ಸಮಾಜಘಾತುಕರ ಮಾರಣಾಂತಿಕ ಆಟ, ಮಂಗಳೂರಿನವರಿಗೆ ಪ್ರಾಣಸಂಕಟ; ರಾತ್ರಿ 9 ಗಂಟೆಯಾದ ಕೂಡಲೇ ಬಂದ್!
ಮಂಗಳೂರಿನಲ್ಲಿ ಉಂಟಾಗಿದ್ದ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಅಹಿತಕರ ಘಟನೆ ತಡೆಯಲು ಪೊಲೀಸರು ವಿವಿಧ ಕ್ರಮ ಕೈಗೊಂಡಿದ್ದಾರೆ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಪೊಲೀಸರು ಕೈಗೊಂಡ ಕ್ರಮದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರು: ಕೆಲವು ಕಿಡಿಗೇಡಿಗಳು, ಸಮಾಜಘಾತುಕರು ಶಾಂತವಾಗಿದ್ದ ಮಂಗಳೂರನ್ನು ಕದಡಿಹಾಕಿ, ಮನುಷ್ಯ, ಮನುಷ್ಯನ ನಡುವೆ ಭೀತಿ ಹುಟ್ಟಿಸಿದ್ದರ ಪರಿಣಾಮವನ್ನು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಅನುಭವಿಸಬೇಕಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಮಂಗಳೂರು ಕಳಾಹೀನವಾಗುತ್ತಿದ್ದು, ಜಿಲ್ಲೆಯ ಇತರ ತಾಲೂಕು ಕೇಂದ್ರಗಳೂ ವ್ಯಾಪಾರ ವಹಿವಾಟುಗಳು ಕಡಿಮೆಯಾಗಿ ಬಾಗಿಲು ಹಾಕುತ್ತಿವೆ. ಮಂಗಳೂರು ನಗರಕ್ಕೆ ಕೆಲವೇ ಕೆಲವು ಕಿಡಿಗೇಡಿಗಳಿಂದ ಕೆಟ್ಟ ಹೆಸರು ಬರುತ್ತಿದೆ. ಆದರೆ ಅದೇ ಕಾರಣವನ್ನು ಮುಂದಿಟ್ಟು ಜನರಲ್ಲಿ ಭಯ ಹುಟ್ಟಿಸುವುದು ಯಾಕೆ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ. ಪೊಲೀಸರೇ ಗಲಾಟೆ ಆಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಅಂಗಡಿ ಬಾಗಿಲು ಹಾಕಿಸುತ್ತಿದ್ದಾರೆ ಎಂಬುದು ಅವರ ದೂರು.
ಯಾವುದೇ ಅಹಿತಕರ ಘಟನೆ ಆದರೆ, ಮುಂಜಾಗರೂಕತಾ ಕ್ರಮವಾಗಿ ಬಂದ್ ಮಾಡಿಸಲಿ. ಆದರೆ, ಮತ್ತೆ ನಗರ ಸಹಜ ಸ್ಥಿತಿಗೆ ಬಂದಾಗಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕೇ ವಿನಃ ಅಂಗಡಿ ಬಂದ್ ಮಾಡಿಸಬಾರದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಎಲ್ಲದಕ್ಕೂ ಅಂಗಡಿ ಬಂದ್ ಮಾಡುವುದು ಪರಿಹಾರವೇ ಎಂದು ಪ್ರಶ್ನಿಸುತ್ತಿದ್ದಾರೆ.
