ಬಿರು ಬೇಸಿಗೆಯಲ್ಲೂ ತುಂಬಿ ತುಳುಕುವ ತುಂಬೆ ಜಲಾಶಯ; ಮಂಗಳೂರಿಗೆ ಕುಡಿಯುವ ನೀರಿಗೆ ರೇಷನಿಂಗ್ ಭೀತಿ ಇಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  ಬಿರು ಬೇಸಿಗೆಯಲ್ಲೂ ತುಂಬಿ ತುಳುಕುವ ತುಂಬೆ ಜಲಾಶಯ; ಮಂಗಳೂರಿಗೆ ಕುಡಿಯುವ ನೀರಿಗೆ ರೇಷನಿಂಗ್ ಭೀತಿ ಇಲ್ಲ

ಬಿರು ಬೇಸಿಗೆಯಲ್ಲೂ ತುಂಬಿ ತುಳುಕುವ ತುಂಬೆ ಜಲಾಶಯ; ಮಂಗಳೂರಿಗೆ ಕುಡಿಯುವ ನೀರಿಗೆ ರೇಷನಿಂಗ್ ಭೀತಿ ಇಲ್ಲ

ಕರಾವಳಿಯ ಮಂಗಳೂರು ಮಹಾನಗರ ಸಹಿತ ಸುತ್ತಮುತ್ತಲನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ತುಂಬೆ ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆಯಿಲ್ಲ. ಇದರಿಂದ ಬೇಸಿಗೆಗೆ ಸಮಸ್ಯೆಯಾಗದು.ವರದಿ: ಹರೀಶ ಮಾಂಬಾಡಿ ಮಂಗಳೂರು

ಮಂಗಳೂರಿಗೆ ನೀರು ಒದಗಿಸುವ ತುಂಬೆ ಜಲಾಶಯದಲ್ಲಿ ಈಗ ನೀರಿದೆ.
ಮಂಗಳೂರಿಗೆ ನೀರು ಒದಗಿಸುವ ತುಂಬೆ ಜಲಾಶಯದಲ್ಲಿ ಈಗ ನೀರಿದೆ.

ಮಂಗಳೂರು: ಸಾಮಾನ್ಯವಾಗಿ ಬೇಸಗೆ ಎಂದರೆ ನೀರಿಗೆ ತತ್ವಾರ. ಕಳೆದ ವರ್ಷದವರೆಗೂ ಮಂಗಳೂರಿನವರು ಬೇಸಗೆ ಬಂದರೆ ಏನ್ಮಾಡೋದು ಎಂಬ ಚಿಂತೆಯಲ್ಲಿದ್ದರು. ಈ ಬಾರಿ ಅಕಾಲಿಕ ಮಳೆ ವರದಾನ ಕೊಟ್ಟಂತಾಗಿದೆ. ಕುಡಿಯುವ ನೀರಿನ ಚಿಂತೆ ದೂರವಾಗಿದೆ. ಮಂಗಳೂರಿಗರಿಗೆ ಕುಡಿಯುವ ನೀರೊದಗಿಸಲೆಂದೇ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಬಂಟ್ವಾಳ ತಾಲೂಕಿನ ತುಂಬೆಯ ಅಣೆಕಟ್ಟು ಜಲಸಮೃದ್ಧಿಯಿಂದ ತುಂಬಿದೆ. ನೀರಿನ ಮಟ್ಟ ಏರಿಕೆಯಾಗಿದ್ದು, 6 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ. ಇನ್ನೂ ಒಂದೂವರೆ ತಿಂಗಳವರೆಗೂ ನೀರನ್ನು ಸರಬರಾಜು ಮಾಡಿ ಜನರ ನೀರಿನ ಬವಣೆ ತೀರಿಸಲು ಅಧಿಕಾರಿಗಳು, ಸಿಬ್ಬಂದಿ ಅಣಿಯಾಗಿದ್ದಾರೆ.

ಹಿಂದಿನ ಒಂದು ದಶಕದ ಅವಧಿಯಲ್ಲಿ ಹಲವು ಬಾರಿ ತುಂಬೆ ಜಲಾಶಯದ ನೀರಿನ ಮಟ್ಟ ಬೇಸಿಗೆಯಲ್ಲಿ ಕುಸಿದು ನೀರು ಸರಬರಾಜಿಗೆ ವ್ಯತ್ಯಯವಾದ ಉದಾಹರಣೆಗಳಿವೆ. ಇದರಿಂದ ಮಂಗಳೂರು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಿಂದ ನೀರನ್ನು ದಿನ ಬಿಟ್ಟು ದಿನ ಇಲ್ಲವೇ ರೇಷನಿಂಗ್‌ ರೂಪದಲ್ಲಿ ಒದಗಿಸಿದ್ದೂ ಇದೆ. ಇದಕ್ಕಾಗಿ ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದನ್ನೂ ಗಮನಿಸಿದ್ದೇವೆ. ಈ ಬಾರಿ ಮಾತ್ರ ಅಂತಹ ಸನ್ನಿವೇಶ ಇದ್ದಂತಿಲ್ಲ.

ಕಳೆದ ವರ್ಷ ಭಿನ್ನ ಸ್ಥಿತಿ

ಕಳೆದ ವರ್ಷ ಇದೇ ಏಪ್ರಿಲ್ ತಿಂಗಳ 17ರ ವೇಳೆ 5.28 ಮೀಟರ್ ಗೆ ಇಳಿದಿದ್ದ ನೀರಿನ ಮಟ್ಟ ಈ ವರ್ಷ 6 ಮೀಟರ್ ಗೆ ಏರಿಕೆಯಾಗಿದೆ. ಕಳೆದ ವರ್ಷ ಸಮೀಪದ ಎಎಂಆರ್ ಡ್ಯಾಂನಲ್ಲಿ 15.25 ಮೀಟರ್ ನೀರಿನ ಸಂಗ್ರಹ ಇದ್ದರೆ, ಈಗ 18.9 ಮೀಟರ್ ನೀರು ಸಂಗ್ರಹವಿದೆ.

ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿರುವ ಸಂದರ್ಭ ಜಿಲ್ಲಾಡಳಿತ ಡ್ಯಾಂನ ಕೆಳಭಾಗದ ಅಡ್ಯಾರ್ ಡ್ಯಾಂ ಮೂಲಕ ಶೇಖರಣೆಯಾದ ಸಿಹಿನೀರು ಸುಮಾರು 50 ಎಂಎಲ್ ಡಿ ನೀರನ್ನು ಪ್ರತಿನಿತ್ಯ ತುಂಬೆ ಡ್ಯಾಂಗೆ ಹಾಯಿಸಿ ನದಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಗಮನಹರಿಸಿದ್ದೂ ಇಲ್ಲಿ ಉಲ್ಲೇಖನೀಯ. 2023-24ರ ಏಪ್ರಿಲ್ ಮೇ ತಿಂಗಳಲ್ಲಿ ಅಡ್ಯಾರ್ ಅಣೆಕಟ್ಟಿನಿಂದ ಶೇಖರಣೆಯಾದ ಹಿನ್ನೀರನ್ನು ಬ್ಯಾಕ್ ಪಂಪಿಂಗ್ ಮೂಲಕ ತುಂಬೆ ಅಣೆಕಟ್ಟಿಗೆ ಪಂಪಿಂಗ್ ಮಾಡಲಾಗಿತ್ತು.

ನೀರು ಏರಿಕೆಗೆ ಏನು ಕಾರಣ?

ಬಿರುಬೇಸಗೆ, ಬೆವರೊಡೆಯುವಂಥ ಬಿಸಿಲಿನ ತಾಪವಿದ್ದರೂ ನೇತ್ರಾವತಿ ಬತ್ತಿ ಹೋಗದಿರಲು ಕಾರಣ ಬೆಳ್ತಂಗಡಿ, ಸುಬ್ರಹ್ಮಣ್ಯ ಸಹಿತ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದು. ಬಿಸಿಲಿನ ಬೇಗೆಯ ಮಧ್ಯೆಯೂ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಲು ಇದೇ ಕಾರಣ ಎನ್ನುತ್ತಾರೆ ಜಲತಜ್ಞರು. ಎಎಂಆರ್ ಡ್ಯಾಂನಲ್ಲಿ ಗರಿಷ್ಠ ನೀರು ನಿಲ್ಲಿಸಿದ ಬಳಿಕ ಹೆಚ್ಚುವರಿಯಾಗಿ ಇದ್ದ ನೀರನ್ನು ಬಿಟ್ಟ ನಂತರ ಹೊಸದಾಗಿ ನಿರ್ಮಿಸಲಾದ ಜಕ್ರಿಬೆಟ್ಟು ಡ್ಯಾಂನಲ್ಲಿ ನೀರು ಭರ್ತಿಯಾಗಿ ತುಂಬೆ ಕಡೆಗೆ ಬಿಡಲಾಗಿತ್ತು. ಇದರಂತೆ ಸದ್ಯ ತುಂಬೆಯ ನೀರಿನ ಮಟ್ಟ 6 ಮೀಟರ್ ಇದೆ.

ಅಲ್ಲದೆ, ಹವಾಮಾನ ಇಲಾಖೆ ಸೂಚನೆ ಪ್ರಕಾರ ಇನ್ನೂ ಕೆಲ ದಿನ ಮಳೆ ಬರುವ ಸಾಧ್ಯತೆ ಇರುವ ಕಾರಣ ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ಎದುರಾಗಲಾರದು ಎಂಬ ಅಂದಾಜು ಅಧಿಕಾರಿಗಳದ್ದು.

ಎಷ್ಟಿದೆ ನೀರಿನ ಮಟ್ಟ

2019ರಲ್ಲಿ 5.49 ಮೀಟರ್ ಎತ್ತರದಲ್ಲಿ ಸಂಗ್ರಹವಾಗಿದ್ದರೆ, 2020ರಲ್ಲಿ 6 ಮೀಟರ್, 2021ರಲ್ಲಿ 5.8 ಮೀಟರ್, 2022ರಲ್ಲಿ 6 ಮೀಟರ್, 2023ರಲ್ಲಿ 5.36 ಮೀಟರ್, 2024ರಲ್ಲಿ 5.28 ಹಾಗೂ ಈ ಬಾರಿ 6 ಮೀಟರ್ ಎತ್ತರದಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ನೀರಿನ ಸಂಗ್ರಹ ಇದೆ.

ವರದಿ: ಹರೀಶ ಮಾಂಬಾಡಿ ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.