Mangaluru auto rickshaw blast: ರಿಕ್ಷಾದಲ್ಲಿ ಬಾಂಬ್ ಸ್ಫೋಟ, ಶಂಕಿತ ಪ್ರಯಾಣಿಕನ ಸ್ಥಿತಿ ಗಂಭೀರ, ಪೊಲೀಸ್ ಆಯುಕ್ತರಿಂದ ಮಾಹಿತಿ
ಆಟೋ ಚಾಲಕರಾದ ಪುರುಷೋತ್ತಮ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಶಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಆಟೋ ರಿಕ್ಷದಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣನಾದ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟದಿಂದ ಶಂಕಿತ ವ್ಯಕ್ತಿಗೆ ಮತ್ತು ಆಟೋ ರಿಕ್ಷಾ ಚಾಲಕನಿಗೆ ಗಾಯಗಳಾಗಿವೆ. ಆಟೋ ಚಾಲಕರಾದ ಪುರುಷೋತ್ತಮ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಶಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಫೋಟದಿಂದ ರಿಕ್ಷಾ ಪ್ರಯಾಣಿಕ/ಶಂಕಿತ ವ್ಯಕ್ತಿಗೆ ಸೋಂಕು ಉಂಟಾಗಬಹುದು ಎಂದು ವೈದ್ಯರು ಮಾತನಾಡಲು ಯಾರನ್ನೂ ಬಿಡುತ್ತಿಲ್ಲ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಶಂಕಿತ ವ್ಯಕ್ತಿಯ ಪ್ರಯಾಣದ ಕುರಿತು ಸಮರ್ಪಕ ಮಾಹಿತಿ ದೊರಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಟೋ ಚಾಲಕನ ಜತೆಗೆ ಶಂಕಿತ ಪ್ರಯಾಣಿಕ ಯಾವುದೇ ಮಾತುಕತೆ ನಡೆಸಿಲ್ಲ. ಆಟೋ ಚಾಲಕನ ಹೇಳಿಕೆ ಪಡೆದುಕೊಂಡಿದ್ದೇವೆ. ಶಂಕಿತನಿಗೆ ಬೇರೆ ಲಿಂಕ್ ಇರುವ ಕುರಿತು ಮಾಹಿತಿ ಇಲ್ಲ. ಗಾಯಾಳುಗಳು ಚೇತರಿಸಿಕೊಂಡ ತಕ್ಷಣ ವಿಚಾರಣೆ ನಡೆಸುತ್ತೇವೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ಶಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ "ಕ್ರಿಟಿಕಲ್ʼʼ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ ಆತಂಕವಾಗದೆ ಇರಲಿ ಎಂದು ತನಿಖೆಯ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹೊರಬಿದ್ದ ಮಾಹಿತಿಗಳ ಪ್ರಕಾರ ಶಂಕಿತ ವ್ಯಕ್ತಿಯನ್ನು ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಎನ್ನಲಾಗಿದೆ. ಇಸ್ಲಾಮಿಕ್ ಸ್ಟೇಟ್ (ಐಎಸ್) ಜತೆ ಸಂಪರ್ಕ ಹೊಂದಿರುವ ಆರೋಪವೂ ಈತನ ಮೇಲಿದೆ. ಆದರೆ, ಈ ಕುರಿತು ಪೊಲೀಸ್ ಆಯುಕ್ತರು ಯಾವುದೇ ಮಾಹಿತಿ ನೀಡಿಲ್ಲ.
ಪೊಲೀಸರು ಶಾರೀಕ್ ಫೋಟೊಗಳನ್ನು ಪರಿಶೀಲಿಸಿದ್ದಾರೆ ಮತ್ತು ಶಾರೀಕ್ನ ಕುಟುಂಬವು ಆಸ್ಪತ್ರೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಹಮ್ಮದ್ ಶಾರೀಕ್ ಎಂದು ಫೋನ್ ಮೂಲಕ ಗುರುತಿಸಿದ್ದಾರೆ. ಆತನ ಕುಟುಂಬದವರು ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಾವರ್ಕರ್ ಫೋಟೊ ಹಾಕಿದ ವಿಷಯಕ್ಕೆ ಸಂಬಂಧಪಟ್ಟಂತೆ ಚೂರಿ ಇರಿತ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಜತೆ ನಂಟು ಹೊಂದಿರುವ ಶಂಕಿತ ಭಯೋತ್ಪಾದನಾ ಘಟಕದ ಕುರಿತು ಮಾಹಿತಿ ಕಲೆ ಹಾಕಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಮುನೀರ್ ಅಹಮ್ಮದ್ (22) ಮತ್ತು ಸೈಯದ್ ಯಾಸಿನ್ (21) ಎಂಬವರನ್ನು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಇವರಿಬ್ಬರಿಗೆ ಬಾಂಬ್ ತಯಾರಿಕೆ, ಉಗ್ರ ಚಟುವಟಿಕೆ ಇತ್ಯಾದಿಗಳ ಕುರಿತು ಶಾರೀಕ್ ತರಬೇತಿ ನೀಡಿದ್ದನು. ಪೊಲೀಸರು ಆತನ ನಿವಾಸಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಪರಾರಿಯಾಗಿದ್ದ.