Mangaluru News: ಅಯೋಧ್ಯೆ ಶ್ರೀ ರಾಮಲಲ್ಲಾ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯರ ಅಳಿಲು ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಅಯೋಧ್ಯೆ ಶ್ರೀ ರಾಮಲಲ್ಲಾ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯರ ಅಳಿಲು ಸೇವೆ

Mangaluru News: ಅಯೋಧ್ಯೆ ಶ್ರೀ ರಾಮಲಲ್ಲಾ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯರ ಅಳಿಲು ಸೇವೆ

Mangaluru News: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಕೆತ್ತನೆಯ ಶ್ರೀರಾಮಲಲ್ಲಾ ವಿಗ್ರಹ ರಾಮಮಂದಿರದ ಪ್ರಾಣಪ್ರತಿಷ್ಠೆಗೆ ಆಯ್ಕೆಯಾಗಿದೆ. ಈ ನಡುವೆ ವಿಟ್ಲ ಸಮೀಪದ ಮೂವಾಜೆಯ ಚಿದಾನಂದ ಆಚಾರ್ಯರು ಕೂಡಾ ರಾಮನ ವಿಗ್ರಹ ಕೆತ್ತನೆಗೆ ತಮ್ಮ ಅಳಿಲು ಸೇವೆಯನ್ನು ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ.

ಮೂವಾಜೆಯ ಚಿದಾನಂದ ಆಚಾರ್ಯ
ಮೂವಾಜೆಯ ಚಿದಾನಂದ ಆಚಾರ್ಯ

ಮಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಈ ಸಮಯದಲ್ಲಿ ಶ್ರೀ ರಾಮಲಲ್ಲಾನ ವಿಗ್ರಹ ಭಾರೀ ಚರ್ಚೆಯಲ್ಲಿದೆ. ಒಂದೆಡೆ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಶ್ರೀರಾಮಲಲ್ಲಾನ ವಿಗ್ರಹ ರಾಮಮಂದಿರದ ಪ್ರಾಣಪ್ರತಿಷ್ಠೆಗೆ ಆಯ್ಕೆಯಾದರೆ, ಮತ್ತೊಂದೆಡೆ ಆ ತಂಡದಲ್ಲಿದ್ದ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೂವಾಜೆ ಚಿದಾನಂದ ಆಚಾರ್ಯ ಅವರಿಗೆ ತಾನೂ ಆ ತಂಡದಲ್ಲಿದ್ದ ಖುಷಿ.

ಕೆತ್ತನೆಯ ಕಾರ್ಯದಲ್ಲಿ ನನಗೂ ಅಳಿಲ ಸೇವೆಯಂತೆ ಕಾರ್ಯ ನಿರ್ವಹಿಸಲು ಅವಕಾಶ ದೊರಕಿರುವುದು ನನ್ನ ಪುಣ್ಯ. ಹೀಗೆಂದು ತಮ್ಮ ಸಂಭ್ರಮ ಹಂಚಿಕೊಂಡವರು ವಿಟ್ಲ ಸಮೀಪದ ಮೂವಾಜೆಯ ಚಿದಾನಂದ ಆಚಾರ್ಯರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭಗೊಂಡಿದ್ದರೆ, ಇತ್ತ ಆ ವಿಗ್ರಹದ ಕೆತ್ರನೆಯಲ್ಲಿ ತೊಡಗಿಸಿಕೊಂಡ ಶಿಲ್ಪಿಗಳು ಪುಣ್ಯ ಕಾರ್ಯದಲ್ಲಿ ನೇರ ಪಾಲ್ಗೊಂಡ ಸಂತೃಪ್ತಿಯಲ್ಲಿದ್ದಾರೆ. ಈ ಪೈಕಿ‌ ವಿಟ್ಲ ಉಕ್ಕುಡ ಸಮೀಪದ ಕಲ್ಲುರ್ಟಿಯಡ್ಕ‌ ನಿವಾಸಿ ಚಿದಾನಂದ‌ ಆಚಾರ್ಯರೂ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ಸಹಾಯಕನಾಗಿ ತೊಡಗಿಸಿಕೊಂಡಿದ್ದರು.

