ಮಂಗಳೂರು ಬೆಂಗಳೂರು ರಸ್ತೆಯಲ್ಲಿದೆ 2 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್, ಒಂದು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧ
Kalladka Flyover: ಮಂಗಳೂರು ಬೆಂಗಳೂರು ರಸ್ತೆಯಲ್ಲಿದೆ 2.1 ಕಿ.ಮೀ ಉದ್ದದ ಫ್ಲೈಓವರ್. ಕಲ್ಲಡ್ಕದ ಈ ಮೇಲ್ಸೇತುವೆ ಒಂದು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

Kalladka Flyover: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಬಿ.ಸಿ.ರೋಡಿನಿಂದ ಮಾಣಿವರೆಗಿನ ಭಾಗದಲ್ಲಿ ಬಿ.ಸಿ.ರೋಡ್ ಸರ್ಕಲ್, ಸೇತುವೆಯ ಕೆಲಸಕಾರ್ಯಗಳು ಅಂತಿಮ ಹಂತದಲ್ಲಿವೆ. ಮಾಣಿಯಲ್ಲಿ ಹಲವು ಸಮಸ್ಯೆಗಳು ಇನ್ನೂ ಕ್ಲಿಯರ್ ಆಗಿಲ್ಲ. ಕಲ್ಲಡ್ಕ ಫ್ಲೈಓವರ್ ಕಾಮಗಾರಿಯ ಕೃಷ್ಣಕೋಡಿ ಪರಿಸರದ ಕೆಲಸಗಳು ಇನ್ನೂ ಮುಗಿದಿಲ್ಲ. ಆದರೆ ಒಂದು ತಿಂಗಳಿನೊಳಗೆ ಈ ಫ್ಲೈಓವರ್ ಕೆಲಸ ಮುಗಿದರೆ, 2.1 ಕಿ.ಮೀ ಉದ್ದದ ಹೊಸ ರಸ್ತೆಯೊಂದು ಸಿದ್ಧವಾದಂತಾಗುತ್ತದೆ.
ಬಹುನಿರೀಕ್ಷಿತ 2.1 ಕಿ.ಮೀ ಉದ್ದದ ಕಲ್ಲಡ್ಕ ಫ್ಲೈಓವರ್ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ. ಮೇ ಎರಡನೇ ವಾರದಲ್ಲಿ ಇದು ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಕೃಷ್ಣಕೋಡಿ ಪರಿಸರದಲ್ಲಿ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಲ್ಲಡ್ಕ ಪೇಟೆಯಲ್ಲಿ ಇಕ್ಕೆಲಗಳಲ್ಲೂ ಸರ್ವೀಸ್ ರಸ್ತೆ ಕಾಂಕ್ರೀಟ್ ಆಗಿದೆ. ಕಲ್ಲಡ್ಕ ಫ್ಲೈಓವರ್ ನಲ್ಲಿ ಒಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವ ಸಾಧ್ಯತೆ ಇದೆ. ಕೃಷ್ಣಕೋಡಿ ಪರಿಸರ , ಅಂದರೆ, ನರಹರಿ ಪರ್ವತದಿಂದ ಮುಂದೆ ಕಲ್ಲಡ್ಕದೆಡೆ ಸಾಗುವ ಜಾಗದ ಭಾಗದಲ್ಲಿ ಬಾಕಿ ಇದ್ದ ಕೆಲಸ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ಕಲ್ಲಡ್ಕ ಪೇಟೆ ಇನ್ನು ಲೋಕಲ್
ಪ್ರಸಿದ್ಧ ಕೆ.ಟಿ. ಹೋಟೆಲ್ (ಕಲ್ಲಡ್ಕ ಟೀ). ಮೂಲಕ ಜನಪ್ರಿಯವಾಗಿರುವ ಕಲ್ಲಡ್ಕ ಇಲ್ಲಿನ ಆರೆಸ್ಸೆಸ್ ಪ್ರಮುಖ ಡಾ. ಪ್ರಭಾಕರ ಭಟ್ ನೇತೃತ್ವದಲ್ಲಿ ನಡೆಸಲ್ಪಡುವ ಶ್ರೀರಾಮ ವಿದ್ಯಾಕೇಂದ್ರದ ಮೂಲಕವೂ ಗುರುತಿಸಲ್ಪಟ್ಟಿದೆ. ಆದರೆ ಫ್ಲೈಓವರ್ ನಲ್ಲಿ ಷಟ್ಪಥದಲ್ಲಿ ವಾಹನಗಳು ಸಂಚರಿಸಲು ಆರಂಭಿಸಿದ ಮೇಲೆ ಇವುಗಳನ್ನು ನೋಡಬೇಕು ಎಂದಿದ್ದರೆ, ಸರ್ವೀಸ್ ರಸ್ತೆಯಲ್ಲಿ ಬರಬೇಕು. ಕೆ.ಟಿ. ಕುಡಿಯಬೇಕು ಹೀಗಾಗಿ ಎಲ್ಲ ವಾಹನದವರೂ ಸರ್ವೀಸ್ ರಸ್ತೆಗೆ ಇಳಿಯುತ್ತಾರೆ ಎನ್ನುವ ಹಾಗಿಲ್ಲ. ಎಂದಿದ್ದರೂ ಅಷ್ಟೇ. ಹೀಗಾಗಿ ವಾಹನದಟ್ಟಣೆಯ ಕಲ್ಲಡ್ಕ ಪೇಟೆ ಇನ್ನು ಪೂರ್ತಿ ಲೋಕಲ್ ಆಗಲಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ.
