Mangaluru: 3 ಪ್ರಶ್ನೆಗೆ ಉತ್ತರ ಹೇಳಿದ್ರೆ ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿಗೆ 10 ಲಕ್ಷ ಕೊಡ್ತಾರಂತೆ ಮಂಗಳೂರಿನ ವಿಚಾರವಾದಿ
Self proclaimed godman Dhirendra Shastri: ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್ ಅವರು ದೇವಮಾನವ ಎಂದು ಹೇಳಿಕೊಂಡಿರುವ ಧೀರೇಂದ್ರ ಶಾಸ್ತ್ರಿ ಅವರಿಗೆ ಸವಾಲೆಸೆದಿದ್ದಾರೆ.
ಮಂಗಳೂರು: ತಾನು ಕೇಳುವ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಿದರೆ ಸ್ವಯಂ ಘೋಷಿತ ದೇವಮಾನವ ದೇವಮಾನವ ಧೀರೇಂದ್ರ ಶಾಸ್ತ್ರಿ (Self proclaimed godman Dhirendra Shastri) ಅಲಿಯಾಸ್ ಭಾಗೇಶ್ವರ ಧಾಮ್ ಬಾಬಾಗೆ (Bageshwar Dham Baba) 10 ಲಕ್ಷ ರೂ. ಬಹುಮಾನ ನೀಡುವೆ ಎಂದು ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್ ಸವಾಲೆಸೆದಿದ್ದಾರೆ.
ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಬಾಬಾ ಜೂನ್ 11 - 15 ರವರೆಗೆ ಬೆಂಗಳೂರಿಗೆ ಬರಲಿದ್ದು, 'ಹನುಮಾನ್ ಕಥಾ' ಕಾರ್ಯಕ್ರಮ ನಡೆಸಲಿದ್ದಾರೆ. ಈ ವೇಳೆ ಅವರು ಪವಾಡಗಳನ್ನು ಮಾಡಲಿದ್ದು, ಇದನ್ನು ತಾವು ಪರೀಕ್ಷಿಸುವುದಾಗಿ ನರೇಂದ್ರ ನಾಯಕ್ ಹೇಳಿದ್ದಾರೆ.
ಆದರೆ ಈ ಪರೀಕ್ಷೆಯನ್ನು ಅವರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಡದೆ ಪ್ರತ್ಯೇಕ ಸ್ಥಳದಲ್ಲಿ ಮಾಡಲು ನರೇಂದ್ರ ನಾಯಕ್ ಬಯಸಿದ್ದಾರೆ. ಈ ಸಂದರ್ಭ ಬಾಬಾರವರ ಜನರ ಪೂರ್ವಾಪರಗಳನ್ನು ತಿಳಿಸುವ, ರೋಗಗಳನ್ನು ಗುಣಪಡಿಸುವ ಶಕ್ತಿ ಮತ್ತು ಸರ್ವಜ್ಞತೆಯ ಸಾಮರ್ಥ್ಯವನ್ನು ನರೇಂದ್ರ ನಾಯಕ್ ಪರೀಕ್ಷಿಸಲು ಬಯಸಿದ್ದಾರೆ.
ಪರೀಕ್ಷೆಯ ಸಂದರ್ಭ ಧೀರೇಂದ್ರ ಶಾಸ್ತ್ರಿ ಬಾಬಾ ನಾವು ಕರೆತರುವ ಐವರ ಬಗ್ಗೆ ಸರಿಯಾದ ವಿವರ ನೀಡಬೇಕು. ಈ ವಿವರಗಳು ಪ್ರಶ್ನೆಗಳ ರೂಪದಲ್ಲಿರುತ್ತವೆ. ಅದೇ ರೀತಿ ನಾವು ಆಯ್ಕೆಮಾಡಿರುವ ಓರ್ವ ವ್ಯಕ್ತಿಯ ನಿರ್ದಿಷ್ಟ ರೋಗ ಹಾಗೂ ವಿರೂಪತೆಯನ್ನು ಗುಣಪಡಿಸಬೇಕು. ಮೂರನೆಯದಾಗಿ ಸೀಲ್ಡ್ ಕವರ್ ನಲ್ಲಿದ್ದ ಕರೆನ್ಸಿ ನೋಟಿನ ಸಂಖ್ಯೆಯನ್ನು ಅವರ ತ್ರಿಕಾಲ ಜ್ಞಾನದ ಶಕ್ತಿಯಿಂದ ತಿಳಿಸಬೇಕು. ಅವರು ಸಂಖ್ಯೆಯನ್ನು ತಿಳಿಸಿದ ಬಳಿಕ ಪರಿಶೀಲಿಸಲು ಲಕೋಟೆಯನ್ನು ತೆರೆಯಲಾಗುತ್ತದೆ. ಈ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಲ್ಲಿ 10 ಲಕ್ಷ ರೂ. ಗಳನ್ನು ನೀಡಲಾಗುತ್ತದೆ ಎಂದು ಸವಾಲು ಹಾಕಲಾಗಿದೆ.
