ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ

ಮೇಲುಕೋಟೆಯಲ್ಲಿ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ವೈಭವಯುತವಾಗಿ ನೆರವೇರಿದವು.ಮಾಹಿತಿ: ಸೌಮ್ಯ ಸಂತಾನಂ ಮೇಲುಕೋಟೆ

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ  ಮಹೋತ್ಸವ ವೇಳೆ ನಡೆದ ಪೂಜೆ ಹಾಗೂ ಅಲಂಕಾರದ ಕ್ಷಣ.
ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಮಹೋತ್ಸವ ವೇಳೆ ನಡೆದ ಪೂಜೆ ಹಾಗೂ ಅಲಂಕಾರದ ಕ್ಷಣ.

ಮೇಲುಕೋಟೆ : ಚಿತ್ತಿರೈ ವೈಶಾಖಮಾಸದ ಆರಿದ್ರಾನಕ್ಷತ್ರದ ಶುಭದಿನವಾದ ಶುಕ್ರವಾರ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವ ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಮಂಡ್ಯ ಜಿಲ್ಲೆಯ ಬೆಟ್ಟದ ಐತಿಹಾಸಿಕ ತಾಣ ಮೇಲುಕೋಟೆಯಲ್ಲಿ ನೆರವೇರಿತು. ಆಚಾರ್ಯರಿಗೆ ನಡೆದ ಮಂಟಪವಾಹನೋತ್ಸವ ಹಾಗೂ ದ್ವಾದಶಾರಾಧನೆಯ ಮಹಾಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು ತಿರುನಕ್ಷತ್ರದ ದಿನ ಬೆಳಿಗ್ಗೆ 9 ಗಂಟೆಗೆ ರಾಮಾನುಜಾಚಾರ್ಯರಿಗೆ ಪುಷ್ಪಮಂಟಪವಾಹನೋತ್ಸವ ಈಯಲ್ ಶಾತ್ತುಮೊರೆ ನಡೆದವು. ನಂತರ ಪವಿತ್ರ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥತಂದು 11-30 ಗಂಟೆಯಿಂದ ಆಚಾರ್ಯರಿಗೆ ದ್ವಾದಶಾರಾಧನೆಯೊಂದಿಗೆ ಹಾಲು, ಮೊಸರು, ಜೇನು, ಅರಿಷಿಣ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ವೇದಘೋಷ ಮಂಗಳವಾದ್ಯದೊಂದಿಗೆ ಮಹಾಭಿಷೇಕ ನೆರವೇರಿಸಲಾಯಿತು. ಸಂಜೆ ಚೆಲುವನಾರಾಯಣಸ್ವಾಮಿ ಪಾದುಕಾ ಮರ್ಯಾದೆಯೊಂದಿಗೆ ಮಹಾಮಂಗಳಾರತಿಯೊಂದಿಗೆ ಪ್ರಥಮಹಂತದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಮೇಲುಕೋಟೆಯಲ್ಲಿ ಆಚಾರ್ಯರು

ಆಚಾರ್ಯ ರಾಮಾನುಜರು 11ನೇ ಶತಮಾನದಲ್ಲಿ 12 ವರ್ಷಗಳ ಕಾಲ ಮೇಲುಕೋಟೆಯಲ್ಲಿ ನೆಲಸಿ ಕ್ಷೇತ್ರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಭೂವೈಕುಂಠವನ್ನಾಗಿಸಿದ್ದರು. ದೊರೆ ಬಿಟ್ಟಿದೇವನ ರಾಜಾಶ್ರಯಪಡೆದು ದೊರೆಗೆ ವೈಷ್ಣವದೀಕ್ಷೆನೀಡಿ ವಿಷ್ಣುವರ್ಧನ ಎಂದು ನಾಮಕರಣಮಾಡಿದ ನಂತರ ಹೊಯ್ಸಳರ ಆಳ್ವಿಕೆ ಬಲಿಷ್ಠವಾಯಿತು.

