ಅಣಕು ಯುದ್ಧ ತಾಲೀಮು: 1971ರ ಆ ಬ್ಲಾಕ್‌ಔಟ್ ದಿನಗಳ ನೆನಪು; ಮಂಜುನಾಥ ಅಡಿಗ ಜಿ ಎಸ್ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಅಣಕು ಯುದ್ಧ ತಾಲೀಮು: 1971ರ ಆ ಬ್ಲಾಕ್‌ಔಟ್ ದಿನಗಳ ನೆನಪು; ಮಂಜುನಾಥ ಅಡಿಗ ಜಿ ಎಸ್ ಬರಹ

ಅಣಕು ಯುದ್ಧ ತಾಲೀಮು: 1971ರ ಆ ಬ್ಲಾಕ್‌ಔಟ್ ದಿನಗಳ ನೆನಪು; ಮಂಜುನಾಥ ಅಡಿಗ ಜಿ ಎಸ್ ಬರಹ

ದೇಶದಲ್ಲಿ ಯುದ್ಧ ಸಂದರ್ಭದಲ್ಲಿ ಸನ್ನದ್ಧತೆ ಮತ್ತು ಕ್ಷಿಪ್ರ ಪ್ರತಿಕ್ರಿಯೆ ನೀಡುವ ಕ್ರಮಗಳನ್ನು ಜನರಿಗೆ ಪರಿಚಯಿಸಲು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮೇ 7 ಬುಧವಾರ ಮಾಕ್ ಡ್ರಿಲ್ ನಡೆಸುವಂತೆ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ 1971ರ ಆ ಬ್ಲಾಕ್‌ಔಟ್ ದಿನಗಳ ಬಗ್ಗೆ ಮಂಜುನಾಥ ಅಡಿಗ ಜಿ ಎಸ್ ಅವರು ನೆನಪು ಮಾಡಿಕೊಂಡಿದ್ದಾರೆ.

Mumbai, May 06 (ANI): Railway Protection Force (RPF) personnel with its sniffer dogs and other gadgets and equipment conduct a mock drill rehearsal at Chhatrapati Shivaji Maharaj Terminus (CSMT), in Mumbai on Tuesday. (ANI Photo)
Mumbai, May 06 (ANI): Railway Protection Force (RPF) personnel with its sniffer dogs and other gadgets and equipment conduct a mock drill rehearsal at Chhatrapati Shivaji Maharaj Terminus (CSMT), in Mumbai on Tuesday. (ANI Photo) (ANI- X)

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ರಾಜತಾಂತ್ರಿಕ ಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ಏಟಿನ ಮೇಲೆ ಏಟು ನೀಡಿದ್ದರೂ, ಯಾವುದೇ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ದೇಶದಲ್ಲಿ ಸನ್ನದ್ಧತೆಯನ್ನು ಪರಿಶೀಲಿಸಲು ಅಣಕು ಯುದ್ಧ ಅಭ್ಯಾಸಗಳನ್ನು ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಹೀಗಾಗಿ ಮೇ 7ರ ಬುಧವಾರದಂದು ಬೆಂಗಳೂರು ಸಹಿತ ದೇಶಾದ್ಯಂತ ಆಯ್ದ 244 ಜಿಲ್ಲೆಗಳಲ್ಲಿ ಈ ಅಭ್ಯಾಸಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ 1971ರ ಬ್ಲಾಕ್‌ಔಟ್ ದಿನಗಳ ಬಗ್ಗೆ ಮಂಜುನಾಥ ಅಡಿಗ ಜಿ ಎಸ್ ಅವರು ಫೇಸ್‌ಬುಕ್‌ನಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ನೆನಪಿನ ಬುತ್ತಿಯ ಯಥಾವತ್ ರೂಪ ಇಲ್ಲಿದೆ.

