ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಬಲ ತುಂಬಲು ಪ್ರಾಣಿಬಲಿ ಶಂಕೆ, ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿತ್ತು ಸಾಕ್ಷಿ; ಏನಿದು ಪ್ರಕರಣ?
ಮಸಾಜ್ ಪಾರ್ಲರ್ ಒಂದಕ್ಕೆ ದಾಳಿ ಮಾಡಿ ದಾಂಧಲೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ ಬಂಧನವಾಗಿತ್ತು. ಈ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಪ್ರಾಣಿ ಬಲಿಕೊಡುವ ದೃಶ್ಯ ಪತ್ತೆಯಾಗಿದೆ. ಬಳಿಕ ರಕ್ತವನ್ನು ಸ್ನೇಹಮಯಿ ಮತ್ತು ಗಂಗರಾಜು ಫೋಟೊಗೆ ಅರ್ಪಣೆ ಮಾಡುವ ದೃಶ್ಯವಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.

ಮಂಗಳೂರು: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ತುಂಬುವ ಉದ್ದೇಶದಿಂದ ವಾಮಾಚಾರ ಮಾಡಲಾಗಿದೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ವಾಮಾಚಾರಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಬಂಧನವಾಗಿರುವ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರನ ಮೊಬೈಲ್ನಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಸಾಜ್ ಪಾರ್ಲರ್ ಒಂದಕ್ಕೆ ದಾಳಿ ಮಾಡಿ ದಾಂಧಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನವಾಗಿತ್ತು. ಈ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದ್ದೇವೆ. ಆಗ ಮೊಬೈಲ್ನಲ್ಲಿ ದೇವಸ್ಥಾನವೊಂದರಲ್ಲಿ ಬಲಿಕೊಡುವ ದೃಶ್ಯವೊಂದರ ವಿಡಿಯೋ ಪತ್ತೆಯಾಗಿದೆ. ವಿಡಿಯೋದಲ್ಲಿ ಐದು ಕುರಿಗಳನ್ನು ಬಲಿ ಕೊಡಲಾಗಿತ್ತು. ಬಲಿಕೊಟ್ಟ ಬಳಿಕ ರಕ್ತವನ್ನು ಸ್ನೇಹಮಯಿ ಮತ್ತು ಗಂಗರಾಜು ಫೋಟೊಗೆ ಅರ್ಪಣೆ ಮಾಡುವ ದೃಶ್ಯವಿತ್ತು.
ಈ ಪ್ರಾಣಿಬಲಿ ಎಲ್ಲಿ ಆಗಿರುವುದು ಎಂಬ ಬಗ್ಗೆ ಸ್ಪಷ್ಟವಿಲ್ಲ. ವಾಟ್ಸ್ಆ್ಯಪ್ನಲ್ಲಿ ಪ್ರಾಣಿಬಲಿ ವಿಡಿಯೋವಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗಾಗಿ ಈ ಪ್ರಾಣಿಬಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನಿನ್ನೆ ರಾತ್ರಿ ಸುಮೋಟೊ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.
ಹಣ ವರ್ಗಾವಣೆ
ಅನಂತ್ ಭಟ್ ಎಂಬ ಅರ್ಚಕನಿಂದ ಈ ವಾಮಾಚಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಅನಂತ್ ಭಟ್ ಹಾಗೂ ಪ್ರಸಾದ್ ಅತ್ತಾವರ ನಡುವೆ ನಡೆದ ವಾಮಾಚಾರದ ಬಗ್ಗೆ ವಾಟ್ಸ್ಆ್ಯಪ್ ಸಂದೇಶ ಹಾಗೂ ಫೋಟೊಗಳು ಪತ್ತೆಯಾಗಿದೆ. ಪ್ರತಿಯಾಗಿ ಪ್ರಸಾದ್ ಅತ್ತಾವರ ಹಣ ವರ್ಗಾಯಿಸಿರುವುದು ಕಂಡು ಬಂದಿದೆ. ಅನಂತ್ ಭಟ್ಗಾಗಿ ಹುಡುಕಾಟ ನಡೆಯುತ್ತಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಸಾದ್ ಅತ್ತಾವರ ಹಾಗೂ ಅನಂತ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಅತ್ತ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ಹಾಗೂ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಪ್ರಕಟವಾಗಿದೆ. ಕುಮಾರ್ ಎನ್ನುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿಯನ್ನು ಜನವರಿ 30ರಂದು ವಿಚಾರಣೆ ನಡೆಸಿದ್ದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಕೃಷ್ಣಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವರದಿ: ಹರೀಶ ಮಾಂಬಾಡಿ, ಮಂಗಳೂರು