ಬಿ.ಸಿ.ರೋಡ್ ಸರ್ಕಲ್ ಹೊಸರೂಪ
ಬಿ.ಸಿ.ರೋಡ್ ಸರ್ಕಲ್ ಹಲವು ರಸ್ತೆಗಳನ್ನು ಸಂಧಿಸುತ್ತದೆ. ಪುಂಜಾಲಕಟ್ಟೆ ಭಾಗದಿಂದ ಹಾಗೂ ಬಂಟ್ವಾಳ ಪೇಟೆ ಕಡೆಯಿಂದ ಆಗಮಿಸುವ ರಸ್ತೆಗಳು ಒಂದು ಭಾಗದಿಂದ ಇಲ್ಲಿ ಜೋಡಣೆಯಾಗುತ್ತದೆ. ಇದನ್ನು ಬೇರ್ಪಡಿಸಲು ಅಲ್ಲಿ ತ್ರಿಕೋನಾಕೃತಿಯ ಡಿವೈಡರ್ ಅನ್ನು ರಚಿಸಲಾಗಿದೆ. ಇಲ್ಲಿಂದ ಎಡಕ್ಕೆ ಸಾಗಿದರೆ, ಹಾಸನ, ಮೈಸೂರು ಕಡೆಗೆ ಸಾಗಬಹುದು. ನೇರವಾಗಿ ಹೋದರೆ, ಪಾಣೆಮಂಗಳೂರು, ಸರ್ಕಲ್ ಗೆ ಸುತ್ತುಹಾಕಿ ಬಲಕ್ಕೆ ತಿರುಗಿದರೆ ಬಿ.ಸಿ.ರೋಡ್ ಸಿಗುತ್ತದೆ. ಇದೇ ರೀತಿಯ ತ್ರಿಕೋನಾಕೃತಿಯ ಡಿವೈಡರ್ ಗೂಡಿನಬಳಿ ಪ್ರದೇಶದಿಂದ ಬರುವ ಮಾರ್ಗದ ಬಳಿ, ಬಿ.ಸಿ.ರೋಡ್ ನಿಂದ ಬಂಟ್ವಾಳಕ್ಕೆ ತಿರುಗುವ ಜಾಗದಲ್ಲಿ ಇದೆ. ಸಮಸ್ಯೆ ಏನೆಂದರೆ ಬಂಟ್ವಾಳದಿಂದ ಬಿ.ಸಿ.ರೋಡಿಗೆ ತಿರುಗುವ ವೇಳೆ ಬಿ.ಸಿ.ರೋಡ್ ಭಾಗದಿಂದ ಬರುವ ವಾಹನಗಳು ಅಡ್ಡ ಸಿಕ್ಕರೆ, ಸ್ವಲ್ಪ ಮುಂದೆ ಸಾಗುವಾಗ ಬೆಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆ ಬರುವ ವಾಹನಗಳು ಅಡ್ಡ ಸಿಗುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಆಗಾಗ್ಗೆ ಆಗುತ್ತವೆ. ಇದರ ಒಟ್ಟಾರೆ ಲಾಭವೆಂದರೆ, ವೇಗ ನಿಯಂತ್ರಕ ಹಾಗೂ ಅಪಘಾತ ನಿಯಂತ್ರಣ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಾರೆ.'
(ವರದಿ- ಹರೀಶ ಮಾಂಬಾಡಿ, ಮಂಗಳೂರು)