Madhu Iyengar ಅವರ ಪೋಸ್ಟಿನಲ್ಲಿ ಆವರದ್ದೇ ಪ್ರತಿಕ್ರಿಯೆಯಲ್ಲಿ Ravi Shankar ಅವರಲ್ಲಿ ಕೋರಿಕೊಂಡಿದ್ದರು "ಒಂದಷ್ಟು ಆ ಅನುಭವಗಳ (1971ರ ಬ್ಲಾಕ್‌ಔಟ್ ದಿನಗಳ) ಬಗ್ಗೆ ಬರೆಯಲಿಕ್ಕೆ. ಅದರ ಸ್ಪೂರ್ತಿ ಇಂದಾಗಿ ಆ ದಿನಗಳ ನನ್ನ ಅನುಭವದ ಬಗೆಗೆ ಬರೆಯುತ್ತೇನೆ. 1964ರ ನಂತರ ಜನಿಸಿದವರಿಗೆ ಆ ದಿನಗಳ ಬಗೆಗೆ ಅರಿವಿರಲಾರದು, ಅವರುಗಳ ತಿಳುವಳಿಕೆಗಾಗಿ ಮತ್ತು ನಮ್ಮ ಹಾಗು ನಮ್ಮ ಹಿಂದಿನವರ ನೆನಪುಗಳ ಪುನರುಜ್ಜೀವನಕ್ಕಾಗಿ:

1971 - 72ರ ಬಾಂಗ್ಲಾ ಜನರ (ಅಂದಿನ ದಿನದಲ್ಲಿ ಅದು ಪೂರ್ವ ಪಾಕಿಸ್ತಾನ ಎಂಬ ಹೆಸರಲ್ಲಿ ಪಶ್ಚಿಮ ಪಾಕಿಸ್ತಾನದ ಕಪಿಮುಷ್ಟಿಯಲ್ಲಿದ್ದಿತ್ತು) ವಿಮೋಚನ ಹೋರಾಟಕ್ಕೆ ಬೆಂಬಲವಾಗಿ ಭಾರತ ಸೈನಿಕ ಕಾರ್ಯಾಚರಣೆಯಲ್ಲಿ ತೊಡಗಿದಾಗ ಪಶ್ಚಿಮ ಪಾಕಿಸ್ತಾನ (ಇಂದಿನ ಪಾಪೀ ಪಾಕಿಸ್ತಾನ) ಭಾರತ ಮೇಲೆ ಯುದ್ಧಕ್ಕೆ ತೊಡಗಿತು, ಭಾರತದ ಪಶ್ಚಿಮ ಸರಹದ್ದುಗಳಲ್ಲಿ.

ಭಾರತಕ್ಕೆ ರಷ್ಯಾದ ನೆರವಿದ್ದುದರಿಂದ ಸಹಜವಾಗಿ ಅಮೇರಿಕಾ ಪಾಕೀಗಳಿಗೆ ಬೆಂಬಲಿಸಿದ್ದಿತ್ತು. ಅದಕ್ಕಾಗಿ ತನ್ನ ಬಲಿಷ್ಠ ನೌಕಾಪಡೆಯನ್ನ ಅರಬ್ಬೀ ಸಮುದ್ರದಲ್ಲೂ ಬಂಗಾಲ ಕೊಲ್ಲಿಯಲ್ಲಿಯೂ ನಿಯೋಜಿಸಲು ಉದ್ಯುಕ್ತವಾಯಿತು.

ಇದರಿಂದಾಗಿ ಇಡಿಯ ಉಪಖಂಡದಲ್ಲಿ ಭಾರತ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಮುಖ ನಗರಗಳಲ್ಲಿ ಬ್ಲಾಕ್‌ಔಟ್ ಮಾಡಿಸಬೇಕಾಯಿತು. ಏಕೆಂದರೆ ಪಾಕಿಸ್ತಾನದ್ದೋ ಅಥವಾ ಅಮೇರಿಕಾದ್ದೋ ವಿಮಾನಗಳು ಭಾರತದ ಯಾವುದೇ ಭಾಗದಲ್ಲಿ ದಾಳಿ ಮಾಡುವ ಸಾಧ್ಯತೆ ಇದ್ದಿತ್ತು. ಹಗಲಿನಲ್ಲಿ ನಮ್ಮ ಸೇನೆ ಭಾರತದ ಏರ್‌ಸ್ಪೇಸನ್ನು ಎಷ್ಟೇ ಎಚ್ಚರಿಕೆಯಿಂದ ಕಾಯ್ದುಕೊಂಡರೂ ಕತ್ತಲಿನಲ್ಲಿ ಕೆಳಸ್ತರದಲ್ಲಿ ಸರ್ರನೆರಗಿ ಬಾಂಬಿಸಿ ಹೋಗುವ ಸಾಧ್ಯತೆ ಇದ್ದಿತ್ತು.