ಆಚಾರ್ಯರ ಸಲಹೆಯಂತೆ ವಿಷ್ಣುವರ್ಧನ ಪ್ರತಿವಿಜಯೋತ್ಸವದಲ್ಲೂ ಒಂದೊಂದೆ ನಾರಾಯಣನ ಭವ್ಯದೇಗುಲ ನಿರ್ಮಿಸಿ ಕರ್ನಾಟಕದಲ್ಲಿ ಪಂಚನಾರಾಯಣಸ್ವಾಮಿ ದೇವಾಲಯಗಳ ನಿರ್ಮಾಣದ ಜೊತೆಗೆ ಅಚ್ಚಳಿಯದ ಕರುನಾಡಿನ ಕೀರ್ತಿ ಹೆಚ್ಚಿಸುವ ಕೊಡುಗೆ ನೀಡಿದನು ಎನ್ನುತ್ತದೆ ಇತಿಹಾಸ.

ಹೇಗಿರುತ್ತದೆ ಹತ್ತು ದಿನದ ಉತ್ಸವ

ರಾಮಾನುಜರು ಶ್ರೀರಂಗಂ, ಕಂಚಿ, ತಿರುಮಲೆ ದಿವ್ಯಕ್ಷೇತ್ರಗಳಂತೆ ಮೇಲುಕೋಟೆಗೆ ಸಹ ವಿಶೇಷಸ್ಥಾನವನ್ನು ತಂದುಕೊಟ್ಟರು. ಹೀಗಾಗಿ ಯದುಗಿರಿಯಲ್ಲಿ ರಾಮಾನುಜರ ತಿರುನಕ್ಷತ್ರಮಹೋತ್ಸವ ಕಾರ್ಯಕ್ರಮಗಳನ್ನು ಹತ್ತುದಿನಗಳ ಕಾಲ ವೈಭವದಿಂದ ಆಚರಿಸುತ್ತಾ ಬಂದಿದ್ದು ಹಲವು ವೈವಿಧ್ಯಮಯ ಅಲಂಕಾರಗಳು, ಅಭಿಷೇಕ-ಮಹಾಭಿಷೇಕಗಳು, ಪುಷ್ಪಕೈಂರ್ಯಸೇವೆಗಳು, ವಾಹನೋತ್ಸವಗಳು ಮಹಾರಥೋತ್ಸವ ವೈಭವೋಪೇತವಾಗಿ ನಡೆದವು.

ಸರ್ಕಾರ ಆಚಾರ್ಯ ರಾಮಾನುಜರ ತಿರುನಕ್ಷತ್ರ ಮಹೋತ್ಸವದ ಬಗ್ಗೆ ಯಾವುದೇ ಕಾಳಜಿ ವಹಿಸದೆ ಅನುದಾನ ನೀಡದಿದ್ದರೂ ರಾಮಾನುಜರ ತಿರುನಕ್ಷತ್ರಮಹೋತ್ಸವ ನೇಮಿಸೇವೆಗಳು, ವಿದ್ವಾನ್ಆನಂದಾಳ್ವಾರ್ ಹಾಗೂ ಸ್ಥಾನೀಕರ ಸೇವೆಗಳ ಪರಿಶ್ರಮದಿಂದಾಗಿ ವೈಭವಕ್ಕೆ ಕುಂದಾಗದಂತೆ ನಡೆಯುತ್ತಾ ಬಂದಿದೆ.

ಆಚಾರ್ಯರ ತಿರುನಕ್ಷತ್ರ ಅಂಗವಾಗಿ ದೇವಾಲಯದ ಆವರಣವನ್ನು ತಳಿರುತೋರಣ ಚಪ್ಪರಗಳಿಂದ ಸಿಂಗಾರಮಾಡಲಾಗಿತ್ತು. ಆಚಾರ್ಯರ ಸನ್ನಿಧಿಯ ಮೇಲ್ಬಾಗ ವಿವಿಧ ಹಣ್ಣು ಪುಷ್ಪ ಹಾಗೂ ಲಾವಂಛದ ಅಲಂಕಾರ ಮಾಡಲಾಗಿತ್ತು.

ತಮಿಳು ನಾಡು, ಆಂಧ್ರ ಭಕ್ತರ ದಂಡು

ತಮಿಳುನಾಡು ಆಂದ್ರಪ್ರದೇಶ ಸೇರಿದಂತೆ ನಾಡಿದ ವಿವಿಧ ಭಾಗಗಳಿಂದಲೂ ಸಹಸ್ರಾರು ಭಕ್ತರು ಆಚಾರ್ಯರ ತಿರುನಕ್ಷತ್ರಮಹೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವೈಭವವನ್ನು ಕಣ್ತುಂಬಿಕೊಂಡರು. ಆಚಾರ್ಯರ ರಥೋತ್ಸವ ಮತ್ತು ತಿರುನಕ್ಷತ್ರಮಹೋತ್ಸವದಂದು ಸಾವಿರಾರು ಭಕ್ತರು ಆಗಮಿಸಿ ರಾಮಾನುಜಾಚಾರ್ಯರು ಹಾಗೂ ಚೆಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದಾರೆ.

ತಿರುನಕ್ಷತ್ರ ಮಹೋತ್ಸವದಲ್ಲಿ ರಾಮಾನುಜರಿಗೆ ತಿರುಮಲ-ತಿರುಪತಿ ದೇವಸ್ಥಾನ ಶ್ರೀಪೆರಂಬೂದೂರು, ಸ್ವಾಮಿರಾಮಾನುಜರ ಸನ್ನಿಧಿ ಶ್ರೀರಂಗಂರಂಗನಾಥನ ಪ್ರಸಾದ ಸೇರಿದಂತೆ ಹಲವು ದಿವ್ಯಕ್ಷೇತ್ರಗಳಿಂದ ಮಾಲೆ ಮರ್ಯಾದೆ ಸಹ ಸಮರ್ಪಣೆಯಾಯಿತು.

ಹತ್ತು ದಿನಗಳಕಾಲ ನಡೆದ ತಿರುನಕ್ಷತ್ರ ಮಹೋತ್ಸವದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಜೊತೆಗೆ ಧಾರ್ಮಿಕ ವಿಧಿವಿದಾನಗಳ ಕೈಂಕರ್ಯಗಳನ್ನು ಅರ್ಚಕ ವಿದ್ವಾನ್ ಬಿ.ವಿಆನಂದಾಳ್ವಾರ್, ಆಗಪ್ರವೀಣ ವಿದ್ವಾನ್ಭಾ.ವಂ. ರಾಮಪ್ರಿಯ ಸಹೋದರರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಇವರೊಡನೆ ಕೈಂಕರ್ಯಪರರು, ಸ್ಥಾನೀಕರು ನೇಮೀಸೇವೆಗಳನ್ನು ಅನೂಚಾನ ಸಂಪ್ರದಾಯದಂತೆ ನೆರವೇರಿಸಿದರು.

ಮೇಲುಕೋಟೆ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾರ್ಗದರ್ಶನದಲ್ಲಿ ಪಾರುತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಪರಿಚಾರಕ ಎಂ.ಎನ್ ಪಾರ್ಥಸಾರಥಿ ಉತ್ಸವಗಳ ಯಶಸ್ಸಿಗೆ ಕಾಳಜಿವಹಿಸಿದ ಪರಿಣಾಮ ಬಂಡೀಕಾರರು, ಶ್ರೀಪಾದದವರು ಸಿಬ್ಬಂದಿಯ ಪರಿಶ್ರಮದ ಕಾರಣ ರಾಮಾನುಜರ ತಿರುನಕ್ಷತ್ರ ಮಹೋತ್ಸವದ ಉತ್ಸವಗಳು ವೈಭವಯುತವಾಗಿ ನೆರವೇರಿತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.