ಮಂಗಳೂರು: ಹೃದಯಾಘಾತದಿಂದ ಸಾವನ್ನಪ್ಪಿದ ಗೋಳಿತೊಟ್ಟು ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ
Mangaluru: ದೂರವಾಣಿಯಲ್ಲಿ ಮಾತನಾಡುವಾಗಲೇ ಮುಖ್ಯ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಗ್ರಾಮದ ಬಾಕಿಲ ನಿವಾಸಿ 42 ವರ್ಷ ವಯಸ್ಸಿನ ಪ್ರದೀಪ್ ಬಾಕಿಲ ಎಂಬುವರೇ ಹೃದಯಾಘಾತದಿಂದ ನಿಧನರಾದವರು.
ಮಂಗಳೂರು: ಶಾಲಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮನೆ ಅಂಗಳದಲ್ಲಿ ಫೋನ್ನಲ್ಲಿ ಮಾತನಾಡುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಗ್ರಾಮದ ಬಾಕಿಲ ಎಂಬಲ್ಲಿ ನಡೆದಿದೆ. ಪ್ರದೀಪ್ ಬಾಕಿಲ ಎಂಬುವವರೇ ಹೃದಯಾಘಾತದಿಂದ ನಿಧನರಾದ ಶಿಕ್ಷಕ.
ದೂರವಾಣಿಯಲ್ಲಿ ಮಾತನಾಡುವಾಗಲೇ ಸಾವನ್ನಪ್ಪಿರುವ ಶಿಕ್ಷಕ
ಗೋಳಿತೊಟ್ಟು ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಅವರಿಗೆ 42 ವರ್ಷ ವಯಸ್ಸಾಗಿತ್ತು. ಡಿಸೆಂಬರ್ 4ರಂದು ಶಾಂತಿನಗರ ಎಂಬಲ್ಲಿ ಶಾಲೆಯ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ ಬಂದು ಅಂಗಳದಲ್ಲಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಪೋನಿನಲ್ಲಿ ಮಾತನಾಡುವಾಗ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಇಂದು ಬೆಳಗ್ಗೆ ಮನೆ ಮುಂದೆ ಅವರ ಮೃತದೇಹ ಪತ್ತೆಯಾಗಿದೆ. ಜೆಸಿಐನ ಪೂರ್ವ ಉಪಾಧ್ಯಕ್ಷರಾಗಿ, ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದ ಪ್ರದೀಪ್ ಬಾಕಿಲ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸತತ 25 ಗಂಟೆಗಳ ತರಬೇತಿ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರದೀಪ್ ಅವರ ನಿಧನಕ್ಕೆ ಗ್ರಾಮಸ್ಥರು, ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಚಳಿಗಾಲದಲ್ಲಿ ಇಂತಹ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ 4 ಪ್ರಕರಣಗಳು ವರದಿಯಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಮಹಿಳೆಯೊಬ್ಬರು ಹಠಾತ್ ಕುಸಿದು ಹೃದಯಾಘಾತದಿಂದ ಮೃತಪಟ್ಟ ಘಟನೆ ಅರ್ಕುಳ ಎಂಬಲ್ಲಿ ನಡೆದಿತ್ತು. ಪುತ್ತೂರು ಸಮೀಪ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎಂಬಲ್ಲಿ ಅಕ್ಟೋಬರ್ 10 ರಂದು ಒಂದೇ ದಿನ ನೆರೆಹೊರೆಯ ಇಬ್ಬರು ನಿಧನರಾಗಿದ್ದರು. ಅಬ್ದುಲ್ ರೆಹ್ಮಾನ್ ಮೇಸ್ತ್ರಿ (54) ಅನಾರೋಗ್ಯದಿಂದ ನಿಧನರಾಗಿದ್ದು. ಅಬ್ಬುಲ್ ಮೃತದೇಹವನ್ನು ನೋಡಿ ಮನೆಗೆ ವಾಪಸ್ ಆಗಿದ್ದ ಹನೀಫ್ ಸಾಹೇಬ್ (65) ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು.
ದಕ್ಷಿಣ ಕನ್ನಡದಲ್ಲಿ ಅಕ್ಟೋಬರ್ನಲ್ಲಿ 4 ಹೃದಯಾಘಾತ ಪ್ರಕರಣಗಳು ವರದಿಯಾಗಿತ್ತು
ಉಜಿರೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದಿತ್ಯ ಎಂಬುವರು ಅಕ್ಟೋಬರ್ 11 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಹಾಗೂ ಉದ್ಯಮಿ, ಕೃಷಿಕ ರಮೇಶ್ ಭಟ್ ಅವರ ಪುತ್ರ 30 ವರ್ಷದ ಆದಿತ್ಯ ಭಟ್ ಆಯುಧ ಪೂಜೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಅದೇ ದಿನ (ಅಕ್ಟೋಬರ್ 11) ಬಿಸಿ ರೋಡ್ನಲ್ಲಿ ಹಾಲು, ಪೇಪರ್ ಅಂಗಡಿ ನಡೆಸುತ್ತಿದ್ದ ವಸಂತ್ ಆಚಾರ್ಯ (56) ಎಂಬುವರು ಹೃದಯಾಘಾತದಿಂದ ಮೃತಟ್ಟಿದ್ದರು. ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ಬರುವ ವೇಳೆ ಹಠಾತ್ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ವರದಿ: ಹರೀಶ್ ಮಾಂಬಾಡಿ, ಮಂಗಳೂರು