ಮಂಗಳೂರು ಹೊರವಲಯದಲ್ಲಿ ಬೈಕ್ ಅಪಘಾತ: 22 ವರ್ಷದ ವಿದ್ಯಾರ್ಥಿ ಕಲಾವಿದ ಪ್ರವಿತ್ ಆಚಾರ್ಯ ದುರ್ಮರಣ
Mangaluru Road Accident: ಮಂಗಳೂರು ಹೊರವಲಯದಲ್ಲಿ ನಿನ್ನೆ (ಡಿಸೆಂಬರ್ 31) ಬೈಕ್ ಅಪಘಾತ ಸಂಭವಿಸಿದ್ದು, 22 ವರ್ಷದ ವಿದ್ಯಾರ್ಥಿ ಕಲಾವಿದ ಪ್ರವಿತ್ ಆಚಾರ್ಯ ದುರ್ಮರಣಕ್ಕೀಡಾದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mangaluru Road Accident: ಮಂಗಳೂರು ಹೊರವಲಯದ ಅರ್ಕುಳ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಹಾಗೂ ಎಂ.ಎಸ್.ಡಬ್ಲು ವಿದ್ಯಾರ್ಥಿ ಪ್ರವಿತ್ ಆಚಾರ್ಯ ಮೃತಪಟ್ಟ ಘಟನೆ ಮಂಗಳವಾರ (ಡಿಸೆಂಬರ್ 31) ಸಂಜೆ ನಡೆದಿದೆ. 22 ವರ್ಷದ ಯುವಕ ಸಸಿಹಿತ್ಲು ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿದ್ದ.
ರಸ್ತೆ ಅಪಘಾತ ಸಂಭವಿಸಿದ್ದು ಹೇಗೆ
ವಾಡಿಕೆಯಂತೆ ಮಂಗಳವಾರವೂ ಬಿ.ಸಿ.ರೋಡಿನಲ್ಲಿ ಬೈಕ್ ನಿಲ್ಲಿಸಿ, ವಿಟ್ಲಕ್ಕೆ ಕಾಲೇಜಿಗೆ ಪವಿತ್ ಬಂದಿದ್ದ. ಕಾಲೇಜು ತರಗತಿಗಳು ಮುಗಿದ ಬಳಿಕ ವಿಟ್ಲದ ಕಾಲೇಜಿನಿಂದ ಸ್ನೇಹಿತನೊಂದಿಗೆ ಬಿ.ಸಿ.ರೋಡಿಗೆ ಬಸ್ನಲ್ಲಿ ಬಂದು ಅಲ್ಲಿ ಇಳಿದು, ಬೈಕ್ ಹತ್ತಿ ಮಂಗಳೂರು ಕಡೆ ಸಾಗಿದ್ದಾನೆ. ಈ ಸಂದರ್ಭ ಬೈಕ್ ಡಿವೈಡರ್ಗೆ ಡಿಕ್ಕಿಯಾಗಿ ಬೈಕ್ ಸಮೇತ ಬಿದ್ದ ವೇಳೆ ವಾಹನವೊಂದು ಅವರ ಮೇಲೆ ಹರಿದುಹೋಗಿದೆ. ಸ್ಥಳದಲ್ಲೇ ಪ್ರವಿತ್ ಸಾವನ್ನಪ್ಪಿದ್ದಾನೆ.
ಪ್ರವಿತ್ ಆಚಾರ್ಯ ಯಾರು
ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯ ಭಾರತಿ ಆಚಾರ್ಯ ಅವರ ಪುತ್ರರಾಗಿರುವ ಪ್ರವಿತ್, ಬಂಟ್ವಾಳ ತಾಲೂಕಿನ ವಿಟ್ಲಕ್ಕೆ ಎಂ.ಎಸ್.ಡಬ್ಲ್ಯು ಕಲಿಯಲು ಬರುತ್ತಿದ್ದ. ಮಂಗಳೂರು ಸಮೀಪ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಈತ ಪಡೀಲ್ ಅಥವಾ ಬಿ.ಸಿ.ರೋಡ್ ನಲ್ಲಿ ವಾಹನ ನಿಲ್ಲಿಸಿ ವಿಟ್ಲಕ್ಕೆ ಕಾಲೇಜಿಗೆ ಹೋಗುತ್ತಿದ್ದ. ಕಾಲೇಜಿನಲ್ಲಿ ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈತ, ಯಕ್ಷಗಾನ ಕಲಾವಿದ. ಸಸಿಹಿತ್ಲು ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಗಮನ ಸೆಳೆದಿದ್ದ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)