ಕನ್ನಡ ಸುದ್ದಿ  /  Karnataka  /  Mangaluru News Siddaramaiah Politics Will End If Rss Bajrang Dal Are Banned Nalin Kumar Kateel Priyank Kharge Mgb

RSS-Bajrang Dal: ಆರೆಸ್ಸೆಸ್, ಬಜರಂಗದಳ ನಿಷೇಧಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ರಾಜಕೀಯ ಮುಗಿಯತ್ತೆ; ನಳಿನ್ ಕುಮಾರ್ ಕಟೀಲ್

RSS-Bajrang Dal: ಆರೆಸ್ಸೆಸ್, ಬಜರಂಗದಳದ ನಿಷೇಧಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ರಾಜಕೀಯ ಮುಗಿಯತ್ತೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಲಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ .

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ (ಸಂಗ್ರಹ ಚಿತ್ರ)
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ (ಸಂಗ್ರಹ ಚಿತ್ರ)

ಮಂಗಳೂರು: ಬಜರಂಗದಳ, ಆರೆಸ್ಸೆಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಲಿ ಎಂದು ಸವಾಲೆಸೆದರು.

ಆರೆಸ್ಸೆಸ್ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಕುರಿತು ಮಂಗಳೂರಿನಲ್ಲಿಂದು ( ಮೇ 26, ಶುಕ್ರವಾರ) ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಕಟೀಲ್​, ಆರೆಸ್ಸೆಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ, ಈ ದೇಶ ನಡೆಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್​ಎಸ್​ಎಸ್​ ಸ್ವಯಂ ಸೇವಕ. ಕೇಂದ್ರದ ಸಚಿವರು, ನಾವೆಲ್ಲರೂ ಆರೆಸ್ಸೆಸ್ ಸ್ವಯಂಸೇವಕರು. ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ, ಅಲ್ಲದೆ, ಆರೆಸ್ಸೆಸ್ ರಾಷ್ಟ್ರಭಕ್ತಿ ಸಂಕೇತ ಅಂತ ಕಾಂಗ್ರೆಸ್ ನಲ್ಲೇ ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ ರಾಜಕೀಯ ಮುಗೀತದೆ:

ಬಜರಂಗದಳ, ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ ಎಂದು ಹೇಳಿದ ನಳಿನ್, ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಿ. ನಿಮ್ಮ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅದು ಬಿಟ್ಟು ರಾಜ್ಯವನ್ನ ವಿಭಜನಾವಾದದ ಮೂಲಕ ಕಟ್ಟೋದು ಬೇಡ ಎಂದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದ ನಳಿನ್, ಪ್ರಿಯಾಂಕ್ ಖರ್ಗೆ ಬಾಯಿಗೆ ಹಿಡಿತ ಇಟ್ಟುಕೊಂಡು, ನಾಲಿಗೆ ಹಿಡಿತದಲ್ಲಿ ಮಾತನಾಡಲಿ. ಬಜರಂಗದಳ, ಆರ್.ಎಸ್.ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ ಎಂದರು. ಇನ್ನು ಪಿಎಫ್ಐ ನಿಷೇಧ ಕುರಿತು ಕಾಂಗ್ರೆಸ್ ಹೇಳಿಕೆ ಬಗ್ಗೆ ಮಾತನಾಡಿದ ನಳಿನ್, ಪಿಎಪ್ ಐಯನ್ನು ನಾವು ನಿಷೇಧ ಮಾಡಿದ್ದೇವೆ, ಇವರೇನು ನಿಷೇಧ ಮಾಡೋದು? ಎಂದರು.