9 ಗಂಟೆಯಾದ ಕೂಡಲೇ ಬಂದ್ ಮಾಡಿ ಅನ್ತಾರೆ:
ರಾತ್ರಿ 9 ಗಂಟೆಯಾಗುತ್ತಿದ್ದಂತೆ ಪೊಲೀಸರು ಯಾವುದೇ ಸೂಚನೆ ಕೊಡದೆ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬಂದ್, ಸೆಕ್ಷನ್ನಿಂದ ಸೊರಗಿ, ಚೇತರಿಸಿಕೊಳ್ಳುತ್ತಿದ್ದ ಮಂಗಳೂರಿಗೆ ಇದು ಸಮಸ್ಯೆ ಉಂಟಾಗುತ್ತಿದೆ. ಈಗ ಯಾವುದೇ ಗಲಾಟೆ ಇಲ್ಲ. ಆದರೂ ಪೊಲೀಸರು ಏಕಾಏಕಿ ಬಂದು ಅಂಗಡಿ ಬಂದ್ ಮಾಡಿಸುತ್ತಿರುವುದು ಹೋಟೆಲ್, ಅಂಗಡಿ ಮಾಲೀಕರ ಆಕ್ಷೇಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮಂಗಳೂರು ಸಿಟಿಯ ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಲೇಡಿಹಿಲ್, ಊರ್ವಸ್ಟೋರ್, ಬಿಜೈ, ಕದ್ರಿ, ಕಂಕನಾಡಿ, ಅಳಕೆ, ಲಾಲ್ ಬಾಗ್, ಅತ್ತಾವರ, ಸ್ಟೇಟ್ ಬ್ಯಾಂಕ್ ಸರ್ಕಲ್, ಮೋರ್ಗನ್ಸ್ ಗೇಟ್, ಜಪ್ಪು, ಪಡೀಲ್, ಬಿಕರ್ನಕಟ್ಟೆಯಲ್ಲೆಲ್ಲ ರಾತ್ರಿ 10-11ರವರೆಗೂ ವಹಿವಾಟು, ಚಟುವಟಿಕೆಗಳು ಇರುತ್ತವೆ. ವಿಶೇಷವಾಗಿ ರಾತ್ರಿ 9 ಗಂಟೆಗೆ ಹೋಟೆಲ್ ಗೆ ಊಟಕ್ಕೆ ಬರುವವರು, ಫ್ಯಾಮಿಲಿ ಸಮೇತವಾಗಿ ಬರುವವರಿದ್ದಾರೆ. ಆದರೆ ಬಂದ್ ಮಾಡಿಸಿದರೆ, ಇರುವ ವ್ಯಾಪಾರಕ್ಕೂ ಹೊಡೆತ ಬೀಳುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ರಾತ್ರಿ ಎಂಟು ಗಂಟೆ ಬಳಿಕ ಬಸ್ಸುಗಳೂ ಸೀಮಿತ ಸಂಖ್ಯೆಯಲ್ಲಿ ಓಡಾಡುತ್ತವೆ. ಮನೆಗೆ ಹೋಗಲು ಈ ಲಾಸ್ಟ್ ಬಸ್ಗಾಗಿ ಕಾಯುವವರು ಅಧಿಕ ಮಂದಿ ಇದ್ದಾರೆ. ಏಕಾಏಕಿ ಬಸ್ಸುಗಳ ಸಂಚಾರಕ್ಕೂ ತಡೆಯೊಡ್ಡಿದ ಕಾರಣ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುವವರೇ ಗಮನಿಸಿ:
ಬಾಯಿಗೆ ಬಂದಂತೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುವವರು ಮಂಗಳೂರಿನಲ್ಲಿ ದಿನದ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳು, ಮೀನು, ತರಕಾರಿ, ಮಾರಾಟಗಾರರು, ಸಣ್ಣಪುಟ್ಟ ಕ್ಯಾಂಟೀನ್ ಹೋಟೆಲ್ ನಡೆಸುವವರನ್ನು ಗಮನದಲ್ಲಿಟ್ಟುಕೊಂಡು ಕಮೆಂಟ್ ಮಾಡಿ. ನೀವು ಹಾಕುವ ಒಂದು ಕಮೆಂಟ್ ಯಾವ ಮಟ್ಟಕ್ಕೆ ಹೋಗುತ್ತದೆ ಎಂದರೆ ಊಹಿಸಲೂ ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಜನಸಾಮಾನ್ಯರು ಅನುಭವಿಸುವ ಸಮಸ್ಯೆಗೆ ಬೆರಳೆಣಿಕೆಯಷ್ಟು ಜನರೂ ಕಾರಣವಾಗುತ್ತಿದ್ದಾರೆ. ಅಂಥವರನ್ನು ಮಟ್ಟ ಹಾಕಿ ಕಾನೂನು ಪ್ರಕಾರ ಶಿಕ್ಷೆ ಒದಗಿಸಿದರೆ, ಇಂಥದ್ದಕ್ಕೆ ಕಡಿವಾಣ ಬೀಳಬಹುದು ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಾರೆ.