ಆಪರೇಷನ್ ಸಿಂದೂರಕ್ಕೆ ವಿರೋಧಿಸಿ ಮಂಗಳೂರಿನ ವಿದ್ಯಾರ್ಥಿನಿ ಪೋಸ್ಟ್ ವೈರಲ್: ಅಮಾನುತುಗೊಳಿಸುವಂತೆ ಎಬಿವಿಪಿ ಒತ್ತಾಯ
ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿರುವ ಆಪರೇಷನ್ ಸಿಂದೂರ್ಗೆ ಮಂಗಳೂರಿನ ವಿದ್ಯಾರ್ಥಿನಿಯಿಂದ ಆಕ್ಷೇಪ; ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ವಿರೋಧ ವ್ಯಕ್ತಪಡಿಸಿರುವ ಬೆಳಾಲಿನ ಯುವತಿ (ವರದಿ: ಹರೀಶ ಮಾಂಬಾಡಿ)
ಮಂಗಳೂರು: ಉಗ್ರರ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂದೂರ್ ಬಗ್ಗೆ ದೇಶ ಹೆಮ್ಮೆ ಪಡುತ್ತಿರುವಾಗ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಬೆಳಾಲಿನ ವಿದ್ಯಾರ್ಥಿನಿಯ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವಿದ್ಯಾರ್ಥಿನಿ ರೇಷ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿದ ಆಪರೇಷನ್ ಸಿಂದೂರ್ ಕುರಿತ ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ನಲ್ಲಿ ಬಳಸಿದ ಭಾಷೆ ಮತ್ತು ಹ್ಯಾಶ್ಟ್ಯಾಗ್ಗಳು ವಿವಾದಕ್ಕೆ ಕಾರಣವಾಗಿವೆ. ಅಪರೇಷನ್ ಸಿಂದೂರ್ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟ್ಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರೇಷ್ಮಾ ತಮ್ಮ ಪೋಸ್ಟ್ ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿನಿಯ ಅಮಾನತಿಗೆ ಎಬಿವಿಪಿ ಒತ್ತಾಯ
ಮಂಗಳೂರು ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ರೇಷ್ಮಾಳನ್ನು ಅಮಾನುತುಗೊಳಿಸುವಂತೆ ಮಂಗಳೂರು ವಿವಿಯನ್ನು ಎಬಿವಿಪಿ ಒತ್ತಾಯ ಮಾಡಿದ್ದು ಮನವಿ ಸಲ್ಲಿಸಿದೆ. ಇಂತಹ ದೇಶದ್ರೋಹದ ಮನಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ಹೊಸಕಿ ಹಾಕುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಇದುವರೆಗೆ ಪೋಲಿಸ್ ಠಾಣೆಯಲ್ಲಿ ಇದುವರೆಗೆ ಪ್ರಕರಣ ದಾಖಲಾಗಿರುವುದಿಲ್ಲ.
ವರದಿ: ಹರೀಶ ಮಾಂಬಾಡಿ