ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ
ರೋಗಿಗಳ ಸೋಗಿನಲ್ಲಿ ಬಂದು ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಲು ಯತ್ನಿಸಿದ ಆರೋಪದಲ್ಲಿ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. (ವರದಿ: ಹರೀಶ ಮಾಂಬಾಡಿ)

ಮಂಗಳೂರು: ಮೊಬೈಲ್ ಅನ್ನು ಲೇಡಿಸ್ ಟಾಯ್ಲೆಟ್ನಲ್ಲಿ ಇಟ್ಟು, ಆನ್ ಮಾಡಿ, ರೆಕಾರ್ಡ್ ಮಾಡಲು ಯತ್ನಿಸಿದ ಪ್ರಕರಣವೊಂದು ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ (Mangalore Medical College) ನಡೆದಿದ್ದು, ಇದೀಗ ಆರೋಪಿ ಅಪ್ರಾಪ್ತ ವಯಸ್ಕ ಬಾಲಕನನ್ನು ಬಂಧಿಸಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದೆ. ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನೋರ್ವನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ (Mangalore Crime News).
ಇದನ್ನೂ ಓದಿ: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ
ಘಟನೆಯ ವಿವರ ಹೀಗಿದೆ
ಮೆಡಿಕಲ್ ಕಾಲೇಜಿನ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ಅವರಿಗೆ ಮೇ 06ರ ಸಂಜೆ 3:30ರ ವೇಳೆ ಕಾಲೇಜಿನ 1ನೇ ಮಹಡಿಯ ಮಹಿಳೆಯರ ಶೌಚಗೃಹದಲ್ಲಿ ಮೊಬೈಲ್ ಸದ್ದು ಕೇಳಿಸಿತು. ಇದರ ಜಾಡು ಹಿಡಿದು ಹುಡುಕಾಟ ನಡೆಸಿದಾಗ ಮಹಿಳೆಯರ ಶೌಚಾಲಯದ ಒಳಗೆ ಮೇಲ್ಭಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಇಟ್ಟಿರುವುದು ಕಂಡುಬಂದಿದೆ. ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚಗೃಹಕ್ಕೆ ತೆರಳಿದ ಬಳಿಕದ ದೃಶ್ಯ ಸೆರೆಹಿಡಿಯಲು ಇರಿಸಿದಂತೆ ಅಲ್ಲಿ ಕಂಡುಬಂದಿತ್ತು. ಈ ಕಾರಣದಿಂದ ಅನುಮಾನಗೊಂಡು ಮಂಗಳೂರು ಉತ್ತರ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಮೂಲದ ವಿದ್ಯಾರ್ಥಿಯಾಗಿರುವ ಈ ಬಾಲಕ ಹಿಂದೆ ಹಲವು ಬಾರಿ ಚಿಕಿತ್ಸೆಗೆಂದು ತಾಯಿ ಜೊತೆ ಬರುತ್ತಿದ್ದ. ಸೋಮವಾರ ಒಬ್ಬನೇ ಬಂದಿದ್ದ. ಬಂದಾಗ ಈ ಕೃತ್ಯವೆಸಗಿದ್ದಾನೆ. ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಮೊಬೈಲ್ ಪರಿಶೀಲನೆ ನಡೆಸಿದಾಗ ಯಾವುದೇ ವಿಡಿಯೊ, ಫೊಟೊ ದಾಖಲಾಗಲಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ನೀಡಿದ ಮಾಹಿತಿಯಂತೆ, ಕಾಲೇಜಿನ ಮಹಿಳಾ ಶೌಚಗೃಹದಲ್ಲಿ ಮೊಬೈಲ್ ಪತ್ತೆಯಾದ ಘಟನೆ ಗೊತ್ತಾಗಿದೆ. ಶೌಚಗೃಹದಲ್ಲಿ ಯಾರೂ ಇಲ್ಲದ ವೇಳೆ ಮೊಬೈಲ್ ರಿಂಗಾಗುತ್ತಿದ್ದುದನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಫೋನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಆರೋಪಿ 17 ವರ್ಷದ ಅಪ್ರಾಪ್ತನಾಗಿದ್ದು, ರೋಗಿಯ ವೇಷದಲ್ಲಿ ಕಾಲೇಜಿಗೆ ಬಂದಿದ್ದ. ಆತನನ್ನು ಬಂಧಿಸಿ ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ" ಎಂದು ಹೇಳಿದ್ದಾರೆ.
ಮಲ್ಪೆ ಬೀಚ್ ನಲ್ಲಿ ಮುಳುಗುತ್ತಿದ್ದ ಇಬ್ಬರು ಪಾರು
ಉಡುಪಿ ಜಿಲ್ಲೆಯ ಮಲ್ಪೆ ಕಡಲ ಕಿನಾರೆಯಲ್ಲಿ ಕಡಲ ಅಲೆಗಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರನ್ನು ಜೀವರಕ್ಷಕರು ರಕ್ಷಿಸಿದ್ದಾರೆ. ನಿನ್ನೆ (ಮೇ 8, ಗುರುವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಅಲೆಗಳ ಮಧ್ಯೆ ಮುಳುಗೇಳುತ್ತಿದ್ದ ಗೋಪಿನಾಥ್ (25) ಮತ್ತು ರಂಗನಾಥ್ (26) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ 6 ಮಂದಿ ಯುವಕರ ತಂಡ ಮಲ್ಪೆ ಕಡಲ ಕಿನಾರೆಗೆ ಬಂದಿದ್ದರು. ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದಾಗ, ಈ ಘಟನೆ ನಡೆದಿದೆ. ಮಲ್ಪೆ ಬೀಚ್ ನ ಮುಖ್ಯ ಭಾಗದಿಂದ ಉತ್ತರಕ್ಕೆ ಸುಮಾರು 100 ಮೀಟರ್ ದೂರದಲ್ಲಿ ಇವರು ಈಜಲು ತೆರಳಿದ್ದರು. ಹವಾಮಾನ ಪರಿಸ್ಥಿತಿ ಬದಲಾವಣೆ ಪರಿಣಾಮ ಸಮುದ್ರದಲ್ಲಿ ಉಬ್ಬರ ಜಾಸ್ತಿ ಇತ್ತು. ಹೀಗಾಗಿ ನದಿಗಿಳಿಯದಂತೆ ಸೂಚನೆ ನೀಡುತ್ತಿದ್ದರೂ ಜೀವರಕ್ಷಕರ ಕಣ್ಣುತಪ್ಪಿಸಿ ನೀರಿಗಿಳಿಯುವ ಪ್ರವಾಸಿಗರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. (ವರದಿ: ಹರೀಶ ಮಾಂಬಾಡಿ)