ಶಿಲ್ಪಕಲೆ ಅಭ್ಯಾಸಿ, ಸಾಂಪ್ರದಾಯಿಕತೆ ನಿಪುಣ

ಚಿದಾನಂದ ಆಚಾರ್ಯ, ವಿಟ್ಲದ ಅಳಿಕೆಯ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಅಳಿಕೆ‌ ಸತ್ಯಸಾಯಿ‌ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ವಿದ್ಯಾರ್ಜನೆ ಮಾಡಿದ ಇವರು, ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ.ಕಾಮತ್ ಇನಿಸ್ಟ್ಯೂಟ್‌ನಲ್ಲಿ‌ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಾಸ ಮಾಡಿದ್ದಾರೆ. ಇವರು,‌‌ ಚಿಕ್ಕಬಳ್ಳಾಪುರದ ಡಾ.ಜಿ.ಜ್ಞಾನಾನಂದರವರ ಬ್ರಹ್ಮ ಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10ವರ್ಷಗಳ ಕಾಲ ಇನ್ನೂ ಹೆಚ್ಚಿನ ಶಿಲ್ಪಕಲಾ ಅಧ್ಯಯನ ನಡೆಸಿದರು.‌ ಬಳಿಕ ಬೆಂಗಳೂರಿನ ಸಾಂಪ್ರದಾಯಿಕ ಶಿಲ್ಪಗುರುಕುಲದಲ್ಲಿ 3 ವರ್ಷ ಪ್ರತಿಮಾ ಶಿಲ್ಪ ಹಾಗೂ 4 ವರ್ಷ ದೇವಾಲಯ ಶಿಲ್ಪವನ್ನು ಕಲಿತು, ಕಳೆದ 8 ವರ್ಷದಿಂದ ಅದೇ ಗುರುಕುಲದಲ್ಲಿ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಯೋಧ್ಯೆ ಕೆಲಸಕ್ಕೆ ಬುಲಾವ್

ಕಳೆದ 4 ತಿಂಗಳ ಹಿಂದೆ ಮೈಸೂರಿನ ಅರುಣ್ ಯೋಗಿರಾಜ್ ಅವರು, ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳು ಬೇಕು ಎಂದು ಸಂದೇಶ ಕಳುಹಿಸಿದ್ದರು.‌ ಅದರಂತೆ ಚಿದಾನಂದ‌ ಆಚಾರ್ಯ, ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯರವರು ಅಯೋಧ್ಯೆಗೆ ತೆರಳಿದ್ದರು.

70 ದಿನಗಳ ಕೆಲಸ

ಅಯೋಧ್ಯೆಯಲ್ಲಿ ಕಟ್ಟುನಿಟ್ಟಿನ ನಿಯಮಗಳ ಮೂಲಕ ರಾಮಲಲ್ಲಾ ವಿಗ್ರಹ ಕೆತ್ತನೆ ಕಾರ್ಯ ನಡೆದಿದೆ. 3 ತಂಡಗಳು ಈ ವಿಗ್ರಹ ಕಾರ್ಯದಲ್ಲಿ ಅತೀವ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಿದ್ದು, ನಮಗೂ ಇದು ವಿಶೇಷ ಅನುಭವ ತಂದುಕೊಟ್ಟಿದೆ ಎನ್ನುತ್ತಾರೆ ಚಿದಾನಂದ ಆಚಾರ್ಯ. ಚಿದಾನಂದ‌ ಆಚಾರ್ಯರ ತಂದೆ ದಿ.ಗೋಪಾಲ ಆಚಾರ್ಯರು ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ದೊಡ್ಡಪ್ಪನವರು ಮರದ ಕೆಲಸ ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕಲ್ಲಿನ ಕೆತ್ತನೆ ಕಾರ್ಯದಲ್ಲಿ ಇವರ ಕುಟುಂಬದಲ್ಲಿ ಇವರೇ ಮೊದಲಿಗರು. ಹೀಗಿದ್ದರೂ ಅಯೋಧ್ಯೆಯ ಪುಣ್ಯದ ಕಾರ್ಯದಲ್ಲಿ ಇವರ ಕಲಾ ಚತುರತೆಗೆ ಅವಕಾಶ ದೊರೆತಿರುವುದು ಇವರ ಕುಟುಂಬಕ್ಕೆ ಸಂತಸ ತಂದುಕೊಟ್ಟಿದೆ.

Whats_app_banner