ಆದ ಕಾರಣ ಬ್ಲಾಕ್‌ಔಟ್ ಎಂಬ ಮುಂಜಾಗ್ರತಾ ಕ್ರಮವನ್ನು ಭಾರತ ಕೈಗೊಂಡು ಸಾರ್ವಜನಿಕರು ಅದರಲ್ಲಿ ಒಳಗೊಳ್ಳುವಂತೆ ಮಾಡಿತು.

ಆ ಕ್ರಮಗಳೆಂದರೆ

೧. ಎಲ್ಲ ತರಹದ ವಾಹನಗಳ ಹೆಡ್‌ಲೈಟ್‌ಗಳ ಗಾಜುಗಳ ನಡುವಿನ ಒಂದು ಇಂಚಿನ ಸುತ್ತಳತೆಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಭಾಗಗಳಿಗೆ ಕಪ್ಪು ಬಣ್ಣ ಬಳಿಯಬೇಕು. ನಡಯವಿನ ಆ ಸಣ್ಣ ಕಿಂಡಿಯ ಭಾಗದ ಬೆಳಕಿನಲ್ಲಿಯೇ ವಾಹನಗಳು ಸಾಗ ಬೇಕು. ಪಾರ್ಕಿಂಗ್ ಇತ್ಯಾದಿ ಲೈಟುಗಳನ್ನು ಉಪಯೋಗಿಸಬಾರದು.

೨.ಎಲ್ಲ ಮನೆಗಳು ತಮ್ಮ ಕಿಟಕಿ/ಬಾಗಿಲುಗಳ ಗಾಜಿನ ಭಾಗಗಳನ್ನು ಕಪ್ಪು ಬಟ್ಟೆ ಅಥವಾ ಕಾಗದದ ಸಹಾಯದಿಂದ ಮುಚ್ಚಿ ಮನೆಯೊಳಗಿನ ಬೆಳಕು ಹೊರಚಲ್ಲದಂತೆ ನೋಡಿಕೊಳ್ಳಬೇಕು.

೩.ಕತ್ತಲಾದ ಬಳಿಕ ಅನಿವಾರ್ಯ ಕಾರಣವಿಲ್ಲದಿದ್ದಲ್ಲಿ‌ ಸಾರ್ವಜನಿಕರು ಮನೆಗಳಿಂದ ಹೊರಕ್ಕೆ ಬರಬಾರದು.

೪.ಸೈರನ್ನಿನ ಶಬ್ದ ಕೇಳಿದ ತಕ್ಷಣ ವಾಹನಗಳನ್ನು ಬದಿಗೆ ಸರಿಸಿ ನಿಲ್ಲಿಸಬೆಕು, ಮನೆಗಳ ದೀಪಗಳನ್ನು ಆರಿಸಬೇಕು ಮತ್ತು ಮನೆಯಲ್ಲಿರುವ ಕುರ್ಚಿ, ಮೇಜು ಮಂಚ ಇತ್ಯಾದಿಗಳ ಕೆಳಗೆ ಅಡಗಿರಬೇಕು. ಪರಿಸ್ಥಿತಿ ಸರಿ ಹೋದ ನಂತರದಲ್ಲಿ ಬರುವ ಸೈರನ್ನಿನವರೆವಿಗೆ ಇವುಗಳನ್ನು ಪಾಲಿಸಲೇಬೇಕು.

ಇವು ಆಗ ಸಾರ್ವಜನಿಕರು ಪಾಲಿಸಲೇಬೇಕಾಗಿದ್ದ ಸೂಚನೆಗಳಾಗಿದ್ದುವು.

ಆ ಸೂಚನೆಯ ಪಾಲನೆ ಹೇಗಿತ್ತೆಂದರೆ ನನ್ನಣ್ಣ ಪೇಪರಿನ ಹಾಳೆಯೊಂದಕ್ಕೆ ಕಪ್ಪು ಮಸಿ ಬಳಿದು ನಮ್ಮ ಅಟ್ಲಾಸ್ ಸೈಕಲ್ಲಿನ ಡೈನಮೋ ದೀಪಕ್ಕೂ ಅಂಟಿಸಿದ್ದ !!

ರಾತ್ರಿಗಳಲ್ಲಿ ಆಗಾಗ್ಗೆ ಸೈರನ್ ಕೇಳಿಸುತ್ತಿತ್ತು, ಅದರ ಹಿಂದೆಯೇ ಭೋರ್ಗರೆಯುವ ಶಬ್ಧ ಮಾಡುತ್ತಾ ಯುದ್ಧ ವಿಮಾನ ಝೂಂಯ್ಯನೆ ಹಾರಿ ಬರುತ್ತಿದ್ದಿತ್ತು. ನಮಗೆ ಕುತೂಹಲ, ಬೆಂಗಳೂರಲ್ಲಿ ಎಲ್ಲಿ ಬಾಂಬ್ ಬಿದ್ದಿರಬಹುದು ಎಂದು. ಕೂಡಲೇ ಕತ್ತಲಿನಲ್ಲಿ ತಡಕಾಡುತ್ತಾ ರೇಡಿಯೋ ಆನ್ ಮಾಡಿ ಆಕಾಶವಾಣಿ, ಬೆಂಗಳೂರನ್ನ ಟ್ಯೂನ್ ಮಾಡಿ ಸಣ್ಣ ದನಿಯಲ್ಲಿ ಇರಿಸಿ ಕಿವಿ ಹಚ್ಚಿ ಬಾಂಬಿನ ಸಮಾಚಾರ ಬರಬಹುದೇನೋ ಎಂದು ನೋಡುವಷ್ಟರಲ್ಲಿ ಎರಡನೆಯ ಸೈರನ್. ಸಧ್ಯ ಅಮೇರಿಕ ಬಾಂಬ್ ಹಾಕಲಿಲ್ಲ, ಅದು ಅಮೇರಿಕದ ವಿಮಾನವಲ್ಲ, ಪಾಕಿಸ್ತಾನದ್ದಿರಬೇಕು ಅದಕ್ಕೇ ಆ ವಿಮಾನಕ್ಕೆ ಬೆಂಗಳೂರು ಕಾಣಿಸಲಿಲ್ಲ !

ತಕ್ಷಣವೇ ಮನೆಯಿಂದ ಹೊರ ಬಂದು ಆಕಾಶದತ್ತ ಕೈ ತೂರಿ "ಪಾಕೀಸ್ತಾನ್, ನೀ ಜುಟ್ಟು ಪೀಕೇಸ್ತಾನ್" ಎಂದು ಕಿರುಚುತ್ತಿದ್ದೆವು; ಅಲ್ಲ, ಅರಚುತ್ತಿದ್ದೆವು. ಜತೆಯಲ್ಲಿ ಬೋಲೋ ಭಾರತ್ ಮಾತಾಕೀ ಜೈ ಎಂಬ ಘೋಷಣೆ.