ಡಿಕೆಶಿ ಪ್ರಾರ್ಥನೆಯಲ್ಲಿ ಏನಿದೆ:

ವಿಧಾನಸೌಧದಲ್ಲಿ ಡಿಕೆಶಿಯವರೇ ಪ್ರಾರ್ಥನೆ ಹೇಳಿದ್ದಾರೆ, ಅದರಲ್ಲೇ ಇದೆ ಆ ಪ್ರಾರ್ಥನೆಯಲ್ಲಿ ಏನಿದೆ ಅಂತ ಖರ್ಗೆಯವರು ಡಿಕೆಶಿ ಬಳಿ ಕೇಳಲಿ ರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಕಾಂಗ್ರೆಸ್ ಆಡಳಿತ ಮಾಡ್ತಿದೆ. ಇವರ ಮಂತ್ರಿಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತೆ. ಇದರ ಭಯದಲ್ಲಿ ಆರ್.ಎಸ್‌ಎಸ್ ಹೆಸರಲ್ಲಿ ಕಾಂಗ್ರೆಸ್ ಗಟ್ಟಿ ಮಾಡ್ತಾ ಇದಾರೆ. ಇವರ ಜಗಳ ಹೊರ ಬಾರದಂತೆ ಮಾಡಲು ಇದು ಷಡ್ಯಂತ್ರ ಎಂದರು.

24 ಗಂಟೆಯಲ್ಲಿ ಗ್ಯಾರಂಟಿ ಕೊಡ್ತೀವಿ ಅಂದಿದ್ರು:

ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ಸರ್ಕಾರ ಬಂದಿದೆ. ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ಮೂಲಕ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಸರ್ಕಾರ ಬಂದು 24 ಗಂಟೆಯಲ್ಲಿ ಗ್ಯಾರಂಟಿ ಕೊಡ್ತೀವಿ ಅಂದಿದ್ರು. ಇವತ್ತು 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತುಗಳಿಲ್ಲ ಎಂದು ಲೇವಡಿ ಮಾಡಿದ ನಳಿನ್, ಆದೇಶ ಮಾಡಿದ್ರೂ ಈವರೆಗೆ ಯಾವಾಗಿಂದ ಬರ್ತದೆ ಅಂತ ಉಲ್ಲೇಖ ಇಲ್ಲ. ಸುಳ್ಳು ಆಶ್ವಾಸನೆ ಕೊಟ್ಟು ಸಿದ್ದರಾಮಯ್ಯ ಸರ್ಕಾರ ಬಂದಿದೆ. ಸಿದ್ದರಾಮಯ್ಯ ತನ್ನನ್ನೂ ಸೇರಿಸಿ ಉಚಿತ ಕರೆಂಟ್ ಅಂತ ಹೇಳಿದ್ರು, ಮಹಿಳೆಯರಿಗೂ ಎಲ್ಲರಿಗೂ ಹಣ ಬರುತ್ತೆ ಅಂತ ಹೇಳಿದ್ರು, ಯಾವುದೇ ಮಾನದಂಡ ಇಲ್ಲದೇ ಭಾಗ್ಯಗಳು ಸಿಗುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದರು.ಬಸ್ ನಲ್ಲೂ ಎಲ್ಲಿಗೆ ಬೇಕಾದರೂ ಉಚಿತವಾಗಿ ಮಹಿಳೆಯರು ಹೋಗಬಹುದು ಅಂದಿದ್ದರು. ಆದರೆ ಇದೀಗ ಇವುಗಳನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಬಿಲ್ ಕಟ್ಟಬಾರದು ಎಂದು ನಾನೇ ಕರೆ ಕೊಡ್ತೀನಿ

ಜನ ಆಶ್ವಾಸನೆ ನಂಬಿ ಮತ ಹಾಕಿದ್ದಾರೆ, ಮತದಾರ ಆಕ್ರೋಶದಲ್ಲಿ ಇದ್ದಾನೆ. ಕರೆಂಟ್ ಬಿಲ್ ಕಲೆಕ್ಷನ್ ಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆಗಳಾಗ್ತಿವೆ. ಜನ ಸರಿ ಇದ್ದಾರೆ, ಹಾಗಾಗಿ ಬಿಲ್ ಕಟ್ಟಬಾರದು ಅಂತಾನೇ ನಾನು ಕರೆ ಕೊಡ್ತೀನಿ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್, ಜನ ಆಕ್ರೋಶ ಸಹಜ, ಯಾರೂ ಬಿಲ್ ಕಟ್ಟಲೇ ಬಾರದು ಈ ವೇಳೆ ಜನರಿಗೆ ತೊಂದರೆಯಾದ್ರೆ ನಾವು ಜನರ ಪರವಾಗಿ ನಿಲ್ತೇವೆ ಎಂದರು.

ರಾಜ್ಯದಲ್ಲಿ ಅರಾಜಕತೆ:

ನೌಕರರಿಗೆ ಹಲ್ಲೆಯಾದ್ರೆ ಸರ್ಕಾರವೇ ಹೊಣೆಯಾಗುತ್ತೆ. ಇವತ್ತು‌ ಕಾಂಗ್ರೆಸ್ ನ ರಾಜನೀತಿಯಿಂದ ರಾಜ್ಯದಲ್ಲಿ ಅರಾಜಕತೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಪ್ರಾರಂಭ ಮಾಡಿದೆ. ಅಶ್ವಥ್ ನಾರಾಯಣ್ ಯಾವುದೋ ಸಂಧರ್ಭದಲ್ಲಿ ಹೇಳಿದ್ದರು, ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ. ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೆ ಒಳಗಾದವರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿರೋಧ ಪಕ್ಷವನ್ನ ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಸಿದ್ದರಾಮಯ್ಯರ ತಾತಾ ಮುತ್ತಾತನೂ ಈ ಕೆಲಸ ಮಾಡಿ ಯಶಸ್ವಿಯಾಗಿಲ್ಲ. ಸಂವಿಧಾನಿಕ ಸರ್ಕಾರ ಕೆಲಸ ಮಾಡಬೇಕು, ಅದು ಬಿಟ್ಟು ದ್ವೇಷ ರಾಜಕಾರಣ ಬೇಡ. ಈ ಸರ್ಕಾರ ಹೆಚ್ಚು ದಿನ ಬಾಳಲ್ಲ, ಉಳಿಯೋದಿಲ್ಲ. ಅಧಿಕಾರಿಗಳಿಗೆ ಒತ್ತಡ ಮತ್ತು ಭಯದ ವಾತಾವರಣದ ಮೂಲಕ ನಿಯಂತ್ರಣ ಹೇರುತ್ತಿದೆ ಎಂದರು.

80 ಪರ್ಸೆಂಟ್ ಡಿಮ್ಯಾಂಡ್

ಸಿದ್ದರಾಮಯ್ಯ ಸರ್ಕಾರ 20 ಸಾವಿರ ಕೋಟಿ ಟೆಂಡರ್ ವಾಪಾಸ್ ಪಡೆದಿದೆ. 80 ಪರ್ಸೆಂಟ್ ಕಮಿಷನ್ ಗೆ ಡಿಮ್ಯಾಂಡ್ ಇಡಲು ಈ ರೀತಿ ಮಾಡಿದ್ದಾರೆ. ಕಾಮಗಾರಿ ಪ್ರಾರಂಭವಾದ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಪರ್ಸೆಂಟೇಜ್ ಗಾಗಿ ಕಾಮಗಾರಿ ನಿಲ್ಲಿಸಿದ್ದಾರೆ, ಇದು 80 ಶೇಕಡಾ ಕಮಿಷನ್ ಸರ್ಕಾರ ಎಂದ ನಳಿನ್, ನಮ್ಮ ಸರ್ಕಾರದ ಯಾವುದೇ ವಿಚಾರ ತನಿಖೆ ಮಾಡಿ , ಅದರ ಜೊತೆಗೆ ಲೋಕಾಯುಕ್ತದ ಸಿದ್ದರಾಮಯ್ಯ ಕೇಸ್ ಕೂಡ ತನಿಖೆ ಆಗಲಿ, ನಮ್ಮ‌ ಕಾಲಘಟ್ಟದ ಯಾವುದು ಬೇಕಾದ್ರೂ ತನಿಖೆ‌ ಅಗಲಿ ಆದರೆ 20 ಸಾವಿರ ಕೋಟಿ ಬಗ್ಗೆ ಬಹಿರಂಗ ಪಡಿಸಿ ಎಂದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point