ಚಪ್ಪರಿಸಿ ತಿನ್ನುವ ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ; ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧ
ಕನ್ನಡ ಸುದ್ದಿ  /  ಕರ್ನಾಟಕ  /  ಚಪ್ಪರಿಸಿ ತಿನ್ನುವ ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ; ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧ

ಚಪ್ಪರಿಸಿ ತಿನ್ನುವ ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ; ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧ

ಮೋಮೊಸ್‌, ಸ್ಯಾಂಡ್‌ವಿಚ್‌, ಸಲಾಡ್‌, ಕೇಕ್‌, ಫಿಂಗರ್‌ಚಿಪ್ಸ್‌ ಸೇರಿದಂತೆ ವಿವಿಧ ಆಹಾರಗಳನ್ನು ಅದ್ದಿ ತಿನ್ನಲು ಬಯಸುವ ಮೇಯನೇಸ್‌ಗೆ ತಮಿಳುನಾಡು ನಿಷೇಧ ಹೇರಿದೆ. ಕೇರಳ, ಆಂಧ್ರ, ತೆಲಂಗಾಣದಲ್ಲಿಯೂ ಈ ಹಿಂದೆಯೇ ನಿಷೇಧ ಹೇರಲಾಗಿದೆ. ಆದರೆ, ಕರ್ನಾಟಕ ಅತಿ ಅಪಾಯಕಾರಿ ಆಹಾರ "ಮೇಯನೇಸ್‌" ಅನ್ನು ನಿಷೇಧಿಸಲು ಮೀನಮೇಷ ಎಣಿಸುತ್ತಿದೆ.

ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ
ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ

ಬೆಂಗಳೂರು: ತಮಿಳುನಾಡಿನಲ್ಲಿ ಹಸಿ ಮೊಟ್ಟೆಗಳಿಂದ ತಯಾರಿಸುವ ಮೇಯನೇಸ್‌ ಅನ್ನು ಅತ್ಯಧಿಕ ಅಪಾಯಕಾರಿ ಆಹಾರ ಎಂದು ವರ್ಗೀಕರಿಸಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಸಾಲ್ಮೋನೆಲ್ಲಾ ಸೋಂಕಿನ ಅಪಾಯವಿರುವ ಕಾರಣ ಈ ನಿಷೇಧ ಮಾಡಲಾಗಿದೆ. ತೆಲಂಗಾಣ ಸರಕಾರವು ಅಕ್ಟೋಬರ್‌ 2024ರಲ್ಲಿ ಒಂದು ವರ್ಷಗಳ ಕಾಲ ಹಸಿಮೊಟ್ಟೆಯ ಮೇಯನೇಸ್‌ ಅನ್ನು ನಿಷೇಧಿಸಿತ್ತು. ತೆಲಂಗಾಣವೂ ಇದೇ ಹಾದಿ ಹಿಡಿದಿತ್ತು. ಕೇರಳ ಸರಕಾರವು 2023ರಲ್ಲಿಯೇ ಮೇಯನೇಸ್‌ ಉತ್ಪಾದನೆ, ಸಂಗ್ರಹ ಮತ್ತು ಮಾರಾಟಕ್ಕೆ ನಿಷೇಧ ಹೇರಿತ್ತು. ಕರ್ನಾಟಕದ ನೆರೆಯ ರಾಜ್ಯಗಳು ಜನರ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮೇಯನೇಸ್‌ಗೆ ನಿಷೇಧ ಹೇರಿವೆ. ಆದರೆ, ಕರ್ನಾಟಕ ಸರಕಾರ ಇನ್ನೂ ಮೇಯನೇಸ್‌ ನಿಷೇಧಕ್ಕೆ ಮುಂದಾಗಿಲ್ಲ. ರಾಜ್ಯದಲ್ಲಿಯೂ ಮೇಯನೇಸ್‌ಗೆ ನಿಷೇಧ ಹೇರಬೇಕೆಂದು ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.

ಯಾಕೆ ಮೇಯನೇಸ್‌ ಬ್ಯಾನ್‌?

ಹಸಿ ಮೊಟ್ಟೆಯ ಮೇಯನೇಸ್ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಇದು ಆಹಾರ ವಿಷ ಅಥವಾ ಫುಡ್‌ ಪಾಯಿಸನ್‌ಗೆ ಕಾರಣವಾಗಬಹುದು. ಇದರ ಸೋಂಕು ರಕ್ತ ಪ್ರವಾಹಕ್ಕೆ ಹರಡಿ ಜೀವಕ್ಕೆ ಅಪಾಯಕಾರಿಯಾಗಬಹುದು. ಹೈದರಾಬಾದ್‌ ಸೇರಿದಂತೆ ವಿವಿಧೆಡೆ ಮೇಯನೇಸ್‌ನಿಂದ ಕಾಯಿಲೆ ಪೀಡಿತರಾಗಿ ಜನರು ಸಾವಿಗೀಡಾದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ, ಇದು ಅತ್ಯಧಿಕ ಅಪಾಯಕಾರಿ ಆಹಾರ ಎಂದು ಪರಿಗಣಿಸಲಾಗಿದೆ.

ತಮಿಳಿನಾಡಿನಲ್ಲಿ ಮೇಯನೇಸ್‌ಗೆ ನಿಷೇಧ

ಹಸಿ ಮೊಟ್ಟೆಗಳಿಂದ ತಯಾರಿಸುವ ಮೇಯನೇಸ್‌ನಿಂದಾಗಿ ಸಾಲ್ಮೊನೆಲ್ಲಾ ಸೋಂಕಿನ ಅಪಾಯ ಹೆಚ್ಚುತ್ತಿರುವ ಕಾರಣದಿಂದಾಗಿ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ಮೇಯನೇಸ್‌ ಬ್ಯಾನ್‌ ಮಾಡಿದೆ. ತಮಿಳುನಾಡಿನಾದ್ಯಂತ ಹಸಿ ಮೊಟ್ಟೆಗಳೊಂದಿಗೆ ಮೇಯನೇಸ್‌ನ 'ತಯಾರಿಕೆ, ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರಾಟ'ವನ್ನು ಎಫ್‌ಡಿಎ ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಸೆಕ್ಷನ್ 30(2)(ಎ) ಅಡಿಯಲ್ಲಿ ಬ್ಯಾನ್‌ ಮಾಡಲಾಗಿದೆ. ಈ ಆದೇಶ ಮುಂದಿನ ಒಂದು ವರ್ಷದವರೆಗೆ ಜಾರಿಯಿರುತ್ತದೆ.

ಕೇರಳದಲ್ಲಿಯೂ ಮೇಯನೇಸ್‌ ಬ್ಯಾನ್‌

ಕೇರಳ ಸರಕಾರವು 2023ರಲ್ಲಿಯೇ ಮೇಯನೇಸ್‌ ತಯಾರಿಕೆ, ಸಂಸ್ಕರಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಮೇಲಿನ ಕಾರಣಗಳ ಜತೆಗೆ ಫುಡ್‌ ಪಾಯಿಸನ್‌ ಹೆಚ್ಚುತ್ತಿರುವುದನ್ನು ಮನಗಂಡು ನಿಷೇಧಿಸಲಾಗಿದೆ.

ಆಂಧ್ರ, ತೆಲಂಗಾಣದಲ್ಲಿಯೂ ನಿಷೇಧ

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಮೇಯನೇಸ್‌ಗೆ ನಿಷೇಧವಿದೆ. ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರ ಸಾವಿಗೆ ಮೇಯನೇಸ್‌ ಕಾರಣವಾದ ಬಳಿಕ 2024ರಲ್ಲಿ ಮೊಮೊಸ್‌ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದರು.

ಮೇಯನೇಸ್‌ ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ?

ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲಿ ಈಗಾಗಲೇ ಮೇಯನೇಸ್‌ಗೆ ನಿಷೇಧ ಹೇರಲಾಗಿದೆ. ಆದರೆ, ಕರ್ನಾಟಕದಲ್ಲಿ ಇದನ್ನು ನಿಷೇಧಿಸಲು ಮೀನಮೇಷ ಎಣಿಸಲಾಗುತ್ತಿದೆ. ಹಲವು ವೈದ್ಯರು, ಆರೋಗ್ಯ ತಜ್ಞರು ಮೇಯನೇಸ್‌ಗೆ ಕರ್ನಾಟಕದಲ್ಲಿಯೂ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ. "ತಮಿಳುನಾಡು ಮೇಯನೇಸ್‌ ನಿಷೇಧಿಸಿರುವ ವಿಚಾರವನ್ನು ಪರಮಾರ್ಶಿಸುತ್ತಿದ್ದೇವೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಕರ್ನಾಟಕ ಎಫ್‌ಡಿಎ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.

ಮೇಯನೇಸ್‌ ಯಾಕೆ ಅಪಾಯಕಾರಿ?

ಮೇಯನೇಸ್ ಅನ್ನು ಹಸಿ ಮೊಟ್ಟೆಗಳಿಂದ ತಯಾರಿಸಲಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದರೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಉಂಟಾಗಬಹುದು. ಮೇಯನೇಸ್ ಹಾಳಾಗಿದ್ದರೆ ಫುಡ್‌ ಪಾಯಿಸನ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಇದರಿಂದ ವಾಂತಿ, ಅತಿಸಾರ ಉಂಟಾಗಬಹುದು. ಕೆಲವೊಂದು ಪ್ರಕರಣಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ಮೋಮೊಸ್‌, ಸ್ಯಾಂಡ್‌ವಿಚ್‌, ಸಲಾಡ್‌, ಕೇಕ್‌, ಫಿಂಗರ್‌ಚಿಪ್ಸ್‌ ಸೇರಿದಂತೆ ವಿವಿಧ ಆಹಾರಗಳನ್ನು ಅದ್ದಿ ತಿನ್ನಲು ಬಹುತೇಕರು ಮೇಯನೇಸ್‌ ಬಳಸುತ್ತಾರೆ. ಬೀದಿಬದಿಯ ತಿಂಡಿಗಳಲ್ಲಿ ಮೇಯನೇಸ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಚಿಕ್ಕ ಮಕ್ಕಳಂತೂ ಮೇಯನೇಸ್‌ನಲ್ಲಿಯೇ ವಿವಿಧ ಆಹಾರ ಸೇವಿಸಲು ಬಯಸುತ್ತಾರೆ. ಕರ್ನಾಟಕ ಸರಕಾರ ಮೇಯನೇಸ್‌ ಬ್ಯಾನ್‌ ಮಾಡುವ ತನಕ ಇದು ಅಪಾಯಕಾರಿ ಅಹಾರ ಎಂಬ ಎಚ್ಚರ ಜನರಲ್ಲಿ ಮೂಡಿಸಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in