ನರೇಂದ್ರ ನಾಯಕ್ ಅವರು ಈವರೆಗೆ ಹಲವಾರು ಸವಾಲುಗಳನ್ನು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಸೇರಿದಂತೆ ಸಂದರ್ಭಕ್ಕನುಗುಣವಾಗಿ ಹಲವು ಸವಾಲುಗಳನ್ನು ಹಾಕಿದ್ದಾರೆ. ಆದರೆ ಈವರೆಗೆ ಯಾವ ಪವಾಡಪುರುಷರೂ, ದೇವಮಾನವರೂ, ಜ್ಯೋತಿಷಿಗಳು ಅವರ ಸವಾಲನ್ನು ಸ್ವೀಕರಿಸಿ ಗೆಲುವು ಸಾಧಿಸಿಲ್ಲ.
ಈ ಬಗ್ಗೆ ಮಾತನಾಡಿದ ನರೇಂದ್ರ ನಾಯಕ್ ದೇವಮಾನವ ಧೀರೇಂದ್ರ ಶಾಸ್ತ್ರಿ ಅಕಾ ಭಾಗೇಶ್ವರ ಧಾಮ್ ಬಾಬಾ ಸಣ್ಣ ಪ್ರಾಯದವನಾಗಿದ್ದಾನೆ. ಆತ ತನ್ನ ಪವಾಡಗಳಿಂದ ಉತ್ತರ ಪ್ರದೇಶದಲ್ಲಿ ಖ್ಯಾತನಾಗಿದ್ದಾನೆ. ಆದರೆ ಆತನ ಪವಾಡವನ್ನು ನಾನು ವೈಜ್ಞಾನಿಕವಾಗಿ ಪರೀಕ್ಷಿಸಬೇಕಾಗಿದೆ. ಈ ಕಾರಣದಿಂದ ಆತ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಆತನ ಪರೀಕ್ಷೆ ನಡೆಸಲು ತಯಾರಿದ್ದೇನೆ. ಆದರೆ ಆತ ಬೆಂಗಳೂರಿನಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಈ ಪರೀಕ್ಷೆ ನಡೆಸುವುದಿಲ್ಲ. ಆತನ ಅಂಧ ಭಕ್ತರಿಂದ ಗಲಾಟೆಗಳಾಗಬಹುದು. ಬೆಂಗಳೂರಿನ ಬೇರೆ ಯಾವುದಾದರೂ ಸಭಾಂಗಣದಲ್ಲಿ ಅಥವಾ ಟಿ ವಿ ಸ್ಟುಡಿಯೋ ದಲ್ಲಿ ಈ ಪರೀಕ್ಷೆ ನಡೆಸಲು ಸಿದ್ದನಿದ್ದೇನೆ. ಈತ ನನ್ನ ಮೂರು ಸವಾಲುಗಳಿಗೆ ಉತ್ತರಿಸಿದರೆ 10 ಲಕ್ಷ ರೂ ಬಹುಮಾನವನ್ನು ಕೊಡುತ್ತೇನೆ. ಆತ ಇದರ ಜೊತೆಗೆ ಕೋಮುವಾದಿಯಾಗಿ ತನ್ನ ನಿಲುವನ್ನು ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಸರಕಾರಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು