಅರಣ್ಯ ಪ್ರದೇಶಗಳನ್ನು ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಣಹವೆಯ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲೆಯಾದ್ಯಂತ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ವಿರಾಜಪೇಟೆ ವಿಭಾಗದಲ್ಲಿ ಒಟ್ಟು 66 ಕಿ.ಮೀ ಕಾಡ್ಗಿಚ್ಚು ರೇಖೆಗಳನ್ನು ಎಳೆಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೀವ್ರ ಶುಷ್ಕ ಹವಾಮಾನದ ನಂತರ ಕೊಡಗಿನಾದ್ಯಂತ ಖಾಸಗಿ ಎಸ್ಟೇಟ್‌ಗಳು ಮತ್ತು ಜನ ಪ್ರದೇಶಗಳಲ್ಲಿ ಬೆಂಕಿಯ ಘಟನೆಗಳು ಸೇರಿದಂತೆ ಹಲವಾರು ಅಗ್ನಿ ಅವಘಡಗಳು ಆಗಾಗ್ಗೆ ವರದಿಯಾಗುತ್ತಿವೆ. ಈ ಆಕಸ್ಮಿಕ ಬೆಂಕಿಯಿಂದ ಮೀಸಲು ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸಲು, ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡ್ಗಿಚ್ಚು ತಡೆಯಲು ಹೆಚ್ಚುವರಿ ಅರಣ್ಯ ವೀಕ್ಷಕರನ್ನು ನೇಮಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.