ನಂತರದ ದಿನಗಳಲ್ಲಿ ಆದು ನ್ಯಾಟ್ Knat ವಿಮಾನ. ನಮ್ಮದೇ ನೆಲದ್ದು ಮತ್ತು HAL ವಿಮಾನ ನಿಲ್ದಾಣದಿಂದ ಅಭ್ಯಾಸದ ಹಾರಾಟ ನೆಡೆಸುತ್ತಿದ್ದಿತ್ತು. ಸ್ವಾಮಿ ಕಾರ್ಯ, ಸ್ವ ಕಾರ್ಯ ಎಂಬಂತೆ ಆ ಕ್ಷಣವೇ ಸೈರನ್ನನ್ನೂ ಮೊಳಗಿಸಲಾಗುತ್ತಿದ್ದಿತ್ತು. ನಮ್ಮ ಅರಚಾಟದ ಪಾಕಿಸ್ತಾನ್, ನೀ ಜುಟ್ಟು ಪೀಕೇಸ್ತಾನ್ ಎಂಬುದರಲ್ಲಿನ ಜುಟ್ಟು, ಜುಟ್ಟಲ್ಲ, ಜೆಟ್ ವಿಮಾನಕ್ಕೆ ಹೇಳುತ್ತಿದ್ದುದಾಗಿತ್ತು ಎಂಬ ಸತ್ಯ. ಇದರೊಡನೆ ಮತ್ತೊಂದು ಅರಚಾಟವನ್ನೂ ಮಾಡುತ್ತಿದ್ದೆವು.

"ಸಾಬರ್ ಜುಟ್

ನಿನ್ ಬಾಲ ಕಟ್

ನಮ್ದೂ ನ್ಯಾಟ್"

ಸೈಬರ್ ಜೆಟ್ ಎಂಬುದು ನಮಗೆ ಸಾಬರ್ ಜುಟ್ ಆಗಿತ್ತು.

ನಮ್ಮ ತಂದೆಯವರು ಹೋಟೇಲನ್ನು 6 ಗಂಟೆಗೇ ಮುಚ್ಚಿಸಿ ಮನೆಗೆ ಬರುತ್ತಿದ್ದರು, ಸಿನೇಮಾ ಟೆಂಟುಗಳು ಸಂಜೆ ಹಾಗು ರಾತ್ರಿಗಳ ದೇಖಾವೆಗಳನ್ನು (shows) ನೆಡೆಸುತ್ತಿರಲ್ಲಿಲ್ಲ, ಮಾರ್ನಿಂಗ್ ಷೋ ಎಂಬ ಬೆಳಗಿನ 9:30 ರ ದೇಖಾವೆಯನ್ನು ಪ್ರಾರಂಭಿಸಿದವು. ಅದು ಆ ಯುದ್ಧದ ನಂತರ ಹಾಗೆಯೇ ಮುಂದುವರೆಯಿತು. ಸರಿ ಸುಮಾರು ಮೂರೂವರೆ ತಿಂಗಳುಗಳವರೆವಿಗೆ ಆ ಬ್ಲಾಕ್‌ಔಟ್ ಮುಂದುವರೆಯಿತು. ಇದು ಅಂತರೀಕ ತುರ್ತುಪರಿಸ್ಥಿತಿಯ ಮೊದಲ ಭಾಗವಾಗಿದ್ದಿತ್ತು. ಬ್ಲಾಕ್‌ಔಟ್ ನಿಂತರು ಆ internal emergencyಯನ್ನು ಹಿಂಪಡೆದಿರಲಿಲ್ಲ. ಬಹುಶಃ ಆಗ ಜನ ಭಾಗಶಃ ಅಂತರೀಕ ತುರ್ತು ಪರಿಸ್ಥಿತಿಗೆ ತೋರಿದ ಸಂಪೂರ್ಣ ಸಹಕಾರವನ್ನು ಕಂಡು ಮತ್ತು ಭಾರತಕ್ಕೆ ಸಿಕ್ಕ ಜಯದಿಂದ ಉತ್ತೇಜಿತಳಾದ ಇಂದಿರಾ ಗಾಂಧಿ ಮತ್ತವಳ ಪಟಾಲಂ 1975ರಲ್ಲಿ ಆ ಭಾಗಶಃ ಇದ್ದುದನ್ನು ಸಂಪೂರ್ಣವಾದ ಅಂತರಿಕ ತುರ್ತುಪರಿಸ್ಥಿತಿಯನ್ನಾಗಿ ಮಾಡುವ ಧೈರ್ಯ ತೋರಿದರು.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in